ಮೋದೀಜಿ ಬುಲೆಟ್ ಟ್ರೇನ್ ಮರೆತುಬಿಡಿ! ಅಳಲು ತೋಡಿಕೊಂಡ ಬಿಜೆಪಿ ನಾಯಕಿ
ಅಮೃತಸರ್, ಡಿಸೆಂಬರ್ 26: ಪ್ರಧಾನಿ ನರೇಂದ್ರ ಮೋದಿಯವರು ಬುಲೆಟ್ ಟ್ರೇನ್ ಬಗ್ಗೆ ಮಾತನಾಡುತ್ತಿದ್ದರೆ, ಮಾಮೂಲಿ ರೈಲನ್ನೇ ಸಮಯಕ್ಕೆ ಸರಿಯಾಗಿ ಬರುವಂತೆ ಮಾಡಿ ಎಂದು ಬಿಜೆಪಿ ನಾಯಕಿಯೊಬ್ಬರು ರೈಲ್ವೇ ಸಚಿವ ಪಿಯೂಶ್ ಗೋಯಲ್ ಮತ್ತು ಪ್ರಧಾನಿ ಮೋದಿ ಇಬ್ಬರಿಗೂ ಮನವಿ ಮಾಡಿಕೊಂಡಿದ್ದಾರೆ.
ವಿಡಿಯೋ ಮುಖೇನ ಅವರು ಮನವಿ ಮಾಡಿಕೊಂಡ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಂಜಾಬಿನ ಅಮೃತಸರದ ಬಿಜೆಪಿ ನಾಯಕಿ ಲಕ್ಷ್ಮಿ ಕಾಂತಾ ಚಾವ್ಲಾ ಎಂಬುವರು ಪಂಜಾಬಿನ ಮಾಜಿ ಮಂತ್ರಿಯೂ ಹೌದು.
ಡಿ.22 ರಂದು ಸರಯು-ಯಮುನಾ ರೈಲಿನ ಎಸಿಕೋಚಿನಲ್ಲಿ ಅವರು ಪ್ರಯಾಣಿಸುತ್ತಿದ್ದರು. ಅಮೃತಸರದಿಂದ ಅಯೋಧ್ಯೆಗೆ ಹೊರಟಿದ್ದ ಈ ರೈಲು ಸುಮಾರು 10 ತಾಸುಗಳಷ್ಟು ತಡವಾಗಿತ್ತು. ಇದರಿಂದ ಸಹನೆ ಕಳೆದುಕೊಂಡ ಚಾವ್ಲಾ ತಕ್ಷಣವೇ ಸೆಲ್ಫಿ ವಿಡಿಯೋ ಮೂಲಕ ಪ್ರಧಾನಿ, ರೈಲ್ವೇ ಸಚಿವರಿಗೆ ಜನಸಾಮಾನ್ಯರ ಕಷ್ಟದ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.

ನನ್ನ ಒಂದೇ ಮನವಿ ಎಂದರೆ ದಯವಿಟ್ಟು ಜನಸಾಮಾನ್ಯರ ಕಷ್ಟ ಅರಿಯಿರಿ. ಟ್ರೇನು ಹತ್ತು ತಾಸು ತಡವಾದರೂ ನಮಗೆ ಯಾರೂ ಈ ಬಗ್ಗೆ ಮಾಹಿತಿಯನ್ನೂ ನೀಡಿಲ್ಲ. ಪ್ರಯಾಣಿಕರಿಗೆ ಯಾವ ವ್ಯವಸ್ಥೆಯನ್ನೂ ಮಾಡಲಾಗಿಲ್ಲ. ಸದ್ಯಕ್ಕೆ ಬುಲೆಟ್ ಟ್ರೇನಿನ ಆಸೆಯನ್ನು ಬಿಟ್ಟುಬಿಡಿ. ಈಗಾಗಲೇ ಇರುವ ರೈಲನ್ನು ಸುಧಾರಿಸಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ರೈಲು ತಡವಾಗುತ್ತಿದ್ದಂತೆಯೇ ರೈಲ್ವೇ ಹೆಲ್ಪ್ ಲೈನ್ ನಂಬರಿಗೂ ಚಾವ್ಲಾ ಕರೆ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.












Click it and Unblock the Notifications