ಬಾಗಲಕೋಟೆ; ರಾಚಯ್ಯ ಹಿರೇಮಠ, ಅನಂತ ಕುಲಕರ್ಣಿಗೆ ರಾಜ್ಯೋತ್ಸವ ಪ್ರಶಸ್ತಿ
ಬಾಗಲಕೋಟೆ, ಅಕ್ಟೋಬರ್ 31: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಪ್ರತಿ ವರ್ಷ ರಾಜ್ಯ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ. ಭಾನುವಾರ 2022-23ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಪ್ರಕಟಿಸಿದ್ದು, 67 ಮಂದಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಸಾಹಿತ್ಯ, ಜಾನಪದ, ಸಮಾಜ ಸೇವೆ, ವಿಜ್ಞಾನ ಕಲೆ, ಸಿನಿಮಾ, ಕ್ರೀಡೆ ಸೇರಿದಂತೆ ಹತ್ತಾರು ವಿಭಾಗದಲ್ಲಿ ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬಾಗಲಕೋಟೆಯಿಂದಲೂ ಈ ಪ್ರತಿಷ್ಠಿತ ಗೌರಕ್ಕೆ ಇಬ್ಬರು ಸಾಧಕರು ಪಾತ್ರರಾಗಿದ್ದಾರೆ. ಜಾನಪದ ವಿಭಾಗದಲ್ಲಿ ರಾಚಯ್ಯ ಹಿರೇಮಠ ಹಾಗೂ ಸಂಗೀತ ಕ್ಷೇತ್ರದಲ್ಲಿ ಅನಂತ ಕುಲಕರ್ಣಿಗೆ 2022ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಮೈಸೂರಿನ ಪ್ರೊ.ಕೃಷ್ಣೇಗೌಡ, ಡಿ.ಮಾದೇಗೌಡಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ರಾಚಯ್ಯ ಹಿರೇಮಠ; ರನ್ನ ಬೆಳಗಲಿಯ ಶ್ರೇಷ್ಠ ಕಲಾವಿದ ರಾಚಯ್ಯ ರುದ್ರಯ್ಯ ಹಿರೇಮಠ 1938 ರಲ್ಲಿ ಜನಿಸಿದರು. ಶಾಲಾ ಹಂತದಲ್ಲೇ ಮನಸಿಲ್ಲದ ಮದುವೆ , ಬ್ಲಾಕ್ ಮಾರ್ಕೆಟ್, ವಶಿಷ್ಠ ವಿಶ್ವಾಮಿತ್ರರ ಸಂವಾದ ಎಂಬ ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ಬಾಲ ಕಲಾವಿದನಾಗಿ ಮೆಚ್ಚುಗೆ ಪಡೆದಿದ್ದರು. ನಂತರ ರುದ್ರಪ್ಪ ಮಾಸ್ತರ ಕಮತಗಿ ಅವರಲ್ಲಿ ನಾಟ್ಯ ಕಲೆಯ ವಿದ್ಯಾಭ್ಯಾಸ ಮಾಡಿದ ಇವರು, ಮಾತಂಗ ಕನ್ಯ, ಪ್ರೇಮಬಂಧನ , ಸೌಭಾಗ್ಯಲಕ್ಷ್ಮಿ, ಅತ್ತಿ ಅಳಿಯ, ರತ್ನ ಮಾಂಗಲ್ಯ , ವಿಷಮ ಸಂಸಾರ ಸಾಮಾಜಿಕ ಮುಂತಾದ ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
1968ರಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಪ್ರದರ್ಶನಗೊಂಡ ಹಳ್ಳಿಯಿಂದ ದಿಲ್ಲಿಯವರೆಗೆ ಎಂಬ ಕ್ರಾಂತಿಕಾರಕ ನಾಟಕದಲ್ಲಿ ಕುತುಬುದ್ದಿನನ ಹಾಸ್ಯ ಪಾತ್ರ ನಿರ್ವಹಿಸಿ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪಡೆದಿದ್ದಾರೆ. ಇವರ ಹಾಸ್ಯಕಲೆ ಮೆಚ್ಚಿ ಬೆಂಗಳೂರಿನ ಅಶ್ವಿನಿ ಕ್ಯಾಸೆಟ್ ಕಂಪನಿಯವರು ಇವರ ನಾಟಕಗಳನ್ನು ಧ್ವನಿ ಸುರಳಿ ಮಾಡಿ ರಾಜ್ಯಾದ್ಯಂತ ಪ್ರಸಾರ ಮಾಡಿದ್ದಲ್ಲದೇ, ಇವರಿಗೆ ಹಾಸ್ಯ ರತ್ನ, ಹಾಸ್ಯ ಸಾಗರ ಎಂಬ ಬಿರುದು ನೀಡಿ ಗೌರವಿಸಿದ್ದು ಜಾನಪದ ಕ್ಷೇತ್ರದಲ್ಲಿನ ಇವರ ಸಾಧನೆ ಗುರುತಿಸಿ ಸದ್ಯ ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಗೌರವಿಸಿದೆ.
ಅನಂತ ಕುಲಕರ್ಣಿ; ಅನಂತ ಕುಲಕರ್ಣಿ ಅವರು ಬಾಗಲಕೋಟೆಯ ಜನಿಸಿದ್ದು, 1957 ರಮೇ 1 ರ೦ದು ಬಿಎ ಪದವಿಧರರಾಗಿರುವ ಇವರು ಧಾರವಾಡ ಆಕಾಶವಾಣಿಯ ಎ ಶ್ರೇಣಿಯ ಕಲಾವಿದರು. ಕಳೆದ 42 ವರ್ಷಗಳಿಂದ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಅನಂತ ಕುಲಕರ್ಣಿ ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ನೀಡಿ ಮೆಚ್ಚುಗೆ ಪಡೆದಿದ್ದಾರೆ.
ಸಂಗೀತ ಭಾರತಿ , ಹರಿದಾಸ ಸಂಪದ ಟ್ರಸ್ಟ್, ವಾಸುದೇವ ವಿನೋದಿನಿ ನಾಟ್ಯ ಸಭೆ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಇರುವ ಅವರು ಸಿಡಿ ಹಾಗೂ ಧ್ವನಿ ಸುರುಳಿಗಳನ್ನು ದಾಸ ಸಾಹಿತ್ಯದ ಮೂಲಕ ಪರಿಚಯಿಸಿದ್ದು ಅದರಲ್ಲೂ ಭಾಗ್ಯದ ಲಕ್ಷ್ಮೀ ಬಾರಮ್ಮ, ದಾಸ ತರಂಗ , ಹರಿಯ ಸ್ತುತಿ , ಹರಿಕಥಾಮೃತಕ್ಕೆ ಸಂಬಂಧಿಸಿದಂತೆ 16 ಧ್ವನಿ ಸುರುಳಿಗಳನ್ನು ಹೊರತಂದಿದ್ದಾರೆ.
ಪ್ರಸನ್ನ ವೆಂಕಟದಾಸರ ಪ್ರಶಸ್ತಿ, ಪೂರ್ಣಪ್ರಜ್ಞಾ ಪ್ರಶಸ್ತಿ, ರಂಗವಿಠಲ ಪ್ರಶಸ್ತಿ, ಗದುಗಿನ ವೀರೇಶ್ವರ ಪುಣ್ಯಾಶ್ರಮ ನೀಡುವ ಹರಿದಾಸ ಸಂಗೀತ ಬ್ರಹ್ಮ ಪ್ರಶಸ್ತಿಯನ್ನು ಪಡೆದಿದ್ದು ಅದರಲ್ಲಿಯೂ ಹಾಲು ಕುಡಿಯೋ ಗೋವಿಂದ ಇವರ ಧ್ವನಿಸುರುಳಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸಂಗೀತದಲ್ಲಿನ ಇವರ ಸಾಧನೆ ಗುರುತಿಸಿ ಸದ್ಯ ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಗೌರವಿಸಿದೆ.