ಆಂಧ್ರದಲ್ಲಿ ಕೊರೊನಾ ಭೀತಿ ನಡುವೆಯೇ ಬಜೆಟ್ ಮಂಡನೆ
ಅಮರಾವತಿ, ಜೂನ್ 17 : ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೇ ಆಂಧ್ರಪ್ರದೇಶದಲ್ಲಿ ಬಜೆಟ್ ಅಧಿವೇಶನ ಆರಂಭವಾಗಿದೆ. ಜೂನ್ 30ರೊಳಗೆ ಬಜೆಟ್ಗೆ ಅನುಮೋದನೆ ಪಡೆಯಲಾಗುತ್ತದೆ. ಕೊರೊನಾ ಸಂದರ್ಭದಲ್ಲಿ ಅಧಿವೇಶನ ನಡೆಸುತ್ತಿರುವ ಮೊದಲ ರಾಜ್ಯ ಇದಾಗಿದೆ.
Recommended Video
ರಾಜ್ಯಪಾಲ ಬಿಸ್ವಾ ಭೂಷಣ್ ಹರಿಚಂದನ್ ಮಂಗಳವಾರ ವಿಧಾನಸಭೆಯ ಉಭಯ ಕಲಾಪಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಬಜೆಟ್ ಅಧಿವೇಶನಕ್ಕೆ ಚಾಲನೆ ನೀಡಿದರು. ರಾಜಭವನದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಕಲಾಪ ಉದ್ದೇಶಿಸಿ ಭಾಷಣ ಮಾಡಿದರು.
ಇದೇ ಮೊದಲ ಬಾರಿಗೆ ರಾಜ್ಯಪಾಲರೊಬ್ಬರು ವಿಡಿಯೋ ಕಾನ್ಫರೆನ್ಸ್ ಮೂಲಕ ಜಂಟಿ ಕಲಾಪ ಉದ್ದೇಶಿಸಿ ಮಾತನಾಡಿದರು. ಹಲವು ವಿಧಾನಸಭೆ ಮತ್ತು ಪರಿಷತ್ ಸದಸ್ಯರು ತಮ್ಮ ಮನೆಗಳಲ್ಲಿಯೇ ಕುಳಿತು ಭಾಷಣ ಆಲಿಸಿದರು.

ಅಧಿವೇಶನದ ಮೊದಲ ದಿನವೇ ಹಣಕಾಸು ಸಚಿವ ಬುಗ್ಗನ್ ರಾಜೇಂದ್ರನಾಥ್ ರೆಡ್ಡಿ ಬಜೆಟ್ ಮಂಡನೆ ಮಾಡಿದರು. ವಿಧಾನಸಭೆಯಲ್ಲಿಯೂ ಸಾಮಾಜಿಕ ಅಂತರ ಕಾಪಾಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮಗಳನ್ನು ಹೊರತುಪಡಿಸಿ ಬೇರೆ ಯಾರೂ ಸಹ ಪ್ರವೇಶ ಮಾಡದಂತೆ ನಿಷೇಧ ಹೇರಲಾಗಿದೆ.
ಆರೋಗ್ಯ ಇಲಾಖೆ ಇದುವರೆಗೂ ಕೋವಿಡ್ - 19 ಪರೀಕ್ಷೆ ಮಾಡಿಸಿಕೊಳ್ಳದ ಶಾಸಕರಿಗೆ ಪರೀಕ್ಷೆ ಮಾಡಿದೆ. ಸಾಮಾನ್ಯವಾಗಿ ಬಜೆಟ್ ಅಧಿವೇಶನ ಎರಡು ವಾರಗಳ ಕಾಲ ನಡೆಯುತ್ತಿತ್ತು. ಆದರೆ, ಈ ಬಾರಿ ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಬೇಗ ಮುಕ್ತಾಯಗೊಳ್ಳಲಿದೆ.
ವಿಧಾನ ಪರಿಷತ್ನಲ್ಲಿ ಉಪ ಮುಖ್ಯಮಂತ್ರಿ ಪಿ. ಸುದರ್ಶನ್ ಚಂದ್ರಬೋಸ್ ಬಜೆಟ್ ಮಂಡನೆ ಮಾಡಿದರು. ಕೃಷಿ ಬಜೆಟ್ ಅನ್ನು ಪ್ರತ್ಯೇಕವಾಗಿ ಕೃಷಿ ಸಚಿವ ಕನ್ನಾ ಬಾಬು ಮಂಡನೆ ಮಾಡಿದರು. ಎರಡು ದಿನಗಳ ಕಾಲ ಬಜೆಟ್ ಮೇಲಿನ ಚರ್ಚೆಗೆ ಅವಕಾಶ ನೀಡಲಾಗಿದೆ.
ಮಾರ್ಚ್ನಲ್ಲಿ ಆಂಧ್ರಪ್ರದೇಶ ಬಜೆಟ್ ಅಧಿವೇಶನ ನಡೆದಿತ್ತು. ಆದರೆ, ಕೊರೊನಾ ವೈರಸ್ ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗಿರಲಿಲ್ಲ. ಮೂರು ತಿಂಗಳಿಗೆ ಲೇಖಾನುದಾನ ಮಾತ್ರ ಮಂಡನೆ ಮಾಡಲಾಗಿತ್ತು.
ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 6720, 88 ಜನರು ಇದುವರೆಗೂ ಮೃತಪಟ್ಟಿದ್ದಾರೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 3119.












Click it and Unblock the Notifications