ಪಶುವೈದ್ಯೆ 'ಹತ್ಯಾಚಾರಿ'ಗಳಿಗೆ ಗುಂಡೇಟು ಕೊಟ್ಟಿದ್ದಕ್ಕೆ ಭೇಷ್!
ಅಮರಾವತಿ, ಡಿಸೆಂಬರ್.09: ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಖಾಕಿ ಗುಂಡೇಟಿನ ಶಿಕ್ಷೆ ನೀಡಿದೆ. ಪೊಲೀಸರ ಈ ಕಾರ್ಯಕ್ಕೆ ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗಿತ್ತು. ಇದೀಗ ತೆಲಂಗಾಣ ಪೊಲೀಸರು ಹಾಗೂ ಸರ್ಕಾರದ ನಡೆಯನ್ನು ನೆರೆಯ ರಾಜ್ಯದ ಮುಖ್ಯಮಂತ್ರಿಗಳೇ ಮೆಚ್ಚಿಕೊಂಡಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ತೆಲಂಗಾಣ ಪೊಲೀಸರು ನಡೆಸಿದ ಎನ್ ಕೌಂಟರ್ ಗೆ ಹ್ಯಾಟ್ಸಾಫ್ ಎಂದಿದ್ದಾರೆ. ಇದರ ಜೊತೆಗೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ.
ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದೇನೆ. ಟಿವಿ ಹಾಗೂ ಪತ್ರಿಕೆಗಳಲ್ಲಿ ಈ ಬಗ್ಗೆ ನೋಡಿದ್ದೇನೆ. ಆ ಹೆತ್ತವರ ನೋವು ಏನು ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಈ ಪ್ರಕರಣದಲ್ಲಿ ತೆಲಂಗಾಣ ಸರ್ಕಾರ ಹಾಗೂ ಪೊಲೀಸರು ತೋರಿದ ದಿಟ್ಟತನಕ್ಕೆ ನನ್ನ ಸಲಾಂ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

ನಾನೂ ಇಬ್ಬರು ಹೆಣ್ಣುಮಕ್ಕಳ ತಂದೆ:
ನನಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಒಬ್ಬ ತಂಗಿಯ ಅಣ್ಣನಾಗಿ, ಒಬ್ಬ ಗಂಡನಾಗಿ ಹಾಗೂ ಇಬ್ಬರು ಮಕ್ಕಳ ತಂದೆಯಾಗಿ ಇಂಥ ಹೆತ್ತವರ ನೋವು ನನಗೆ ಅರ್ಥವಾಗುತ್ತದೆ. ಪಶುವೈದ್ಯೆ ಮೇಲೆ ದುಷ್ಟರು ನಡೆಸಿದ ರಾಕ್ಷಣ ಕೃತ್ಯಕ್ಕೆ ಕ್ಷಮೆಯೇ ಇಲ್ಲ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.
ಕಳೆದ ಡಿಸೆಂಬರ್.06ರ ಶುಕ್ರವಾರವಷ್ಟೇ ಹೈದ್ರಾಬಾದ್ ಹೊರವಲಯ ಚಟಾನ್ ಪಲ್ಲಿ ಬಳಿ ಮಧ್ಯರಾತ್ರಿ 2.30ರ ಸಮಯದಲ್ಲಿ ಸ್ಥಳ ಮಹಜರುಗೆ ಆರೋಪಗಳನ್ನು ಕರೆದುಕೊಂಡು ಹೋಗಲಾಗಿತ್ತು. ಇದೇ ವೇಳೆ ಆರೋಪಿಗಳು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದರು. ನಾಲ್ವರ ಪೈಕಿ ಇಬ್ಬರು ಪೊಲೀಸರ ಪಿಸ್ತೂಲ್ ಕಿತ್ತುಕೊಂಡರು. ಇದರಿಂದ ಬೆದರಿದ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಫೈರಿಂಗ್ ನಡೆಸಿದರು. ಈ ವೇಳೆ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ನಾಲ್ವರು ಆರೋಪಿಗಳು ಬಲಿಯಾಗಿದ್ದರು.












Click it and Unblock the Notifications