NEET- PG ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಬಾಗಲಕೋಟೆ ವೈದ್ಯ ಡಾ. ಚಿದಾನಂದ
ಬಾಗಲಕೋಟೆ, ಫೆಬ್ರವರಿ 2: ಯಾವುದೇ ಸಾಧನೆಗೆ ಕಷ್ಟಪಡುವುದರ ಜೊತೆಗೆ ಇಷ್ಟಪಟ್ಟು ಮಾಡುವುದೂ ಮುಖ್ಯವಾಗಿರುತ್ತದೆ. ಈ ವಿಚಾರದಲ್ಲಿ ಬಾಗಲಕೋಟೆಯ ವೈದ್ಯ ಕೂಡ ತಮ್ಮ ಕಠಿಣ ಶ್ರಮದಿಂದ ಇಂದು ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ನೀಟ್ (NEET) ಪಿಜಿ ಪರೀಕ್ಷೆಯ ಎರಡು ವಿಷಯದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಡಾ. ಚಿದಾನಂದ ಕುಂಬಾರ ಬೆಳಗಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 2021-2022ನೇ ಸಾಲಿನ ನೀಟ್ ಪಿಜಿ ಪರೀಕ್ಷೆಯಲ್ಲಿ 759 ಅಂಕ ಗಳಿಸಿದ್ದಾರೆ.
Koo App
ಡಾ. ಚಿದಾನದ ಕುಂಬಾರ ಬೆಳಗಲಿ ಹುಬ್ಬಳ್ಳಿ ಕಿಮ್ಸ್ನಲ್ಲಿ ಎಮ್ಬಿಬಿಎಸ್ ಮುಗಿಸಿದ್ದರು. ಒಂದು ವರ್ಷದ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯ ಏಮ್ಸ್ನಲ್ಲಿ ಎಂಡಿ ಮುಗಿಸಿದ್ದಾರೆ. ಸೂಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆಯಲ್ಲಿ ಚಿದಾನಂದ ಬೆಳಗಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಈ ವಿಚಾರ ತಿಳಿದ ಚಿದಾನಂದ ಬೆಳಗಲಿ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಡೈಜೆಸ್ಟಿವ್ ಸಿಸ್ಟಮ್ ಸ್ಪೆಷಲಿಸ್ಟ್ (Digestive System Specialist) ವಿಷಯದಲ್ಲಿ 400ಕ್ಕೆ 340 ಅಂಕ ಪಡೆದಿದ್ದು, ಡಿಎಮ್ ಹೆಪೊಟಾಲಜಿ (ಲಿವರ್ ಸ್ಪೆಷಲಿಸ್ಟ್) 400ಕ್ಕೆ 330 ಅಂಕ ಪಡೆದಿದ್ದಾರೆ. ಈ ಸಾಧನೆಯನ್ನು ಕರ್ನಾಟಕದ ಬಾಗಲಕೋಟೆಯ ವೈದ್ಯ ಮಾಡಿರುವುದು ಇಡೀ ರಾಜ್ಯಕ್ಕೆ ಹೆಮ್ಮೆ ಪಡುವಂತಾಗಿದೆ.
ಜನವರಿ 10ರಂದು ನೀಟ್ ಪರೀಕ್ಷೆ ನಡೆದಿತ್ತು
ಜನವರಿ 10, 2022ರಲ್ಲಿ ಸೂಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯ ಫಲಿತಾಂಶ ಜನವರಿ 31ರಂದು ರಾತ್ರಿ ಬಂದಿದೆ. ಸದ್ಯ ಹೈದರಾಬಾದ್ ಗ್ಲೋಬಲ್ ಆಸ್ಪತ್ರೆಯಲ್ಲಿ ವೈದ್ಯ ಡಾ. ಚಿದಾನಂದ ಸೇವೆ ಸಲ್ಲಿಸುತ್ತಿದ್ದಾರೆ.
ಈ ವಿಚಾರ ತಿಳಿದ ಮುಧೋಳ ಶಾಸಕ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ಡಾ.ಚಿದಾನಂದ ಕುಂಬಾರ ಬೆಳಗಲಿ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಗ್ರಾಮದ ಮನೆಗೆ ಬಂದ ಗ್ರಾಮಸ್ಥರು, ಡಾ. ಚಿದಾನಂದ ಕುಂಬಾರ ಕುಟುಂಬದವರಿಗೆ ಶುಭಾಶಯ ತಿಳಿಸಿ, ಅಭಿನಂದಿಸಿದ್ದಾರೆ.
ಗ್ರಾಮೀಣ ರೈತನ ಮಗನ ಸಾಧನೆ
NEET- PG ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಡಾ. ಚಿದಾನಂದ ಕುಂಬಾರ ಪ್ರತಿಕ್ರಿಯಿಸಿ, ನಮ್ಮ ತಂದೆ ಒಬ್ಬ ರೈತ, ನಾನೊಬ್ಬ ರೈತನ ಮಗ ಅಂತ ಹೇಳಿಕೊಳ್ಳಲು ತುಂಬಾ ಹೆಮ್ಮೆಯಿದೆ. ನನ್ನ ತಂದೆಯ ಸಹಕಾರ, ಕುಟುಂಬಸ್ಥರ ಪ್ರೋತ್ಸಾಹದಿಂದ ನಾನು ವೈದ್ಯಕೀಯ ಕ್ಷೇತ್ರಕ್ಕೆ ಬಂದು ಇಂತಹ ಸಾಧನೆ ಮಾಡುವುದಕ್ಕೆ ಸಾಧ್ಯವಾಯಿತು ಎಂದರು.
ಇನ್ನು ನಮ್ಮ ಕ್ಷೇತ್ರದ ಶಾಸಕರು ಹಾಗೂ ಸಚಿವರೂ ಆದ ಗೋವಿಂದ ಕಾರಜೋಳ ಅವರು ಕೂಡ ಎಂಬಿಬಿಎಸ್ ಓದುವಾಗ ಪ್ರೋತ್ಸಾಹ ನೀಡಿದ್ದು, ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಡಾ. ಚಿದಾನಂದ ಕುಂಬಾರ ಹೇಳಿದ್ದಾರೆ. ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಡಾ.ಚಿದಾನಂದ ತಂದೆಯ ಆಶ್ರಯದಲ್ಲೇ ಬೆಳೆದು ದೊಡ್ಡ ಸಾಧನೆ ಮಾಡಿದ್ದಾರೆ.
ಎಷ್ಟೇ ಕಷ್ಟಗಳು ಬಂದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತನ್ನ ಗುರಿಯನ್ನು ಮುಟ್ಟಿ ಇತರರಿಗೆ ಮಾದರಿಯಾಗಿರುವ ಡಾ. ಚಿದಾನಂದ ಕುಂಬಾರ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ರನ್ನಬೆಳಗಲಿ ಗ್ರಾಮದಲ್ಲಿ ಮುಗಿಸಿದ್ದರು. ವಿಜಯಪುರದ ಬಿಎಲ್ಡಿಇ ಕಾಲೇಜಿನಲ್ಲಿ ಪಿಯುಸಿ ಸೈನ್ಸ್ ಮಾಡಿದ್ದಾರೆ. ಕನ್ನಡ ಮಾಧ್ಯಮದಲ್ಲೇ ಕಲಿತು ಇಂದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.












Click it and Unblock the Notifications