ತಿರುಪತಿಯಲ್ಲಿ ಪ್ಲಾಸ್ಟಿಕ್ ಬಳಕೆಗೆ ಟಿಟಿಡಿ ಕಡಿವಾಣ
ಅಮರಾವತಿ, ಜೂನ್ 1: ವಿಶ್ವವಿಖ್ಯಾತ ತಿರುಮಲದಲ್ಲಿ ಇನ್ನು ಮುಂದೆ ಭಕ್ತರು ಪ್ಲಾಸ್ಟಿಕ್ ಬಳಸುವಂತಿಲ್ಲ. ತಿರುಮಲ ಬೆಟ್ಟವನ್ನು ಸಂಪೂರ್ಣ ಹಸಿರುಮಯಗೊಳಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ಗೆ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಸಂಪೂರ್ಣ ನಿಷೇಧ ವಿಧಿಸಿದೆ.
ಜೂನ್ 1ರಿಂದ ಈ ಆದೇಶ ಜಾರಿಗೆ ಬರಲಿದೆ. ಭಕ್ತಾದಿಗಳು ಪ್ಲಾಸ್ಟಿಕ್ ಬಾಟಲ್, ಬ್ಯಾಗ್, ಶ್ಯಾಂಪೂ ಸ್ಯಾಷೆ ಸೇರಿದಂತೆ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವಂತಿಲ್ಲ ಎಂದು ಟಿಟಿಡಿ ಅಧಿಕಾರಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.
"ಪ್ಲಾಸ್ಟಿಕ್ ಸಂಪೂರ್ಣ ನಿಷೇಧದ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಂಗಡಿ ಮಾಲೀಕರು, ಭಕ್ತರು ಸಹಕಾರ ನೀಡಬೇಕು. ಬೆಟ್ಟ ಹತ್ತುವ ಮೊದಲೇ ಅಲಿಪಿರಿ ಬಳಿ ಕರಾರುವಾಕ್ಕಾಗಿ ತಪಾಸಣೆ ನಡೆಯಲಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಅಲ್ಲಿಯೇ ನಮ್ಮ ಸಿಬ್ಬಂದಿ ಬೇರ್ಪಡಿಸಲಿದ್ದಾರೆ. ಬಟ್ಟೆ, ಇತರೆ ವಸ್ತುಗಳನ್ನು ಪ್ಯಾಕ್ ಮಾಡಲು ಅಂಗಡಿಯವರು ಮಣ್ಣಿನಲ್ಲಿ ಕರಗುವ ಪರಿಸರ ಸ್ನೇಹೀ ಬ್ಯಾಗ್ ಬಳಸಬೇಕು,'' ಎಂದು ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಪ್ಲಾಸ್ಟಿಕ್ ಮುಕ್ತ ತಿರುಮಲದ ಭಾಗವಾಗಿ ಮಂಗಳವಾರ ದೇವಸ್ಥಾನದ ಆಸ್ಥಾನ ಸಭಾಂಗಣದಲ್ಲಿ ಅಂಗಡಿ ಮಾಲೀಕರು ಮತ್ತು ಹೋಟೆಲ್ ಮಾಲೀಕರ ಸಭೆ ನಡೆಸಲಾಯಿತು. ಈ ವೇಳೆ ತಿರುಮಲದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧವನ್ನು ಘೋಷಿಸಲಾಯಿತು.
ನಿಯಮ ಉಲ್ಲಂಘಿಸಿದರೆ ಕ್ರಮ; "ಹಸಿ ಕಸ ಮತ್ತು ಒಣ ಕಸವನ್ನು ಸರಿಯಾಗಿ ಬೇರ್ಪಡಿಸಬೇಕು. ಅದನ್ನು ಪೌರ ಕಾರ್ಮಿಕ ಸಿಬ್ಬಂದಿಗೆ ನೀಡಬೇಕು. ಪ್ರತಿ ಮಂಗಳವಾರ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆವರೆಗೂ ಸಾಮೂಹಿಕ ಸ್ವಚ್ಛತಾ ಅಭಿಯಾನ ಕೈಗೊಳ್ಳುಲಾಗುವುದು,'' ಎಂದು ಇದೇ ವೇಳೆ ಟಿಟಿಡಿ ಆರೋಗ್ಯಾಧಿಕಾರಿ ಡಾ. ಶ್ರೀದೇವಿ ಮಾಹಿತಿ ನೀಡಿದ್ದಾರೆ. "ನಿಯಮ ಉಲ್ಲಂಘಿಸಿದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪದೇ ಪದೆ ನಿಯಮ ಉಲ್ಲಂಘಿಸಿದರೆ ಅಂತಹ ಅಂಗಡಿಗಳನ್ನು ಬಂದ್ ಮಾಡಲಾಗುವುದು,'' ಎಂದು ಡಾ. ಶ್ರೀದೇವಿ ಎಚ್ಚರಿಕೆ ನೀಡಿದ್ದಾರೆ.
ತಗ್ಗದ ದರ್ಶನ ಸರತಿ ಸಾಲು; ತಿರುಮಲ ವೆಂಕಟೇಶ್ವರ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ದೇಗುಲದಲ್ಲಿ ದೊಡ್ಡ ಸರತಿ ಸಾಲುಗಳು ಮುಂದುವರಿದಿದೆ. ವೈಕುಂಠ ಏಕಾದಶಿ ಮತ್ತು ಗರುಡ ಸೇವಾ ದಿನಗಳಲ್ಲಿ ಯಾತ್ರಾರ್ಥಿಗಳ ದಟ್ಟಣೆಗಿಂತ ಈಗ ಭಕ್ತರ ದಟ್ಟಣೆ ಹೆಚ್ಚಿದೆ. ಇದರ ಪರಿಣಾಮವಾಗಿ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಕನಿಷ್ಠ 48 ಗಂಟೆಗಳು ಸಾಲಿನಲ್ಲಿ ಕಾಯಬೇಕಾಗುತ್ತದೆ. ಸರತಿ ಸಾಲುಗಳು ಮತ್ತು ಕಂಪಾಟ್ಮೆಂಟ್ಗಳು ತುಂಬಿ ತುಳುಕುತ್ತಿವೆ.

''ಎಲ್ಲಾ ಭಕ್ತರಿಗೆ ಕುಡಿಯುವ ನೀರು, ಅನ್ನ ಪ್ರಸಾದ ಮುಂತಾದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಟಿಟಿಡಿ ಭದ್ರತಾ ಪಡೆಯು ಭಕ್ತರ ಸುರಕ್ಷತೆಯನ್ನು ಖಾತರಿಪಡಿಸುತ್ತದೆ,'' ಎಂದು ಟಿಟಿಡಿ ಅಧಿಕಾರಿಯೊಬ್ಬರು ಹೇಳಿದರು.
ಮಕ್ಕಳಿಗೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ತಿರುಪತಿಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ತಿರುಪತಿ ದೇವಾಲಯ, ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಂತಾದ ಕಡೆ ಭಕ್ತರೇ ಕಾಣಿಸುತ್ತಿದ್ದಾರೆ. ವೈಕುಂಠ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗಿದ ನಂತರ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ವಾರಾಂತ್ಯದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.











Click it and Unblock the Notifications