ಸಿದ್ದು ಪ್ರತ್ಯೇಕ ಲಿಂಗಾಯತ ತಂತ್ರಕ್ಕೆ ಅಮಿತ್ ಶಾ ವೀರಶೈವ ಪ್ರತಿತಂತ್ರ?
ಬಾಗಲಕೋಟೆ, ಮಾರ್ಚ್ 30: 'ಲಿಂಗಾಯತ ಪ್ರತ್ಯೇಕ ಧರ್ಮ'ದ ದಾಳಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚೆಕ್ ನೀಡುವ ಪ್ರಯತ್ನದಲ್ಲಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠ, ಶಿವಮೊಗ್ಗದ ಕಲ್ಮಠ, ಮಾದರ ಚೆನ್ನಯ್ಯ ಗುರುಪೀಠ, ಚಿತ್ರದುರ್ಗದ ಮುರುಘಾಮಠ ಸೇರಿದಂತೆ ವಿವಿಧ ಮಠಗಳಿಗೆ ಭೇಟಿ ನೀಡಿ, ಮಠಾಧೀಶರ 'ಆಶೀರ್ವಾದ' ಪಡೆಯುವುದು ಅಮಿತ್ ಶಾ ಎಣಿಕೆ.
ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹೆಣೆಯಬೇಕಾದ ತಂತ್ರವನ್ನು ಹಾಗೂ ಸಿದ್ದರಾಮಯ್ಯ ಅವರಿಗೆ ಎದುರೇಟು ನೀಡಲು ಮಾಡಬೇಕಾದ ಪ್ರತಿತಂತ್ರವನ್ನು ರೂಪಿಸುತ್ತಿದ್ದಾರೆ. ಅದರದೇ ಭಾಗವಾಗಿ ಏಪ್ರಿಲ್ 3ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಅಮಿತ್ ಶಾ.
ಸಿದ್ದರಾಮಯ್ಯ, ಅಮಿತ್ ಶಾರಿಂದ ಮೈಸೂರಿನಲ್ಲಿ ಭರ್ಜರಿ ಮತ ಬೇಟೆ
ಅಂದು 100ಕ್ಕೂ ಅಧಿಕ ಸ್ವಾಮೀಜಿಗಳೊಂದಿಗೆ ಸಮಾಲೋಚನೆ ಕಾರ್ಯಕ್ರಮವನ್ನು ಅಮಿತ್ ಶಾ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದ ಅಂಗವಾಗಿ ಈಗಾಗಲೇ ಸಂಸದ ಪ್ರಹ್ಲಾದ ಜೋಶಿಯವರು ಸಹ ಪೂರ್ವಭಾವಿ ಸಭೆಯನ್ನು ನಡೆಸಿ, ಅಮಿತ್ ಶಾ ಶಿವಯೋಗ ಮಂದಿರಕ್ಕೆ ಭೇಟಿ ನೀಡುವುದನ್ನು ಮಾಧ್ಯಮದವರಿಗೆ ಖಚಿತಪಡಿಸಿದ್ದಾರೆ.
ಲಿಂಗಾಯತ ಸಮುದಾಯದ ಮತಗಳಿಗೆ ಗಾಳ
ಉತ್ತರ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳಲ್ಲಿ ವೀರಶೈವ ಲಿಂಗಾಯತರನ್ನು ಸೆಳೆಯುವ ಮೂಲಕ, ಆ ಸಮುದಾಯದ ಮತಗಳಿಗೆ ವಿಧಾನಸಭೆ ಚುನಾವಣೆಯಲ್ಲಿ ಗಾಳ ಹಾಕುವ ಚಿಂತನೆ ಮಾಡುತ್ತಿರುವಾಗಲೇ ಈಗ ಮುಖ್ಯಮಂತ್ರಿಗೆ ಸಡ್ಡು ಹೊಡೆಯಲು ಅಮಿತ್ ಶಾ ಪ್ರತಿತಂತ್ರ ರೂಪಿಸುತ್ತಿದ್ದಾರೆ. ಜತೆಗೆ ಶಿವಯೋಗ ಮಂದಿರಕ್ಕೆ ಭೇಟಿ ನೀಡಲು ಮುಂದಾಗಿರುವುದು ಕುತೂಹಲ ಪಡೆದುಕೊಂಡಿದೆ.
ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಬೆನ್ನಲ್ಲೇ ಪ್ರವಾಸ
ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ ಬೆನ್ನಲ್ಲೇ ಈಗ ಅಮಿತ್ ಶಾ ಮಠ ಯಾತ್ರೆ ಹಮ್ಮಿಕೊಂಡು, ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಡಲು ತಂತ್ರ ರೂಪಿಸುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹರಿದಾಡುತ್ತಿದೆ ನಾನಾ ಊಹಾಪೋಹ
ಅಸಮಾಧಾನಗೊಂಡ ವೀರಶೈವ ಲಿಂಗಾಯತರನ್ನು ಸಮಾಧಾನ ಪಡಿಸುವ ಸಲುವಾಗಿ ಆ ಸಮುದಾಯಕ್ಕೆ ಟಿಕೆಟ್ ನೀಡಲು ಸಿದ್ದರಾಮಯ್ಯ ತಂತ್ರ ರೂಪಿಸಿದ ಬೆನ್ನಲ್ಲೇ ಅದಕ್ಕೆ ಪ್ರತಿಯಾಗಿ ಏಪ್ರಿಲ್ 3ರಂದು ಶಿವಯೋಗ ಮಂದಿರಕ್ಕೆ ಅಮಿತ್ ಶಾ ಭೇಟಿ ನೀಡುತ್ತಿರುವುದು ನಾನಾ ಊಹಾಪೋಹಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಗಳ ವಿರುದ್ಧ ರಣಕಹಳೆ ಮೊಳಗಿಸಿದ ಸ್ಥಳ
ಬಾಗಲಕೋಟೆ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನು ಬಲಾಢ್ಯಗೊಳಿಸಲು ಅಮಿತ್ ಶಾ ಮುಂದಾಗಿದ್ದಾರೆ. ಅಂದಹಾಗೆ, ವೀರಶೈವ ಲಿಂಗಾಯತ ಸ್ವಾಮೀಜಿಗಳು ಕಾಂಗ್ರೆಸ್ ವಿರುದ್ಧ ಸಡ್ಡು ಹೊಡೆದ ಸ್ಥಳ ಶಿವಯೋಗ ಮಂದಿರ. ಲಿಂಗಾಯತ ಧರ್ಮವನ್ನು ಪ್ರತ್ಯೇಕ ಮಾಡಲು ಹೊರಟ ಮುಖ್ಯಮಂತ್ರಿಗಳ ವಿರುದ್ಧ ರಣಕಹಳೆ ಮೊಳಗಿಸಿದ ಸ್ಥಳ ಕೂಡ ಇದಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಶಿವಯೋಗ ಮಂದಿರ ಎಂಬುದು ಶಕ್ತಿ ಕೇಂದ್ರವಾಗಿದೆ.