ಉಪ ಮುಖ್ಯಮಂತ್ರಿ ಪಟ್ಟ ಸಿಕ್ಕ ರಹಸ್ಯ ಬಿಚ್ಚಿಟ್ಟ ಲಕ್ಷ್ಮಣ ಸವದಿ
ಬಾಗಲಕೋಟೆ, ನವೆಂಬರ್ 04 : ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಉಪ ಮುಖ್ಯಮಂತ್ರಿ ಪಟ್ಟ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆಗೆ ಲಕ್ಷ್ಮಣ ಸವದಿ ಉತ್ತರ ನೀಡಿದ್ದಾರೆ. "ಹರ ಮುನಿದರೂ ಗುರು ಕಾಯುವನು" ಎಂದು ಅವರು ಹೇಳಿದ್ದಾರೆ.
ಬಾಗಲಕೋಟೆಯ ಭದ್ರಗಿರಿ ಬೆಟ್ಟದಲ್ಲಿ ನಡೆದ ಹಳಂಗಳಿ ದೀಪೋತ್ಸವ ಕಾರ್ಯಕ್ರಮದಲ್ಲಿ ಲಕ್ಷ್ಮಣ ಸವದಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಪಟ್ಟ ಸಿಕ್ಕಿದ್ದು ಹೇಗೆ? ಎಂಬ ಗುಟ್ಟು ಬಚ್ಚಿಟ್ಟರು.
"ಲಕ್ಷ್ಮಣ ಸವದಿ ಹಿಂದಿನ ಚುನಾವಣೆಯಲ್ಲಿ ಸೋತಿದ್ದಾರೆ. ಅವರು ಹೇಗೆ ಮಂತ್ರಿ, ಉಪ ಮುಖ್ಯಮಂತ್ರಿ ಆದರು ಎಂಬುದು ಎಲ್ಲರ ಪ್ರಶ್ನೆ. ಪತ್ರಕರ್ತರು ಇದನ್ನೇ ಕೇಳುತ್ತಾರೆ" ಎಂದು ಸಾರಿಗೆ ಸಚಿವರು ಆಗಿರುವ ಲಕ್ಷ್ಮಣ ಸವದಿ ಹೇಳಿದರು.
"ನಾನು ಮಂತ್ರಿ ಆಗಬೇಕು ಎಂದು ಆಸೆ ಪಟ್ಟಿರಲಿಲ್ಲ. ಆದರೆ, ಮಲಗಿದ್ದನ ಎಬ್ಬಿಸಿ ಮಂತ್ರಿ ಮಾಡಿ, ಡಿಸಿಎಂ ಸ್ಥಾನ ಕೊಟ್ಟರು" ಎಂದು ಲಕ್ಷ್ಮಣ ಸವದಿ ಡಿಸಿಎಂ ಪಟ್ಟ ಸಿಕ್ಕ ಗುಟ್ಟು ಬಿಚ್ಚಿಟ್ಟರು.

ಉಪ ಮುಖ್ಯಮಂತ್ರಿ ಪಟ್ಟ
"ರಾಜಕಾರಣಿಗಳಿಗೆ ಹರ ಎಂದರೆ ಮತದಾರರು ದೇವರು. ದೇವರು ಈ ಬಾರಿ ಮುನಿಸಿಕೊಂಡರು. ಆದರೆ, ಗುರು ಅಂದರೆ ವಿವಿಧ ಮಠಾಧೀಶರು, ಮಹಾತ್ಮರ ಆಶೀರ್ವಾದದಿಂದ ನಾನು ಸೋತರೂ ಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾದೆ" ಎಂದು ಲಕ್ಷ್ಮಣ ಸವದಿ ಹೇಳಿದರು.

ರಾತ್ರಿ 2 ಗಂಟೆಗೆ ಪೋನ್
"ನಾನು ಮಂತ್ರಿ ಆಗಬೇಕು ಎಂದು ಆಸೆ ಪಟ್ಟಿರಲಿಲ್ಲ. ನನಗೆ ಮಂತ್ರಿ ಆಗುತ್ತೇನೆ ಎಂದು ನನಗೆ ಗೊತ್ತಿರಲಿಲ್ಲ. ತಡರಾತ್ರಿ 2ಗಂಟೆಗೆ ಪೋನ್ ಮಾಡಿ ಮಂತ್ರಿ ಮಾಡಿದರು" ಎಂದು ಸಾರಿಗೆ ಸಚಿವ ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಚುನಾವಣೆಯಲ್ಲಿ ಸೋಲು
ಲಕ್ಷ್ಮಣ ಸವದಿ 2018ರ ವಿಧಾನಸಭೆ ಚುನಾವಣೆಯಲ್ಲಿ 79,763 ಮತಗಳನ್ನು ಪಡೆದು ಕಾಂಗ್ರೆಸ್ನ ಮಹೇಶ್ ಕುಮಟಳ್ಳಿ ವಿರುದ್ಧ ಸೋಲು ಕಂಡಿದ್ದರು. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅವರಿಗೆ ಉಪ ಮುಖ್ಯಮಂತ್ರಿ ಪಟ್ಟ ಸಿಕ್ಕಿತ್ತು.

ಉಪ ಚುನಾವಣೆ ಟಿಕೆಟ್ ಸಿಗುವುದೇ?
ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅನರ್ಹರಾಗಿರುವುದರಿಂದ ಉಪ ಚುನಾವಣೆ ಎದುರಾಗಿದೆ. ಈಗ ಲಕ್ಷ್ಮಣ ಸವದಿಗೆ ಟಿಕೆಟ್ ಸಿಗುವುದೇ? ಇಲ್ಲವೇ? ಕಾದು ನೋಡಬೇಕು. ಲಕ್ಷ್ಮಣ ಸವದಿ ವಿಧಾನಸಭೆ ಸದಸ್ಯರಲ್ಲ, ಪರಿಷತ್ ಸದಸ್ಯರೂ ಅಲ್ಲ. ಯಾವುದಾದರೂ ಚುನಾವಣೆಯಲ್ಲಿ ಗೆದ್ದು 6 ತಿಂಗಳಿನಲ್ಲಿ ಅವರು ಸದಸ್ಯರಾಗಬೇಕು.












Click it and Unblock the Notifications