15ವರ್ಷಗಳ ನಂತರ ತಿರುಪತಿಯಲ್ಲಿ ಅಪರೂಪದ ಸೇವೆ ಪುನರಾರಂಭ: ಟಿಕೆಟ್ ದರಕ್ಕೆ ಬೆಚ್ಚಿಬಿತ್ತು ಭಕ್ತಗಣ
ಕಲಿಯುಗದಲ್ಲಿ ಬೇಡಿದ್ದನ್ನು ಕರುಣಿಸುವ ಕಾಮಧೇನು ಎಂದೇ ಹೆಸರಾಗಿರುವ ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಹದಿನೈದು ವರ್ಷಗಳ ನಂತರ ಅಪರೂದ ಸೇವೆಯನ್ನು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಪುನರ್ ಆರಂಭಿಸಲು ನಿರ್ಧರಿಸಿದೆ.
ಕೆಲವೇ ಕೆಲವು ಸೆಕೆಂಡ್ ನಷ್ಟು ಮಾತ್ರ ದೇವರನ್ನು ನೋಡಲು ಅವಕಾಶವಿರುವ ಈ ದೇವಾಲಯದಲ್ಲಿ, ಸ್ಥಿತಿವಂತರು ದುಡ್ಡು ಕೊಟ್ಟರೆ ದಿನವಿಡೀ ದೇವರ ಮುಂದೆ ಕೂತು ಎಲ್ಲಾ ಪೂಜೆ/ಅಭಿಷೇಕಗಳನ್ನು ಮತ್ತೆ ಆರಂಭವಾದ ಸೇವೆಯ ಮೂಲಕ ನೋಡಬಹುದಾಗಿದೆ.
ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನಕ್ಕೆ ಟಿಟಿಡಿಯಿಂದ ಆನ್ಲೈನ್ ಟಿಕೆಟ್ ಬಿಡುಗಡೆ
ಉದಯಾಸ್ಥಮಾನ ಆರ್ಜಿತ ಸೇವೆಯನ್ನು ಒಂದೂವರೆ ದಶಕಗಳ ನಂತರ ಆರಂಭಿಸಲು ಟಿಟಿಡಿ ನಿರ್ಧರಿಸಿದೆ. ವಾರದ ದಿನಗಳಲ್ಲಿ ಒಂದು ದರ, ವಾರಾಂತ್ಯದಲ್ಲಿ ಅಂದರೆ ಶುಕ್ರವಾರದ ದಿನಮಾತ್ರ ಟಿಕೆಟ್ ದರ ಇನ್ನೊಂದು ಇರಲಿದೆ.
ಈ ಸೇವೆಯ ಮೂಲಕ ಬರುವ ಹಣವನ್ನು ಒಂದೊಳ್ಳೆ ಕೆಲಸಕ್ಕಾಗಿ ಉಪಯೋಗಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಕೊರೊನಾ ಹಾವಳಿಯಿಂದಾಗಿ ದೇವಾಲಯದ ಆರ್ಥಿಕ ಸ್ಥಿತಿಗತಿ ಕೂಡಾ ಏರುಪೇರಾಗಿತ್ತು. ಅದನ್ನು ಸರಿದಾರಿಗೆ ತರುವುದೂ ಟಿಟಿಡಿಯ ಇನ್ನೊಂದು ಉದ್ದೇಶ. ಉದಯಾಸ್ಥಮಾನ ಅರ್ಜಿತ ಸೇವೆಯ ಟಿಕೆಟ್ ದರಕ್ಕೆ ಬೆಚ್ಚಿಬಿದ್ದ ಭಕ್ತಗಣ!
ತಿರುಮಲ: ಆನ್ಲೈನ್ನಲ್ಲಿ ವಿಶೇಷ ಪ್ರವೇಶ ದರ್ಶನ ಟಿಕೆಟ್ ಬುಕ್ ಮಾಡುವುದು ಹೇಗೆ?
ಉದಯಾಸ್ಥಮಾನ ಆರ್ಜಿತ ಸೇವೆಯನ್ನು ಮತ್ತೆ ಆರಂಭಿಸಲು ಟಿಟಿಡಿ ನಿರ್ಧರಿಸಿದೆ
ಸುಮಾರು ಎಂಬತ್ತು ಸಾವಿರ ಯಾತ್ರಾರ್ಥಿಗಳಿಗೆ ದೇವಾಲಯಕ್ಕೆ ಭೇಟಿ ನೀಡುವ ಅವಕಾಶವನ್ನು ಮಂಡಳಿ ನೀಡಿತ್ತು. ಆದರೆ, ಕೊರೊನಾ ಕಾಟದಿಂದಾಗಿ ಅದನ್ನು ಮೂವತ್ತು ಸಾವಿರಕ್ಕೆ ಇಳಿಸಲಾಗಿತ್ತು. ಹಾಗಾಗಿ, ಸ್ವಾಭಾವಿಕವಾಗಿ ದೇವಾಲಯದ ಗಳಿಕೆಯಲ್ಲಿ ಇಳಿಮುಖವಾಗಿತ್ತು. ಓಮ್ರಿಕಾನ್ ಹಾವಳಿ ಹೆಚ್ಚಾಗುತ್ತಿರುವುದರಿಂದ ಆಂಧ್ರ ಪ್ರದೇಶ ಸರಕಾರ ಹೊಸ ಮಾರ್ಗಸೂಚಿ ಬಂದರೂ ಬರಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಹದಿನೈದು ವರ್ಷಗಳ ಹಿಂದೆ ನಿಲ್ಲಿಸಲಾಗಿದ್ದ ಉದಯಾಸ್ಥಮಾನ ಆರ್ಜಿತ ಸೇವೆಯನ್ನು ಮತ್ತೆ ಆರಂಭಿಸಲು ಟಿಟಿಡಿ ನಿರ್ಧರಿಸಿದೆ. ಆದರೆ, ಈ ಟಿಕೆಟ್ ಬೆಲೆ ಜನಸಾಮಾನ್ಯ ಭಕ್ತರಿಗೆ ಗಗನ ಕುಸುಮವೇ ಸರಿ.
ಟಿಟಿಡಿ ಅಧ್ಯಕ್ಷರಾದ ವೈ.ವಿ.ಸುಬ್ಬಾರೆಡ್ಡಿ ಹೇಳಿಕೆ
ಉದಯಾಸ್ಥಮಾನ ಆರ್ಜಿತ ಸೇವೆಯ ಟಿಕೆಟ್ ಮೂಲಕ ಆರುನೂರು ಕೋಟಿ ರೂಪಾಯಿ ಹಣ ಎತ್ತುವ ಉದ್ದೇಶವನ್ನು ಟಿಟಿಡಿ ಹೊಂದಿದೆ. "ಟಿಕೆಟ್ ಮೂಲಕ ಬರುವ ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಬಳಸಿಕೊಳ್ಳಲು ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಮೂರು ಆಸ್ಪತ್ರೆಗಳನ್ನು ರಾಜ್ಯದಲ್ಲಿ ತೆರೆಯುವ ಉದ್ದೇಶವನ್ನು ಹೊಂದಿದ್ದೇವೆ. ಇದರಲ್ಲಿ ಎರಡು ಕ್ಯಾನ್ಸರ್ ಆಸ್ಪತ್ರೆಗಳು, ಇನ್ನೊಂದು, ಮಕ್ಕಳ ಹೃದಯ ಆಸ್ಪತ್ರೆ. ಸಂಪೂರ್ಣವಾಗಿ ಉಚಿತ ಚಿಕಿತ್ಸೆ/ಶಸ್ತ್ರಚಿಕಿತ್ಸೆ ನೀಡಲಾಗುವುದು. ಮಕ್ಕಳ ಆಸ್ಪತ್ರೆ ತಿರುಪತಿಯಲ್ಲಿ, ಇನ್ನೆರಡು ಆಸ್ಪತ್ರೆಗಳು ರಾಜ್ಯದ ಇತರ ಎರಡು ನಗರಗಳಲ್ಲಿ ಸ್ಥಾಪಿಸಲಾಗುವುದು"ಎಂದು ಟಿಟಿಡಿ ಅಧ್ಯಕ್ಷರಾದ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.
ಟಿಕೆಟಿನ ಬೆಲೆ ಶುಕ್ರವಾರ ಹೊರತು ಪಡಿಸಿ 1ಕೋಟಿ. ಇನ್ನು, ಶುಕ್ರವಾರ ಒಂದೂವರೆ ಕೋಟಿ
"ಉದಯಾಸ್ಥಮಾನ ಆರ್ಜಿತ ಸೇವೆಯ ಉಳಿದಿರುವ ಟಿಕೆಟ್ ಅನ್ನು ಆಫ್ಲೈನ್ ಮತು ಆನ್ಲೈನ್ ಮೂಲಕ ವಿತರಿಸಲು ನಿರ್ಧರಿಸಲಾಗಿದೆ. ಟಿಕೆಟಿನ ಬೆಲೆ ಶುಕ್ರವಾರ ಹೊರತು ಪಡಿಸಿ ಒಂದು ಕೋಟಿ. ಇನ್ನು, ಶುಕ್ರವಾರದಂದು ಒಂದೂವರೆ ಕೋಟಿ ರೂಪಾಯಿಗಳು. ದೇಣಿಗೆ ನೀಡುವವರು ಮತ್ತು ಇತರ ಐವರು ಈ ಟಿಕೆಟ್ ಮೂಲಕ ಶ್ರೀವಾರಿಯ ದರ್ಶನವನ್ನು ಪಡೆಯಬಹುದು. ಈ ಟಿಕೆಟ್ ಪಡೆದವರು ದೇವಾಲಯದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗಿನ ಎಲ್ಲಾ ಪೂಜೆಯನ್ನು ಗರ್ಭಗುಡಿಯ ಹತ್ತಿರದಿಂದ ಮತ್ತು ಸ್ವಾಮಿಯನ್ನು ಸಮೀಪದಿಂದ ನೋಡಲು ಅವಕಾಶ ಕಲ್ಪಿಸಲಾಗುವುದು" ಎಂದು ಸುಬ್ಬಾರೆಡ್ಡಿ ಹೇಳಿದ್ದಾರೆ.
15ವರ್ಷದ ನಂತರ ತಿರುಪತಿಯಲ್ಲಿ ಅಪರೂಪದ ಸೇವೆ ಆರಂಭ
ಹದಿನೈದು ವರ್ಷಗಳ ಹಿಂದೆ ಒಂದು ಲಕ್ಷ ರೂಪಾಯಿದ್ದ ಟಿಕೆಟಿನ ಬೆಲೆಯನ್ನು ಒಂದು ಕೋಟಿಗೆ ಹೆಚ್ಚಿಸಲಾಗಿದೆ. ಒಂದು ಕೋಟಿ ಕೊಟ್ಟಿದ್ದೀವಲ್ಲಾ ವರ್ಷದಲ್ಲಿ ಬಂದಾಗಲೆಲ್ಲಾ ಬಿಡಿ ಎಂದು ಹೋದರೆ, ಭದ್ರತಾ ಸಿಬ್ಬಂದಿ ಜನರಲ್ ಕ್ಯೂನಲ್ಲಿ ಬಾ ಎಂದು ಕಳುಹಿಸಿದರೂ ಕಳುಹಿಸಬಹುದು. ಅದಕ್ಕಾಗಿಯೇ ಟಿಟಿಡಿ ಈ ಟಿಕೆಟ್ ಅನ್ನು ಪಡೆದವರಿಗೆ ಷರತ್ತನ್ನೂ ವಿಧಿಸಿದೆ. ವರ್ಷಕ್ಕೊಮ್ಮೆ ಒಟ್ಟು ಆರು ಜನ, ಟಿಕೆಟ್ ಪಡೆದ ಮುಂದಿನ 25ವರ್ಷದ ತನಕ ಈ ಟಿಕೆಟ್ ಅನ್ನು ಬಳಸಿಕೊಳ್ಳಬಹುದಾಗಿದೆ. 531 ಟಿಕೆಟಿಗಳು ಮಾತ್ರ ಬಾಕಿ ಉಳಿದಿವೆ, ಬೆಳಗ್ಗಿನ ಸುಪ್ರಭಾತ ಸೇವೆಯಿಂದ ಹಿಡಿದು, ರಾತ್ರಿಯ ಉಂಜಾಲ ಸೇವೆಯಲ್ಲಿ ಟಿಕೆಟ್ ಪಡೆದ ಭಕ್ತರು ಪಾಲ್ಗೊಳ್ಳಬಹುದಾಗಿದೆ. ತಿಮ್ಮಪ್ಪ ನಿನ್ನ ಮಹಿಮೆ ಅಪಾರ...
Recommended Video