ನನ್ನ ವಿರುದ್ದ ನಿಂತು ಸೋತ್ನಲ್ಲ, ಅವನೇ ಕಣಯ್ಯಾ, ಹೆಲ್ತು...ಮಿನಿಸ್ಟ್ರು
ಬಾಗಲಕೋಟೆ, ಡಿ 5: ಬಹಿರಂಗ ಪ್ರಚಾರ ಮುಗಿದು ಒಂದು ದಿನ ವಿಶ್ರಾಂತಿ ತೆಗೆದುಕೊಂಡ, ವಿರೋಧ ಪಕ್ಷದ ನಾಯಕ, ತನಗೆ ರಾಜಕೀಯವಾಗಿ ಮರುಜನ್ಮ ನೀಡಿದ, ಸ್ವಕ್ಷೇತ್ರ ಬಾದಾಮಿಯಲ್ಲಿದ್ದಾರೆ.
ಬಾದಾಮಿ ವಿಧಾನಸಭೆ ಕ್ಷೇತ್ರದ ಕೆರೂರು ಪಟ್ಟಣಕ್ಕೆ ಹೊಸದಾಗಿ ಮಂಜೂರಾಗಿರುವ ಕನ್ನಡ ಮಾಧ್ಯಮ ಪ್ರೌಢಶಾಲೆಯನ್ನು ಉದ್ಘಾಟಿಸಿ ಮಾತನಾಡಲು ಆರಂಭಿಸುವ ವೇಳೆ, ಗ್ರಾಮಸ್ಥರು ಅವರಲ್ಲಿ ಮನವಿಯೊಂದನ್ನು ಮಾಡಿದರು.
ಕೆರೂರು ಆಸ್ಪತ್ರೆಯಲ್ಲಿ ಯಾವಾಗ ನೋಡಿದಾಗಲೂ ಸಿಬ್ಬಂದಿಗಳೇ ಇರುವುದಿಲ್ಲ ಎಂದು ಗ್ರಾಮಸ್ಥರು ಸಿದ್ದರಾಮಯ್ಯನವರಲ್ಲಿ ದೂರಿದ್ದಾರೆ. ಆ ವೇಳೆ, "ಇಲ್ಲಿ ನನ್ನ ವಿರುದ್ದ ಸೋತ್ನಲ್ಲಾ.. ಅವನೇ ಕಣಯ್ಯಾ.. ನಮ್ ಹೆಲ್ತ್ ಮಿನಿಸ್ಟರ್.. ಏನ್ ಹೇಳು.. ಹೆಲ್ತು.. ಮಿನಿಸ್ಟ್ರು" ಎಂದು ಹೇಳಿದ್ದಾರೆ.

"ಏನಪ್ಪಾ ಮಾಡೋದು ನನ್ನ ಜೊತೆ ಅವನು ಮಾತನಾಡೋದೇ ಇಲ್ಲ.. ನಾನ್ ಹೇಳಿದ್ರೆ ಕೇಳೋದೇಲ್ಲಾ... ಚಿಂತೆ ಮಾಡ್ಬೇಡ್ರೀ.. ನಾನು ಜೋರಾಗಿ ಪತ್ರ ಬರೀತೀನಿ" ಎಂದು, ಸಿದ್ದರಾಮಯ್ಯ, ಆರೋಗ್ಯ ಸಚಿವ ಬಿ.ಶ್ರೀರಾಮುಲು ವಿರುದ್ದ ವ್ಯಂಗ್ಯವಾಡಿದ್ದಾರೆ.
ಬಾದಾಮಿ ತಾಲೂಕಿನಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದಲ್ಲಿ ಸಿಲುಕಿ ಮೃತರಾದವರ ಕುಟುಂಬದವರಿಗೆ ಪರಿಹಾರ ಹಾಗೂ ಪ್ರವಾಹ ಸಂತ್ರಸ್ತರಿಗೆ ಮನೆಗಳ ಹಕ್ಕುಪತ್ರಗಳನ್ನು ಸಿದ್ದರಾಮಯ್ಯ ವಿತರಿಸಿದರು.
"ಮತದಾನದ ಮೂಲಕ ಅರ್ಹರನ್ನು ಆಯ್ಕೆ ಮಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಈ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸೋಣ. ತಪ್ಪದೆ ಮತದಾನ ಮಾಡೋದು, ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.












Click it and Unblock the Notifications