ಮೋದಿ ಜೊತೆ ಸಂವಾದಕ್ಕೆ ರಾಜ್ಯದ ಸರ್ಕಾರಿ ಶಾಲೆ ಬಾಲಕಿ ಆಯ್ಕೆ
ಬಾಗಲಕೋಟೆ, ಜನವರಿ 06: ಪ್ರಧಾನಿ ನರೇಂದ್ರ ಮೋದಿ ಜೊತೆ ಸಂವಾದಕ್ಕೆ ರಾಜ್ಯದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಆಯ್ಕೆ ಆಗಿದ್ದಾಳೆ.
ನರೇಂದ್ರ ಮೋದಿ ಅವರು 'ಪರೀಕ್ಷಾ ಪೇ ಚರ್ಚಾ' ಸಂವಾದ ಕಾರ್ಯಕ್ರಮ ನಡೆಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಧಾನಿಗಳೊಂದಿಗೆ ಸಂವಾದ ನಡೆಸಲು ಬಾಗಲಕೋಟೆ ಜಿಲ್ಲೆಯ ಸಣ್ಣ ಹಳ್ಳಿಯೊಂದರ ಬಾಲಕಿ ಆಯ್ಕೆ ಆಗಿದ್ದಾಳೆ.
ಬಾಗಲಕೋಟೆ ಜಿಲ್ಲೆ ಜಂಬಲದಿನ್ನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಬಾಲಕಿ ಪೂರ್ಣಿಮಾ ರೇವಣ ಸಿದ್ಧಪ್ಪ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದ ಪರಿಣಾಮ ಅವರನ್ನು ಮೋದಿ ಜೊತೆ ಸಂವಾದಕ್ಕೆ ಆಯ್ಕೆ ಮಾಡಲಾಗಿದೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ತಾರಿವಾಳ ಗ್ರಾಮದವರಾದ ಬಾಲಕಿ ಪೂರ್ಣಿಮಾ ರೇವಣ ಸಿದ್ಧಪ್ಪ, 'ಎಕ್ಸಾಮಿಂಗ್ ಎಕ್ಸಾಮ್' ಎಂಬ ವಿಷಯದ ಬಗ್ಗೆ ಪ್ರಬಂಧ ಬರೆದಿದ್ದಾರೆ. ದೇಶದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಈ ವಿಷಯವಾಗಿ ಪ್ರಬಂಧ ಬರೆದಿದ್ದರು. ಅಂತಿಮ ಸುತ್ತಿನಲ್ಲಿ ಆಯ್ಕೆ ಆದ ವಿದ್ಯಾರ್ಥಿಗಳಲ್ಲಿ ಪೂರ್ಣಿಮಾ ಹೆಸರೂ ಇದೆ.
ಜನವರಿ 20 ರಂದು ಮೋದಿ ಅವರು ದೆಹಲಿಯಲ್ಲಿ ದೇಶದ ಮೂಲೆ-ಮೂಲೆಗಳಿಂದ ಆಯ್ಕೆ ಆಗಿ ಬಂದ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಮತ್ತು ಅದರ ತಯಾರಿ ವಿಷಯವಾಗಿ ಚರ್ಚೆ ನಡೆಸಲಿದ್ದಾರೆ. ಆ ದಿನ ಸಂವಾದದಲ್ಲಿ ಪೂರ್ಣಿಮಾ ಸಹ ಇರುತ್ತಾರೆ, ಮೋದಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ, ಪ್ರಶ್ನೆಗಳನ್ನು ಕೇಳಲಿದ್ದಾರೆ.
ವಿದ್ಯಾರ್ಥಿ ಪೂರ್ಣಿಮಾ ಅವರನ್ನು ದೆಹಲಿಗೆ ಕಳಿಸುವಂತೆ ಶಾಲೆ ಮುಖ್ಯೋಪಾಧ್ಯಾಯರಿಗೆ ಸೂಚನೆ ಸಿಕ್ಕಿದ್ದು, ಪೂರ್ಣಿಮಾ ಬಗ್ಗೆ ಪೂರ್ಣ ಮಾಹಿತಿ ಮೇಲ್ ಮಾಡುವಂತೆ ಹೇಳಲಾಗಿದೆ.
ಸಂವಾದಕ್ಕೆ ಆಯ್ಕೆ ಆಗಿರುವ ಬಗ್ಗೆ ಪೂರ್ಣಿಮಾ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರ ಪೋಷಕರೂ ಸಹ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications