ಸಿದ್ದರಾಮಯ್ಯ ತಾಯಿ ಮನೆ ಯಾವುದೆಂದು ಹೇಳಲಿ: ದೇವೇಗೌಡ
ಬಾಗಲಕೋಟೆ ಮೇ 07 : ಉರಿ ಬಿಸಿಲು ಲೆಕ್ಕಿಸದೇ ಬರಿಗಾಲಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ದೇವೇಗೌಡರು ಬಾದಾಮಿಯ ಐತಿಹಾಸಿಕ, ಧಾರ್ಮಿಕ ದೇವಸ್ಥಾನಗಳಿಗೆ ಭೇಟಿ ನೀಡಿದರು.
ಬಾದಾಮಿ ಕ್ಷೇತ್ರದ ಅಧಿದೇವತೆ ಬನಶಂಕರಿ ದೇವಿ ಹಾಗೂ ಶಿವಯೋಗ ಮಂದಿರದ ಲಿಂಗೈಕ್ಯ ಹಾನಗಲ್ ಕುಮಾರೇಶ್ವರ ಸ್ವಾಮೀಜಿ, ಸದಾಶಿವ ಸ್ವಾಮೀಜಿಗಳ ಗದ್ದುಗೆಗಳ ದರ್ಶನ ಪಡೆದರು.
ಬೆಳಗ್ಗೆಯಿಂದ ಉಪವಾಸವಿದ್ದ ದೇವೇಗೌಡರು ದೇವಸ್ಥಾನದ ಭೇಟಿ ಬಳಿಕ ಶಿವಯೋಗ ಮಂದಿರದಲ್ಲಿ ಮಧ್ಯಾಹ್ನ 12.30 ಕ್ಕೆ ಅವರಿಗೆಂದೇ ಸಿದ್ಧಪಡಿಸಿದ್ದ ಉಪಹಾರ ಶಿರಾ, ಉಪ್ಪಿಟ್ಟು, ಇಡ್ಲಿ, ಅವಲಕ್ಕಿಯನ್ನು ಸ್ವೀಕರಿಸಿದರು.

ನಂತರ ಮಾಧ್ಯಮದ ಜೊತೆ ಮಾತನಾಡಿದ ದೇವೇಗೌಡರು, ಸಿದ್ದರಾಮಯ್ಯ ಯಾವ ಮನೆಯಲ್ಲಿ ಬೆಳೆದಿದ್ದಾರೆ. ಅವರ ತಾಯಿ ಮನೆ ಯಾವುದು ಹೇಳಲಿ ನೋಡೋಣ. ತಾಯಿ ಮನೆ ಜನತಾದಳ ಅಲ್ವೆ? ಜೆಡಿಎಸ್ ಅಧ್ಯಕ್ಷರಾಗಿದ್ದಿಲ್ವೆ? ಇಲ್ಲಿ ಡಿಸಿಎಂ ಆಗಿದ್ದಿಲ್ವ? ಎಂದು ತಿರುಗೇಟು ನೀಡಿದರು.
ದೇವೇಗೌಡರು ಬೆಳೆಸಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಸಂತೋಷ ಎಂದ ಅವರು, ಬಾದಾಮಿಯಲ್ಲಿ ಗೆಲ್ತೇನೆ ಎಂದಿರುವ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಗೆದ್ದಿದ್ದೇನೆ ಎನ್ನುವ ಅಹಂಕಾರದ ಮಾತು ನಾನು ಆಡಲ್ಲ. ಜನರು ಕೊಡುವ ತೀರ್ಪಿಗೆ ತಲೆಬಾಗುವೆ ಎಂದರು.












Click it and Unblock the Notifications