ನವಜಾತ ಶಿಶುವನ್ನು ನೀರಿನ ಕಾಲುವೆಗೆ ಎಸೆದ ದಂಪತಿ!
ಅಮರಾವತಿ, ಜುಲೈ 20 : ಮರಣ ಹೊಂದಿದ ನವಜಾತ ಶಿಶುವನ್ನು ದಂಪತಿಗಳು ನೀರಿನ ಕಾಲುವೆಗೆ ಎಸೆದ ಘಟನೆ ಕರ್ನೂಲ್ನಲ್ಲಿ ನಡೆದಿದೆ. ಮಗು ಕೋವಿಡ್ - 19ನಿಂದ ಮೃತಪಟ್ಟಿದೆ ಎಂದು ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲು ನಿರಾಕರಿಸಿದ್ದರು.
ಕರ್ನೂಲ್ ಜಿಲ್ಲೆಯ ಚಾಬೌಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೀರಿನ ಕಾಲುವೆಯಲ್ಲಿ ಶವ ತೇಲುತ್ತಿದ್ದನ್ನು ನೋಡಿದ ಪೊಲೀಸರು ಗ್ರಾಮಸ್ಥರ ಮನವೊಲಿಸಿ ಅಂತ್ಯ ಸಂಸ್ಕಾರವನ್ನು ಮಾಡಲು ಒಪ್ಪಿಗೆ ಕೊಡಿಸಿದರು.
ಮಾದಾರ ಬಾಯಿ ಎಂಬ ಮಹಿಳೆ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಮಗುವಿಗೆ ಜನ್ಮ ನೀಡಿದ್ದಳು. ಶನಿವಾರ ಬೆಳಗ್ಗೆ ಮಗು ಮೃತಪಟ್ಟಿತು. ಮಹಿಳೆಯ ಪತಿ ಗ್ರಾಮಸ್ಥರಿಗೆ ಮಗು ಮೃತಪಟ್ಟ ವಿಷಯ ತಿಳಿಸಿ, ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುವಂತೆ ಮಾಹಿತಿ ನೀಡಿದ್ದರು.

ಮಗುವಿನ ಶವದ ಜೊತೆ ಗ್ರಾಮಕ್ಕೆ ಬಂದ ಪೋಷಕರಿಗೆ ಅಘಾತ ಕಾದಿತ್ತು. ಮಗು ಕೋವಿಡ್ -19ನಿಂದ ಮೃತಪಟ್ಟಿರಬಹುದು ಎಂದು ಶಂಕಿಸಿದ ಗ್ರಾಮಸ್ಥರು ಅಂತ್ಯ ಸಂಸ್ಕಾರಕ್ಕೆ ಸ್ಥಳ ನೀಡಲು ನಿರಾಕರಿಸಿದರು. ಬೇರೆ ದಾರಿ ಕಾಣದ ದಂಪತಿಗಳು ಶವವನ್ನು ನಾಲೆಗೆ ಎಸೆದರು.
ನಾಲೆಯಲ್ಲಿ ಶವ ಕಂಡ ಕೆಲವು ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಘಟನೆ ಬಗ್ಗೆ ತಿಳಿದು ಗ್ರಾಮಸ್ಥರ ಮನವೊಲಿಸಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟರು. ಈ ಪ್ರಕರಣದ ಬಗ್ಗೆ ಯಾವುದೇ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications