ರೈನಾ ಸಂಬಂಧಿಕರ ಹಲ್ಲೆ ಪ್ರಕರಣ, ಎಸ್ಐಟಿ ತನಿಖೆ ಆರಂಭ
ಚಂದೀಗಢ, ಆ. 2: ಪಠಾಣ್ ಕೋಟ್ ಸಮೀಪ ವಾಸವಿದ್ದ ಸರ್ಕಾರಿ ಗುತ್ತಿಗೆದಾರ ಅಶೋಕ್ ಕುಮಾರ್ ಹತ್ಯೆ ಹಾಗೂ ಕುಟುಂಬ ಸದಸ್ಯರ ಮೇಲಿನ ಹಲ್ಲೆ ಪ್ರಕರಣದ ತನಿಖೆಯನ್ನು ಪಂಜಾಬ್ ಪೊಲೀಸ್ ಪಡೆಯ ವಿಶೇಷ ತನಿಖಾ ತಂಡ(ಎಸ್ಐಟಿ) ಕೈಗೆತ್ತಿಕೊಂಡಿದೆ. ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟರ್ ಸುರೇಶ್ ರೈನಾ ಅವರ ಹತ್ತಿರದ ಸಂಬಂಧಿಕರ ಮೇಲೆ ನಡೆದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಸರ್ಕಾರ ಭರವಸೆ ನೀಡಿದೆ.
ಕಾಳೆ ಕಚ್ಚೆಗ್ಯಾಂಗ್ ಸದಸ್ಯರು ರೈನಾ ಅವರ ಸೋದರಮಾವನ ಹತ್ಯೆ ಮಾಡಿದ್ದಾರೆ. ಸಂಬಂಧಿಕರ ಮೇಲೆ ದಾಳಿ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಯುಎಇಯಲ್ಲಿ ಐಪಿಎಲ್ 13ರಲ್ಲಿ ಪಾಲ್ಗೊಳ್ಳಲು ತೆರಳಿದ್ದ ರೈನಾ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ಐಪಿಎಲ್ ಬಿಟ್ಟು ಭಾರತಕ್ಕೆ ಮರಳಿದ್ದಾರೆ. ತಮ್ಮ ಮಾವ ಹಾಗೂ ಕಸಿನ್ ಮೃತಪಟ್ಟಿದ್ದು, ಸೋದರತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂಥ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗಬೇಕಿದೆ ಎಂಬರ್ಥದಲ್ಲಿ ಟ್ವೀಟ್ ಮಾಡಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಪೊಲೀಸ್ ಆಯುಕ್ತರಿಗೆ ಟ್ವೀಟ್ ಟ್ಯಾಗ್ ಮಾಡಿದ್ದರು.

ಅಶೋಕ್ ಕುಮಾರ್ ಅವರು ಸರ್ಕಾರಿ ಗುತ್ತಿಗೆದಾರ
ಏನಿದು ಘಟನೆ?: ಐಪಿಎಲ್ ಕ್ರಿಕೆಟರ್ ಸುರೇಶ್ ರೈನಾ ಅವರ ಅಂಕಲ್ 58 ವರ್ಷ ವಯಸ್ಸಿನ ಅಶೋಕ್ ಕುಮಾರ್ ಅವರು ಸರ್ಕಾರಿ ಗುತ್ತಿಗೆದಾರರಾಗಿದ್ದು, ಹಲ್ಲೆಕೋರರ ಹೊಡೆತದಿಂದ ತಲೆಗೆ ತೀವ್ರ ಪೆಟ್ಟು ತಿಂದು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ಪುತ್ರ ಕೌಶಲ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸೋಮವಾರದಂದು ಮೃತಪಟ್ಟರು. ಅಶೋಕ್ ಕುಮಾರ್ ಪತ್ನಿ ಆಶಾರಾಣಿ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ.

ಕಾಳೆ ಕಚ್ಚೇವಾಲೆ ಗ್ಯಾಂಗಿನ ಕಳ್ಳರ ಕೃತ್ಯವೇ?
ಇದು ಕಾಳೆ ಕಚ್ಚೇವಾಲೆ ಗ್ಯಾಂಗಿನ ಕಳ್ಳರ ಕೃತ್ಯ, ಆಗಸ್ಟ್ 19 -20ರ ನಡುವೆ ರಾತ್ರಿ ವೇಳೆ ಪಠಾಣ್ ಕೋಟ್ ಸಮೀಪದ ತಾರಿಯಲ್ ಗ್ರಾಮದಲ್ಲಿ ನಡೆದ ದುರ್ಘಟನೆಯಾಗಿದೆ. ಮನೆಯ ಮಹಡಿ ಮೇಲೆ ಎಲ್ಲರೂ ಮಲಗಿದ್ದಾಗ, ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ತನಿಖೆ ನಡೆಸುತ್ತಿರುವ ವಿಶೇಷ ತಂಡದಲ್ಲಿ ಎಸ್ ಪಿಎಸ್ ಪಾರ್ಮಾರ್, ಐಜಿಪಿ ಗಡಿ ಭಾಗ, ಪಠಾಣ್ ಕೋಟ್ ಎಸ್ ಎಸ್ ಪಿ ಗುಲ್ನೀತ್ ಸಿಂಗ್ ಖುರಾನ, ಪಠಾಣ್ ಕೋಟ್ ಎಸ್ ಪಿ ಪ್ರಭ್ಜೋತ್ ಸಿಂಗ್ ವಿರ್ಕ್, ಡಿಎಸ್ಪಿ ರವೀಂದರ್ ಸಿಂಗ್ ಇದ್ದಾರೆ. ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಈಶ್ವರ್ ಸಿಂಗ್ ಅವರು ತನಿಖೆ ಪ್ರಗತಿ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ಡಿಜಿಪಿ ದಿನಕರ್ ಹೇಳಿದರು.

ಪಂಜಾಬ್ -ಹಿಮಾಚಲ ಗಡಿಭಾಗದಲ್ಲಿ ಗ್ಯಾಂಗ್ ಸಕ್ರಿಯ
ಪಂಜಾಬ್ -ಹಿಮಾಚಲ ಗಡಿಭಾಗದಲ್ಲಿ ಹೆಚ್ಚು ಸಕ್ರಿಯವಾಗಿರುವ ಕಾಳೆ ಕಚ್ಚೇವಾಲೆ ಗ್ಯಾಂಗ್ ಕೃತ್ಯ ಎಂಬ ಶಂಕೆ ಇದೆ. ಈ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಡಿಜಿಪಿ ದಿನಕರ್ ಗುಪ್ತಾ ಹೇಳಿದ್ದಾರೆ. ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಈ ಗ್ಯಾಂಗ್ ಸಾಮಾನ್ಯವಾಗಿ ಒಂದು ಬಾರಿಗೆ ನಾಲ್ಕೈದು ಮನೆಯ ಮೇಲೆ ದರೋಡೆ ನಡೆಸುತ್ತದೆ. ಈ ಬಗ್ಗೆ ತನಿಖೆ ಜಾರಿಯಲ್ಲಿದ್ದು ,ಇನ್ನೂ ಇದೇ ಗ್ಯಾಂಗಿನದ್ದೇ ಕೈವಾಡ ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದರು.
|
ತೀವ್ರಗೊಂಡ ವಿಚಾರಣೆ
ಸುಮಾರು 30-35 ಮಂದಿ ಮೇಲೆ ಶಂಕೆ ವ್ಯಕ್ತವಾಗಿದೆ. ಗುರ್ದಾಸನ್ ಪುರ್, ತಾರ್ನ್, ಅಮೃತ್ ಸರ್ ಪ್ರದೇಶದಲ್ಲಿ ಹುಡುಕಾಟ ಜಾರಿಯಲ್ಲಿದೆ. ಅಶೋಕ್ ಕುಮಾರ್ ಅವರ ಬಳಿ ಕೆಲಸ ನಿರ್ವಹಿಸುತ್ತಿದ್ದ 6 ಮಂದಿ ಕಾರ್ಮಿಕರನ್ನು ಪ್ರಶ್ನಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಟ್ರ್ಯಾಕಿಂಗ್ ಬಳಸಿ ಆರೋಪಿಗಳ ಪತ್ತೆ ಹಚ್ಚಲಾಗುವುದು. ಅಗತ್ಯ ಬಿದ್ದರೆ ಗಡಿ ಭದ್ರತಾ ಪಡೆ, ಸೇನೆಯ ನೆರವು ಪಡೆಯಲಾಗುತ್ತದೆ ಎಂದು ಡಿಜಿಪಿ ದಿನಕರ್ ಹೇಳಿದರು.












Click it and Unblock the Notifications