ಬಾಗಲಕೋಟೆ : ಕೇಂದ್ರ ತಂಡದಿಂದ ಪ್ರವಾಹದಿಂದ ಆದ ನಷ್ಟದ ಅಂದಾಜು
ಬಾಗಲಕೋಟೆ, ಆಗಸ್ಟ್ 26 : "ಬಾಗಲಕೋಟೆ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಮೂಲಭೂತ ಸೌಕರ್ಯ ಸೇರಿದಂತೆ ಒಟ್ಟಾರೆ ಜನಜೀವನ ತೀವ್ರ ಅಸ್ತವ್ಯಸ್ತವಾಗಿದ್ದು, ಹಾನಿಯ ಅಂದಾಜು ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ" ಎಂದು ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರಕಾಶ್ ಹೇಳಿದರು.
ಸೋಮವಾರ ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೇಂದ್ರದ ತಂಡ ಅಧ್ಯಯನ ಪ್ರವಾಸವನ್ನು ನಡೆಸಿತು. ಮಾಧ್ಯಮಗಳ ಜೊತೆ ಮಾತನಾಡಿದ ಪ್ರಕಾಶ್, "ಜಿಲ್ಲೆಯಲ್ಲಿ ಪ್ರವಾಹದಿಂದ ರೈತರ ಪ್ರಮುಖ ಬೆಳೆಗಳಾದ ಕಬ್ಬು, ದಾಳಿಂಬೆ ನಷ್ಟವಾಗಿದೆ. ಜನ-ಜಾನುವಾರು, ಸೇತುವೆ ಹಾಗೂ ರಸ್ತೆಗಳು ತೀವ್ರ ಹಾನಿಗೊಳಗಾಗಿದ್ದು, ಇನ್ನೊಂದು ಅಧ್ಯಯನ ಭೇಟಿ ಕೈಗೊಂಡು ನಿಖರವಾದ ಹಾನಿಯ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುತ್ತದೆ" ಎಂದರು.
ತಂಡವು ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಹಾನಿಯನ್ನು ವೀಕ್ಷಿಸಿ ಸಮಗ್ರ ಮಾಹಿತಿ ಪಡೆಯಿತು. ರಬಕವಿ-ಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮದ ಸಂತ್ರಸ್ತರಿಗಾಗಿ ತೆರೆಯಲಾದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.
ಸಂತ್ರಸ್ತರು ಹಾಗೂ ಜಾನುವಾರುಗಳ ಚಿಕಿತ್ಸಾ ಕೇಂದ್ರಗಳಿಗೆ ತೆರೆಳಿ ಪಶು ಆಹಾರ ಮತ್ತು ಔಷಧಿಗಳ ಬಗ್ಗೆ ವಿವರಣೆ ಪಡೆದರು. ಸಂತ್ರಸ್ತ ಕೇಂದ್ರದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದ ಮಾಹಿತಿಯನ್ನು ಪಡೆದುಕೊಂಡರು.

ಕೇಂದ್ರ ತಂಡಕ್ಕೆ ವಿವರಣೆ
ಬಾಗಲಕೋಟೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಕೇಂದ್ರ ತಂಡಕ್ಕೆ ಜಿಲ್ಲೆಯ ಪರಿಸ್ಥಿತಿ ಕುರಿತು ವಿವರಣೆ ನೀಡಿದರು. "ಅಸ್ಕಿ ಗ್ರಾಮದಲ್ಲಿ 388 ಕುಟುಂಬಗಳ 3497 ಜನ ಸಂತ್ರಸ್ತರಾಗಿದ್ದು, ಇದರ ಜೊತೆಗೆ 667 ಜಾನುವಾರುಗಳು ಸಹ ಸಂಕಷ್ಟಕ್ಕೆ ಒಳಗಾಗಿವೆ. ಬಳ್ಳಾರಿ ಭಾಗದಿಂದ ಜಾನುವಾರುಗಳಿಗೆ ಮೇವು ಆಮದು ಮಾಡಿಕೊಳ್ಳಲಾಗುತ್ತಿದ್ದು, ಇಂದು ಅಥವಾ ನಾಳೆ ಒಳಗಾಗಿ ಪೂರೈಕೆಯಾಗಲಿದೆ" ಎಂದು ತಿಳಿಸಿದರು.

ಸೇತುವೆಯನ್ನು ವೀಕ್ಷಿಸಿದ ತಂಡ
ಮುಧೋಳ ತಾಲೂಕಿನ ಯಾದವಾಡ ಹಾಗೂ ಚಿಚಖಂಡಿ ಸೇತುವೆ ವೀಕ್ಷಣೆ ಮಾಡಿದ ಕೇಂದ್ರ ತಂಡ ಸಂಪೂರ್ಣ ಹಾಳಾಗಿರುವ ಪಾಲಿಹೌಸ್ ಹಾಗೂ ಅಲ್ಲಿ ತೇಲಿ ಬಂದು ದಡ ತಲುಪಿದ್ದ ಜಾವುವಾರುಗಳ ಶವಗಳನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ರೈತ ವೆಂಕನಗೌಡ ಪಾಟೀಲ, ವಿ.ಕೆ.ಪಾಟೀಲ ಹಾಗೂ ಸುಭಾಷ ಬುದ್ನಿ ಅವರು ಹಾನಿಗೊಳಗಾದ ಕಬ್ಬನ್ನು ಹೊರ ಹಾಕಲು ಪ್ರತಿ ಎಕರೆಗೆ 25 ಸಾವಿರ ರೂ. ಖರ್ಚಾಗಲಿದ್ದು, ಹಾಳಾದ ಕಬ್ಬಿಗೆ ಎಕರೆಗೆ 1 ಲಕ್ಷ ರೂ.ವರೆಗೆ ಪರಿಹಾರ ನೀಡುವಂತೆ ಮನವಿ ಮಾಡಿದರು.

ತೋಟಗಾರಿಕಾ ಬೆಳೆಗಳ ನಾಶ
ಪ್ರವಾಹದಿಂದ ಹಾನಿಗೊಳಗಾದ ದಾಳಿಂಬೆ ಬೆಳೆಯನ್ನು ತಂಡ ವೀಕ್ಷಣೆ ಮಾಡಿತು. ಸಂಸದ ಪಿ.ಸಿ.ಗದ್ದಿಗೌಡರ ತಂಡಕ್ಕೆ ಮಾಹಿತಿ ನೀಡುತ್ತಾ, "ಈ ಭಾಗದಲ್ಲಿ ದಾಳಿಂಬೆ, ಚಿಕ್ಕು ಹಾಗೂ ಕಬ್ಬು ಪ್ರಮುಖ ತೋಟಗಾರಿಕೆ ಬೆಳೆಗಳಾಗಿದ್ದು, ಬೆಳೆಗಳು ಸಂಪೂರ್ಣ ಹಾನಿಗೊಳಗಾದ ಅಂಕಿ ಅಂಶಗಳನ್ನು ತಿಳಿಸಿದರು. ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಅವರಿಗೆ ಸೂಕ್ತ ಪರಿಹಾರ ಸಿಗುವಂತಾಗಬೇಕು" ಎಂದರು.

ಪಟ್ಟದಕಲ್ಲು ವೀಕ್ಷಣೆ
ಕೇಂದ್ರದ ತಂಡ ಬಾದಾಮಿ ತಾಲೂಕಿನ ಪಟ್ಟದಕಲ್ಲು ಹಾಗೂ ನಂದಿಕೇಶ್ವರಕ್ಕೆ ತೆರಳಿ ವೀಕ್ಷಣೆ ನಡೆಸಿತು. ನಂತರ ತಂಡ ಗದಗ ಜಿಲ್ಲೆಯತ್ತ ತೆರಳಿತು. ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಅಧ್ಯಯನ ನಡೆಸಲು ತಂಡ ಆಗಮಿಸಿದೆ.












Click it and Unblock the Notifications