ನಿದ್ದೆಗೆ ಜಾರಿದ ಚಾಲಕ: ಮುಧೋಳದಲ್ಲಿ ಮೂವರು ಸ್ಥಳದಲ್ಲೇ ಸಾವು
ಬಾಗಲಕೋಟೆ, ಸೆಪ್ಟೆಂಬರ್.08: ಟ್ರಕ್, ಓಮಿನಿ ವ್ಯಾನ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ವ್ಯಾನ್ ನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಇಂದು ಶನಿವಾರ ನಡೆದಿದೆ.
ಓಮಿನಿ ವ್ಯಾನ್ ಗೋವಾದಿಂದ ವಿಜಯಪುರಕ್ಕೆ ಹೊರಟಿತ್ತು. ಈ ಸಮಯದಲ್ಲಿ ವ್ಯಾನ್ ಚಾಲಕ ನಿದ್ದೆಗೆ ಜಾರಿದಾಗ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃತರು ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದ ಕಾಶಿಂಸಾಬ ಮುಜಾವರ(42), ಅಫ್ರಿನಾ ಕಾಶಿಸಾಬ ಮುಜಾವರ (35), ಶಬಾನ ನೂರ ಅಹಮದ್(38) ಎಂದು ಗುರುತಿಸಲಾಗಿದೆ.
ಇವರೆಲ್ಲಾ ದುಡಿಯಲು ಗೋವಾಕ್ಕೆ ಹೋಗಿದ್ದರು. ಮರಳಿ ಊರಿಗೆ ಬರುವಾಗ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ರಿಷ್ಯಂತ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಭೀಕರ ಅಪಘಾತ
ಮತ್ತೊಂದು ಘಟನೆಯಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದ ಬೆಂಗಳೂರಿನ ಯುವಕರು ದಾವಣಗೆರೆ ಸಮೀಪ ಅಪಘಾತಕ್ಕೆ ಈಡಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಆರು ಜನ ಬೆಂಗಳೂರಿನ ಯುವಕರು ಗೋಕರ್ಣಕ್ಕೆ ಪ್ರವಾಸಕ್ಕೆಂದು ಕಾರಿನಲ್ಲಿ ತೆರಳುತ್ತಿದ್ದರು.
ಬೆಳಗ್ಗೆ ಸಮಯ ಹರಿಹರ ತಾಲ್ಲೂಕಿನ ಹನಗವಾಡಿ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃಪಟ್ಟಿದ್ದರೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಮೃತರೆಲ್ಲರೂ ಬೆಂಗಳೂರಿನ ಚಾಮರಾಜಪೇಟೆಯ ಡಿಟಿಡಿಸಿ ಕೊರಿಯರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಮೃತರನ್ನು ವಿನಯ್ (27) , ಅಜಯ್ (32) , ವಿನಯ್ ಕುಮಾರ್ (30) ಹಾಗೂ ಸಿದ್ದಪ್ಪ (28) ಎಂದು ಗುರುತಿಸಲಾಗಿದೆ.












Click it and Unblock the Notifications