ಕೂಡಲಸಂಗಮ ಪುರಾತನ ಶಿವಲಿಂಗದಲ್ಲಿ ಬಿರುಕು: ಮೌಢ್ಯಗಳದ್ದೇ ಕಾರುಬಾರು
ಬಾಗಲಕೋಟೆ, ಫೆ 22: ಜಿಲ್ಲೆಯ ಐತಿಹಾಸಿಕ ಹುನಗುಂದ ತಾಲೂಕಿನಲ್ಲಿರುವ ಕೂಡಲಸಂಗಮದಲ್ಲಿರುವ ಬಸವಣ್ಣನ ಐಕ್ಯಸ್ಥಳದಲ್ಲಿನ ಪುರಾತನ ಶಿವಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಸಂಖ್ಯಾತ ಭಕ್ತರನ್ನು ಆತಂಕಕ್ಕೀಡುಮಾಡಿದೆ.
ಕಳೆದ ಬುಧವಾರ (ಫೆ 20) ಶಿವಲಿಂಗ ಬಿರುಕು ಬಿಟ್ಟಿರುವ ವಿಚಾರ ವೈರಲ್ ಆದ ನಂತರ, ಸುತ್ತಮುತ್ತಲಿನ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಶಿವಲಿಂಗ ಬಿರುಕು ಬಿಟ್ಟಿರುವುದರಿಂದ, ಜಗತ್ತಿಗೆ ಹಾಗಾಗುತ್ತದೆಯಂತೆ.. ಹೀಗಾಗುತ್ತದೆಯಂತೆ ಎಂದು ಮೌಢ್ಯ ಬಿತ್ತರಿಸುವ ಕೆಲಸವೂ ಕೆಲವರಿಂದ ನಡೆಯುತ್ತಿದೆ.
ಗೃಹಸಚಿವ ಎಂ ಬಿ ಪಾಟೀಲ್ ಶುಕ್ರವಾರ, ದೇವಾಲಯಕ್ಕೆ ಭೇಟಿ ನೀಡಿದ್ದು ಶಿವಲಿಂಗವನ್ನು ವೀಕ್ಷಿಸಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಜರಗಿಸುವುದಾಗಿ ಹೇಳಿದ್ದಾರೆ. ಗೃಹಸಚಿವರ ಜೊತೆ ಬಾಗಲಕೋಟೆ ಡಿಸಿ ರಾಮಚಂದ್ರನ್, ಎಸ್ಪಿ ರಿಷ್ಯಂತ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳಿದ್ದರು.

ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ಈ ಮೂರು ನದಿಗಳ ತ್ರಿವೇಣಿ ಸಂಗಮ ಎಂದು ಕರೆಸಿಕೊಳ್ಳುವ ಕೂಡಲಸಂಗಮದಲ್ಲಿ ಬಸವಣ್ಣನವರ ಐಕ್ಯಮಂಟಪವಿದೆ. ಐಕ್ಯ ಮಂಟಪ ವೀಕ್ಷಣೆಗೆ ನಿತ್ಯ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.
ಈ ವೇಳೆಯಲ್ಲಿ ಭಕ್ತರು ಶಿವಲಿಂಗಕ್ಕೆ ನಾಣ್ಯಗಳನ್ನು ಎಸೆಯುತ್ತಿರುವುದರಿಂದ ಬಿರುಕು ಬಿಟ್ಟಿರಬಹುದು. ಬಸವಣ್ಣನ ಐಕ್ಯಸ್ಥಳದ ಶಿವಲಿಂಗದ ಸಂರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಐಕ್ಯಸ್ಥಳದ ಶಿವಲಿಂಗದ ಸುತ್ತಲೂ ಫೈಬರ್ ಗ್ಲಾಸ್ ಅಳವಡಿಸುವಂತೆ ಬಸವ ಅಭಿಮಾನಿಗಳು ಆಗ್ರಹಿಸಿದ್ದಾರೆ.












Click it and Unblock the Notifications