ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿಯಿಂದ ಮೆಚ್ಚುಗೆ ಪಡೆದ ಬಾಗಲಕೋಟೆ ಕೆರೆ
ಬಾಗಲಕೋಟೆ, ಆಗಸ್ಟ್ 29: ಕೇಂದ್ರ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಅಮೃತ ಸರೋವರ ಯೋಜನೆ ಅಡಿಯಲ್ಲಿ ಬಾಗಲಕೋಟೆ ಜಿಲ್ಲೆಯ ಬಿಲ್ ಕೆರೂರು ಗ್ರಾಮದಲ್ಲಿ ಆಕರ್ಷಕ ಕೆರೆ ನಿರ್ಮಾಣವಾಗಿದ್ದು, ಮನ್ ಕಿ ಬಾತ್ ನಲ್ಲಿ ಪಿಎಂ ಮೋದಿ ಈ ಕೆರೆಯ ಬಗ್ಗೆ ಪ್ರಸ್ತಾಪಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವ್ರ ಕನಸಿನ ಯೋಜನೆ. 75ನೇ ವರ್ಷದ ಅಮೃತ ಮಹೋತ್ಸದ ಹಿನ್ನೆಲೆ ಪ್ರತಿ ಜಿಲ್ಲೆಯಲ್ಲಿ75 ಕೆರೆಗಳನ್ನು ಅಮೃತ ಸರೋವರ ಯೋಜನೆ ರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿಯೂ ಹಲವು ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಅದರಲ್ಲಿ ಜಿಲ್ಲೆಯ ಬಿಲ್ ಕೆರೂರು ಗ್ರಾಮದ ಕೆರೆ ಪಿಎಂ ಮೋದಿ ಗಮನ ಸೆಳೆದಿದೆ. ಭಾನುವಾರ ನಡೆದ ಮನ್ ಕಿ ಬಾತ್ ಬಾಗಲಕೋಟೆ ಕೆರೆಯನ್ನು ಹಾಡಿ ಹೊಗಳಿದ್ದಾರೆ.
ಅಮೃತ್ ಸರೋವರ ಅಭಿಯಾನ ಕರ್ನಾಟಕದಲ್ಲಿ ತ್ವರಿತ ಗತಿಯಲ್ಲಿ ಮುನ್ನುಗ್ಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಬಿಲ್ ಕೆರೂರು ಗ್ರಾಮದ ಜನರು ಅತೀ ಸುಂದರವಾದ ಅಮೃತ ಸರೋವರ ನಿರ್ಮಿಸಿದ್ದಾರೆ. ಇಲ್ಲಿನ ಜನ ನೀರಿಗಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಅಲ್ಲದೇ ನೀರಿನ ಅಭಾವದಿಂದ ತಮ್ಮ ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಅಮೃತ ಮಹೋತ್ಸವ ಯೋಜನೆಯಿಂದ ಬಿಲ್ ಕೆರೂರು ಗ್ರಾಮಸ್ಥರು ತಮ್ಮ ನೀರಿನ ಸಮಸ್ಯೆಯನ್ನು ನೀಗಿಸಿಕೊಂಡಿದ್ದಾರೆ ಎಂದು ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

40 ಲಕ್ಷ ವೆಚ್ಚದಲ್ಲಿ ಕೆರೆ ಅಭಿವೃದ್ಧಿ
ಇದೀಗ ಈ ಕೆರೆ ಅಭಿವೃದ್ಧಿ ಮೋದಿಯ ಶ್ಲಾಘಿಸಿದ್ದು ನಿಜಕ್ಕೂ ಈ ಭಾಗದ ಜನರ ಖುಷಿಗೆ ಕಾರಣವಾಗಿದೆ. ಹೂಳು ತುಂಬಿ ಕಾಣೆಯಾಗಿದ್ದ ಕೆರೆಯನ್ನು ಗುರುತಿಸಿ 1 ಎಕರೆ 23 ಗುಂಟೆ ಜಾಗದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿದೆ. ಒಟ್ಟು 28 ಲಕ್ಷ ರೂ ವೆಚ್ಚದಕ್ಕು ಎನ್ಆರ್ಇಜಿ ಮೂಲಕ, ದಿನಕ್ಕೆ 50 ಕಾರ್ಮಿಕರು, ಸುಮಾರು ಮೂರು ತಿಂಗವರೆಗೆ ಈ ಕೆರೆ ಕಾರ್ಯದಲ್ಲಿ ಬೆವರು ಹರಿಸಿದ್ದರ ಫಲವಾಗಿ, ಇದೀಗ ಪ್ರಧಾನಿ ಮೋದಿ ಮೆಚ್ಚುಗೆಗೆ ಪಾತ್ರವಾಗಿದೆ.
ನಮ್ಮ ಊರಿಗೆ ನೀರಿನ ಸಮಸ್ಯೆ ಇತ್ತು. ಅದನ್ನು ನೀಗಿಸಲು ಕೇಂದ್ರದ ಅಮೃತ ಸರೋವರ ಯೋಜನೆಯಡಿ ಕೆರೆ ನಿರ್ಮಿಸಲಾಗಿದೆ. ಇದು ಪಿಎಂ ಮೋದಿ ಅವರ ಶ್ಲಾಘನೆಗೆ ಪಾತ್ರವಾಗಿದ್ದು ನಮಗೆಲ್ಲ ಖುಷಿ ನೀಡಿದೆ. ಪಂಚಾಯತಿ ವ್ಯಾಪ್ತಿಯ ಇನ್ನಷ್ಟು ಕೆರೆಗಳನ್ನು ಇದೇ ರೀತಿಯಲ್ಲಿ ಅಭಿವೃದ್ಧಿ ಪಡಿಸುತ್ತೇವೆ ಎಂದು ಪಂಚಾಯಿತಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

ಕೆಲವೇ ತಿಂಗಳಲ್ಲಿ ಇನ್ನೂ 10 ಕೆರೆ ಉದ್ಘಾಟನೆ
ಅಲ್ಲದೇ ಈ ಬಗ್ಗೆ ಮಾತನಾಡಿರುವ ಕ್ಷೇತ್ರದ ಶಾಸಕ ವೀರಣ್ಣ ಚರಂತಿಮಠ, ಬಿಲ್ ಕೆರೂರ ಗ್ರಾಮದ ಕೆರೆ ಅಭಿವೃದ್ಧಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಕ್ಕೆ ಪ್ರಧಾನಿಯವರನ್ನು ಶಾಸಕ ವೀರಣ್ಣ ಚರಂತಿಮಠ ಅಭಿನಂದಿಸಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ 66 ಲಕ್ಷ ರೂಪಾಯಿ ವೆಚ್ಚದಲ್ಲಿ 10 ಕೆರೆಗಳನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಅವುಗಳನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದ್ದಾರೆ.

ಮಹತ್ವದ ದಿನಗಳಂದು ಕೆರೆಗಳ ಉದ್ಘಾಟನೆ
ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಅಮೃತ ಸರೋವರ ಅಭಿಯಾನದಡಿ ಸದ್ಯ 125 ಕೆರೆಗಳ ಅಭಿವೃದ್ಧಿಗೆ ಪಣ ತೊಡಲಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ ಅಗಸ್ಟ್ 15ಕ್ಕೆ ಒಟ್ಟು 15 ಕೆರೆಗಳ ಅಭಿವೃದ್ಧಿ ಪೂರ್ಣಗೊಂಡಿದ್ದು, ಇನ್ನುಳಿದಂತೆ 110 ಕೆರೆಗಳ ಅಭಿವೃದ್ಧಿ ಕೆಲಸ ಮುನ್ನಡೆಯುತ್ತಿದೆ. ಇನ್ನು ಕೆರೆಗಳ ಅಭಿವೃದ್ಧಿ ಕೆಲಸ ಭರದಿಂದ ಸಾಗಿರುವ ಬೆನ್ನಲ್ಲೆ ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಿಇಓ ಟಿ. ಭೂಬಾಲನ್ ಅಭಿವೃದ್ಧಿಗೊಂಡ ಕೆರೆಗಳನ್ನ ಮಹತ್ವದ ದಿನಗಳಾದ ಅಕ್ಟೋಬರ್ 2 ಗಾಂಧಿ ಜಯಂತಿ, ನವೆಂಬರ್ 1 ಕನ್ನಡ ರಾಜ್ಯೋತ್ಸವ ಮತ್ತು ಜನವರಿ 26 ಗಣರಾಜ್ಯೋತ್ಸವ ಹೀಗೆ ವಿಶೇಷ ದಿನಗಳಂದೇ ಕೆರೆಗಳನ್ನು ಉದ್ಘಾಟನೆ ಮಾಡಲು ಅಧಿಕಾರಿಗಳಿಗೆ ಬಾಗಲಕೋಟೆ ಜಿಲ್ಲಾ ಪಂಚಾಯಿತು ಸಿಇಓ ಟಿ. ಭೂಬಾಲನ್ ತಿಳಿಸಿದ್ದಾರೆ.

ಕೆರೆಯಿಂದ ಅಂತರ್ಜಲ ಮಟ್ಟದಲ್ಲಿ ಏರಿಕೆ
ಮಳೆ ಬಂದಾಗ ಬೆಟ್ಟದಿಂದ ನೀರು ಬಂದು ಈ ಕೆರೆಗೆ ಸಂಗ್ರಹವಾಗುತ್ತದೆ. ಇದೇ ನೀರು ಜಾನುವಾರುಗಳಿಗೆ ಹಾಗೂ ಅಕ್ಕಪಕ್ಕದ ಜಮೀನುಗಳಿಗೆ ಬಳಕೆ ಆಗುತ್ತಿದ್ದು, ಸ್ಥಳೀಯ ರೈತರಿಗೆ ಅನುಕೂಲವಾಗುತ್ತಿದೆ. ಈ ಕೆರೆಯಿಂದ ಅಂತರ್ಜಜಲ ಮಟ್ಟ ಹೆಚ್ಚಾಗುತ್ತಿದ್ದು, ಸ್ಥಳೀಯರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿಮಂತ್ರಿ ಅಮೃತ ಯೋಜನೆ ಅಡಿ, ಬಾಗಲಕೋಟೆ ತಾಲೂಕಿನಲ್ಲಿ ಸದ್ಯಕ್ಕೆ ಮೂರು ಕೆರೆ ನಿರ್ಮಾಣವಾಗಿದೆ. ತುಳಸಿಗಿರಿಯಲ್ಲಿ ಎರಡು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆರೆಯ ಪಕ್ಕದಲ್ಲೇ ಭಾವಿ ಇದ್ದು, ಕೆರೆಯಿಂದ ಇದರಲ್ಲಿಯೂ ಸಹ ಜಲಮಟ್ಟ ಹೆಚ್ಚಾಗಿದೆ. ಇದರಿಂದ ಇಡೀ ಪ್ರದೇಶ ಸುಂದರ ವನದಂತೆ ಕಾಣುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಿದ್ದಾರೆ.












Click it and Unblock the Notifications