ಆಂಧ್ರ ಪ್ರದೇಶ ಕನಸಿನ ರಾಜಧಾನಿ ಅಮರಾವತಿ ನಿರ್ಮಾಣ ಅಸಲಿ ಸತ್ಯಗಳು
ಅಮರಾವತಿ, ಮಾ. 18: ಐದು ವರ್ಷದ ಹಿಂದೆ ಕರಕಟ್ಟಾ ರಸ್ತೆ ಮಾರ್ಗವಾಗಿ ಸಂಚರಿಸಿದ್ರೆ ಸಿಗೋದೇ ಅಮರಾವತಿ. ಅತ್ತ ಕಣ್ಣಾಡಿಸಿದ್ರೆ ಹಚ್ಚ ಹಸಿರಿನ ಭತ್ತದ ಗದ್ದೆಗಳು. ಹಸಿರು ಹಾಸಿಗೆ ಹೊದ್ದು ಮಲಗಿರುವ ಬಾಳೆ ತೋಟಗಳು. ರೈತರ ನೆಮ್ಮದಿ ದೋತ್ಯಕವಾಗಿರುವ ಮೆಣಸು, ಅರಿಶಿನ ಬೆಳೆಗಳದ್ದೇ ಕಾರುಬಾರು. ಕೃಷ್ಣೆಯ ಫಲವತ್ತಾದ ಭೂಮಿ ಸದಾ ಹಸಿರಿನಿಂದ ಕಂಗಳಿಸುತ್ತಿತ್ತು. ಇಲ್ಲಿನ ರೈತರದ್ದು ಹಸನ್ಮುಖಿ ಜೀವನ...
ಈಗ ಅದೇ ಮಾರ್ಗವಾಗಿ ಹೋದ್ರೆ ಕಾಣೋದು ಕೃಷ್ಣೆ ಹರಿಯುವ ಅಂಗಳದಲ್ಲಿ ಗೆದ್ದಲು ತಿಂದ ಕಂಬಿಗಳು. ರಸ್ತೆ ಬದಿ ತುಕ್ಕು ಹಿಡಿಯುವ ಪೈಪುಗಳು. ಎಮ್ಮೆ- ಹಸುಗಳ ಅಲೆದಾಟ, ಎಂದೋ ಹಾಕಿದ ಅಡಿಪಾಯಗಳು. ಹಸಿರು ಮಾಯವಾಗಿ ಅರ್ಧಕ್ಕೆ ನಿಂತ ಕಟ್ಟಡಗಳ ಅವಶೇಷಗಳು. ವೈ.ಎಸ್. ಜಗನ್ ಅವರ ಕನಸಿನ ರಾಜಧಾನಿ ಅಮರಾವತಿ ಇವತ್ತಿನ ಸ್ಥಿತಿಯ ಬಗ್ಗೆ 'ನ್ಯೂಸ್ ಮಿನಿಟ್' ಅಸಲಿ ಚಿತ್ರಣವನ್ನು ಕಟ್ಟಿಕೊಟ್ಟಿದೆ.
2014 ರಲ್ಲಿ ಅಮರಾವತಿ ರಾಜಧಾನಿ ನಿರ್ಮಾಣಕ್ಕೆ ಅಗತ್ಯವಿದ್ದ ಜಮೀನು ಸಂಗ್ರಹಿಸಲಿಕ್ಕೆ ಹಸಿರಿನಿಂದ ಕಂಗಳಿಸುತ್ತಿದ್ದ ರೈತರ 33,000 ಸಾವಿರ ಎಕರೆ ಜಮೀನನ್ನು ಪಡೆದಿತ್ತು. ನಾನಾ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಖ್ಯಾತ ನಗರ ನಿರ್ಮಾಣ ತಜ್ಞರಿಂದ ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಕೃಷ್ಣಾ ನದಿಯ ದಂಡೆ ಮೇಲೆ ತಲೆಯತ್ತಲಿದ್ದ ಅಮರಾವತಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬಹುದೊಡ್ಡ ಕನಸು ಕಂಡಿದ್ದರು ಕೂಡ.
ಅಮರಾವತಿ ನಿರ್ಮಾಣ ಮಾಡುವುದು ಹಾಲಿ ಸಿಎಂ ಜಗನ್ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ತಲೆಯೆತ್ತ ಬೇಕಿದ್ದ ಗಗನ ಚುಂಬಿ ಕಟ್ಟಡಗಳ ಜಾಗ ಕಾಡಿನಂತಾಗಿದೆ, ಪೊದೆ, ಹುಲ್ಲು ಬೆಳೆದು ನಿಂತಿದೆ. ಈಗಾಗಲೇ ಆಂಧ್ರ ಪ್ರದೇಶ ಸರ್ಕಾರ ಸಾಲದ ಸುಳಿಗೆ ಸಿಲುಕಿ ಕಂಗಾಲಾಗಿದೆ. ಎರವಲು ಪಡೆದ ಸಾಲುದಿಂದ ಸಂಕಷ್ಟ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕನಸಿನ ರಾಜಧಾನಿ ಅಮರಾವತಿ ನಿರ್ಮಾಣ ಯೋಜನೆ ಈಗಲೇ ಸಾಲದಲ್ಲಿ ಸಿಲುಕಿರುವ ಜಗನ್ ಸರ್ಕಾರಕ್ಕೆ ರಕ್ತಸ್ರಾವವನ್ನೇ ಉಂಟು ಮಾಡಿದೆ. ಅಮರಾವತಿ ನಿರ್ಮಾಣ ಜಗನ್ ಸರ್ಕಾರವನ್ನು ಮತ್ತಷ್ಟು ಅರ್ಥಿಕ ಸಂಕಷ್ಟಕ್ಕೆ ಸಿಲುಕಿಸುವ ಮುನ್ಸೂಚನೆ ನೀಡಿದೆ.

ಟಿಡಿಪಿ ಭೂ ಸ್ವಾಧೀನ ನೀತಿ:
ತೆಲಂಗಾಣ ಪ್ರತ್ಯೇಕ ರಾಜ್ಯವಾದ ಬಳಿಕ ರಾಜಧಾನಿ ಹೈದರಾಬಾದ್ ತೆಲಂಗಾಣಕ್ಕೆ ಸೇರ್ಪಡೆಯಾಯಿತು. ಆಂಧ್ರ ಪ್ರದೇಶಕ್ಕೆ ಪ್ರತ್ಯೇಕ ರಾಜಧಾನಿ ನಿರ್ಮಾಣ ಅನಿವಾರ್ಯವಾಯಿತು. 2014 ರಲ್ಲಿ ಆಂಧ್ರ ಪ್ರದೇಶ ಪ್ರತ್ಯೇಕ ರಾಜಧಾನಿಯನ್ನು ಅಮರಾವತಿಯಲ್ಲಿ ನಿರ್ಮಿಸಲು ನಿರ್ಧರಿಸಲಾಗಿತ್ತು. ಇದಕ್ಕೆ ಬೇಕಿರುವ ಜಮೀನನ್ನು ರೈತರಿಂದ ವಶಪಡಿಸಿಕೊಳ್ಳಲು ಅಂದಿನ ಸಿಎಂ ಚಂದ್ರಬಾಬು ನಾಯ್ಡು ಲ್ಯಾಂಡ್ ಪೂಲಿಂಗ್ ಯೋಜನೆ ( ರೈತ ಸ್ನೇಹಿ ಭೂ ಸ್ವಾಧೀನ ಯೋಜನೆ) ಜಾರಿಗೆ ತಂದಿದ್ದರು. ಅಮರಾವತಿಯಿಂದ ಸಂಕಷ್ಟಕ್ಕೆ ಒಳಗಾಗಲಿರುವ ಶೇ. 70 ರಷ್ಟು ರೈತರ ಸಮ್ಮತಿ ಮೇರೆಗೆ ಈ ವಿಶೇಷ ಭೂ ಸ್ವಾಧೀನ ಯೋಜನೆ ಜಾರಿ ಮಾಡಿ ರೈತರ ವೈಯಕ್ತಿಕ ಹೆಸರಿನಲ್ಲಿ ಸರ್ಕಾರ ಒಡಂಬಡಿಕೆ ಮಾಡಿಕೊಂಡಿತ್ತು. ಅಂಧ್ರ ಪ್ರದೇಶ ರಾಜಧಾನಿ ವಲಯ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಅಡಿ ಪರಿಹಾರ ನಿಯಮಗಳನ್ನು ರೂಪಿಸಲಾಗಿತ್ತು.
ಭೂಮಿ ಕೊಟ್ಟ ರೈತರಿಗೆ ಪರ್ಯಾಯ ಭೂಮಿ, ವಾಣಿಜ್ಯ ಕಟ್ಟಡ, ಐಷಾರಾಮಿ ಪ್ಲಾಟ್ ಪರಿಹಾರವಾಗಿ ನೀಡುವುದು ಯೋಜನೆಯ ಭಾಗವಾಗಿತ್ತು. ಕೃಷ್ಣ ನದಿ ತಳದಲ್ಲಿ ಒಂದು ಎಕರೆ ಜಮೀನು ನೀಡಿದ ರೈತರಿಗೆ ಒಂದು ಸಾವಿರ ಚದರಡಿ ವಸತಿ ಪ್ಲಾಟ್, 450 ಚದರಡಿ ವಾಣಿಜ್ಯ ಕಟ್ಟಡ ನೀಡುವುದು. ನೀರಾವರಿಯೇತರ ಭೂಮಿಗೆ 250 ಚದರಡಿ ವಾಣಿಜ್ಯ ಕಟ್ಟಡ ನೀಡುವುದು, ಪರ್ಯಾವಾಗಿ ವಶಪಡಿಸಿಕೊಂಡ ಭೂಮಿಗೆ ಪರ್ಯಾಯ ಜಮೀನು ನೀಡುವುದು, ಇದರ ಜತೆಗೆ ನೀರಾವರಿ ಎಕರೆ ಜಮೀನಿಗೆ ವಾರ್ಷಿಕ 50 ಸಾವಿರ, ಬೆಳೆ ಪರಿಹಾರ, ನೀರಾವರಿಯೇತರ ಎಕರೆ ಭೂಮಿಗೆ 30 ಸಾವಿರ ರೂ. ಬೆಳೆ ಪರಿಹಾರ ನೀಡುವುದು ಒಡಂಬಡಿಕೆಯ ಭಾಗವಾಗಿತ್ತು. ಪ್ರತಿ ವರ್ಷ ಶೇ. 10 ರಷ್ಟು ಹೆಚ್ಚಳ ದೊಂದಿಗೆ ಹತ್ತು ವರ್ಷ ನೀಡುವುದು. ಇದರ ಪ್ರಕಾರ ಪ್ರತಿ ತಿಂಗಳು ಸರ್ಕಾರ 2500 ಕೋಟಿ ರೂ. ಪಾವತಿ ಮಾಡಬೇಕಿತ್ತು.

ಅಮರಾವತಿ ನಿರ್ಮಾಣಕ್ಕೆ ಅಗತ್ಯ ಭೂಮಿ ಸಿಕ್ಕಿತ್ತು
ಇಂತಹ ರೈತ ಪರ ಭೂ ಸ್ವಾಧೀನ ಯೋಜನೆ ಕೆಲ ರೈತರಿಗೆ ಇಷ್ಟವಾಗಲಿಲ್ಲ. ಸರ್ಕಾರದ ಪರಿಹಾರ ನಿರಾಕರಿಸಿ ಭೂಮಿ ನೀಡಲು ರೈತರು ನಿರಾಕರಿಸಿದರು. ಇದರ ನಡುವೆ ಜಮೀನು ಸ್ವಾಧೀನಕ್ಕೆ ಮುಂದಾದ ನಾಯ್ಡು ಸರ್ಕಾರದ ವಿರುದ್ಧ ಕೆಲ ರೈತರು ನ್ಯಾಯಾಲಯದಿಂದ ತಡಯಾಜ್ಞೆ ತಂದರು. ಇದರ ನಡುವೆ ಯೋಜನೆಗೆ ಬೇಕಾದ ಜಮೀನು ಸಿಕ್ಕಿದ್ದು, ಅಮರಾವತಿ ನಿರ್ಮಾಣಕ್ಕೆ ಅಗತ್ಯ ಭೂಮಿ ಸಿಕ್ಕಿತ್ತು. ಅಂದುಕೊಂಡಂತೆ ಆಗಿದ್ದಲ್ಲಿ ದೇಶದ ಯೋಜಿತ ರಾಜಧಾನಿ ಅಮರಾವತಿ ನಿರ್ಮಾಣವಾಗಬೇಕಿತ್ತು. ಗಗನ ಚುಂಬಿ ಕಟ್ಟಡಗಳಿಂದ ನಗಬೇಕಿತ್ತು. ಆದರೆ ಇವತ್ತಿನ ಅಮರಾವತಿ ಪರಿಸ್ಥಿತಿಯೇ ಬೇರೆ.
ನ್ಯಾಯಾಧೀಶರ ಬಂಗಲೆ, ಸಚಿವರ ಅರಮನೆಗಳು, ಐಎಎಸ್ ಅಧಿಕಾರಿಗಳ ಕ್ವಾಟ್ರಸ್, ಗೆಜೆಟೆಡ್ ಅಧಿಕಾರಿಗಳ ಕಟ್ಟಡಗಳು ನಿರ್ಮಾಣ ಹಂತದಲ್ಲಿಯೇ ನಿಂತು ಹುಲ್ಲು- ಪೊದೆಗಳು ಬೆಳೆದಿವೆ. ಡ್ರೈನೇಜ್ ಪೈಪುಗಳು ರಸ್ತೆಗಳ ಬದಿ ಬಿದ್ದು ದೂಳು ತಿನ್ನುತ್ತಿವೆ. ಮತ್ತೊಂದೆಡೆ ಆಂಧ್ರ ಪ್ರದೇಶ ರಾಜ್ಯದ ಸೆಕ್ರೇಟಿಯೇಟ್ ಗಗನ ಚುಂಬಿ ಕಟ್ಟಡಗಳು ಭಾವಚಿತ್ರಗಳು ಕಾಣಿಸುತ್ತವೆ. ವಾಸ್ತವದಲ್ಲಿ ಶಂಕು ಸ್ಥಾಪನೆಯಲ್ಲಿಯೇ ನಿರ್ಮಾಣ ಸ್ಥಗಿತಗೊಂಡಿದೆ. ಮಹತ್ವಾಕಾಂಕ್ಷಿ ನಿರ್ಮಾಣ ಯೋಜನೆಗಳ ಬೋರ್ಡ್ ಗಳು ಬಿಟ್ಟರೆ ಜಾಗದಲ್ಲಿ ಬೇಲಿ ಪೊದೆಗಳು ಬೆಳೆದು ನಿಂತಿವೆ.

ಆಂಧ್ರ ಪ್ರದೇಶ ಹೈಕೋರ್ಟ್ ಶಂಕು ಸ್ಥಾಪನೆ
ಎರಡು ಹೆಜ್ಜೆ ಮುಂದಿಟ್ಟು ಸಾಗಿದರೆ, 2019 ರಲ್ಲಿ ಹಾಕಿದ ಹೈಕೋರ್ಟ್ ನಿರ್ಮಾಣದ ಅಡಿಗಲ್ಲು ಕಾಣುತ್ತದೆ. 2019 ರಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾ. ರಂಜನ್ ಗೋಗಾಯ್ ಶಂಕು ಸ್ಥಾಪನೆ ಮಾಡಿದ ಕಲ್ಲು ಬಿಟ್ಟರೆ ಅಲ್ಲಿ ಕಟ್ಟಡ ನಿರ್ಮಾಣವೇ ಆಗಿಲ್ಲ!
ಅರ್ಧಕ್ಕೆ ನಿಂತ ಬಂಗ್ಲೆಗಳು: ರೈತರ ಅಸಹಾಯಕ ನುಡಿಗಳು:
ಹೈಕೋರ್ಟ್ ಶಂಕು ಸ್ಥಾಪನೆ ಜಾಗದಿಂದ ಸ್ವಲ್ಪ ಕ್ರಮಿಸಿದರೆ ಸಾಕು ಅರ್ಧಕ್ಕೆ ನಿಂತ ಬಂಗಲೆಗಳು ಕಣ್ಣಿಗೆ ಕಾಣುತ್ತವೆ. ಎಲ್ಲವೂ ಸಂಪೂರ್ಣವಾಗಬೇಕಾದರೆ ಇನ್ನೊಂದು ದಶಕ ಬೇಕಾಗಬಹುದೇನೋ ಎಂಬ ಭಾವನೆ ಮೂಡುತ್ತದೆ. ಅರ್ಧಕ್ಕೆ ನಿಂತಿರುವ ಬಂಗಲೆಗಳ ನಿರ್ಮಾಣದ ಉಪಕರಣಗಳು ಕಳುವು ಆಗದಂತೆ ಸೆಕ್ಯುರಿಟಿ ಗಾರ್ಡ್ ನಿಯೋಜಿಸಲಾಗಿದೆ. ಮೂರು ಎಕರೆ ಜಮೀನನ್ನು ಸೆಕ್ಯುರಿಟಿ ಗಾರ್ಡ್ ರವೀಂದ್ರ ಅಮರಾವತಿ ಯೋಜನೆಗೆ ನೀಡಿದ್ದರು. ನಮ್ಮ ಕುಟುಂಬಕ್ಕೆ ಮೂರು ಎಕರೆಗೆ ಪರಿಹಾರವಾಗಿ, 2 ಸಾವಿರ ಚದರಡಿ ವಾಣಿಜ್ಯ ಪ್ಲಾಟ್ ನೀಡಿದ್ದಾಗಿ ತಿಳಿಸಿದ್ದಾರೆ. ಸೆಕ್ಯುರಿಟಿಯಾಗಿ ಬದಲಾಗಿರುವ ರೈತನನ್ನು ಕೇಳಿದರೆ, ಕೃಷಿ ಕೆಲಸಕ್ಕೆ ಹೋಲಿಸಿದ್ರೆ ಕಷ್ಟವಾದ್ರೂ ಕೃಷಿಯೇ ಒಳ್ಳೆಯ ಕೆಲಸ. ಬೇಕಾದ ಬೆಳೆ ಬೆಳೆಯುತ್ತೇವೆ. ಈಗ ತಿಂಗಳಿಗೆ ಹತ್ತು ಸಾವಿರ ಸಂಬಳ ಪಡೆಯುತ್ತಿದ್ದೇನೆ ಎಂದು ತನ್ನ ಮನದಾಳದ ಮಾತು ಹಂಚಿಕೊಂಡರು.

ನನ್ನ ಅಗತ್ಯಕ್ಕೆ ಬೇಕಾದಷ್ಟು ದುಡಿಮೆ ಮಾಡುತ್ತಿದ್ದೆ
ಮತ್ತೊಬ್ಬ ವಾಚ್ ಮ್ಯಾನ್ ತುಳ್ಳೂರು ಗ್ರಾಮದ ಕಿಶೋರ್, ಈತ ಕೂಡ ಮೊದಲು ರೈತ. ತನ್ನ ಜಮೀನನ್ನು ಅಮರಾವತಿ ಯೋಜನೆಗೆ ಕೊಟ್ಟು ಈಗ ವಾಚ್ ಮ್ಯಾನ್ ಆಗಿದ್ದಾರೆ. ಕೇಳಿದರೆ, ನಮ್ಮ ಅವಕಾಶ ಬಳಿಸಿಕೊಂಡು ಸಾಲ ಕೊಟ್ಟು ಹೋದರು. ಐದು ಲಕ್ಷ ಸಾಲ ಪಡೆದ ನಾನು ತಿಂಗಳಿಗೆ ಹತ್ತು ಸಾವಿರ ರೂ. ಬಡ್ಡಿ ಕಟ್ಟುತ್ತಿದ್ದೇನೆ, ನನಗೆ ಮೂರು ಜನ ಮಕ್ಕಳಿದ್ದಾರೆ. ಎಲ್ಲರೂ ಓದುತ್ತಿದ್ದಾರೆ. ಅವರ ಶಾಲಾ ಶುಲ್ಕ ಕಟ್ಟಲಾಗುತ್ತಿಲ್ಲ. ನಾನು ಭೂಮಿಯಲ್ಲಿ ಕೃಷಿ ಮಾಡುವಾಗ, ನನ್ನ ಅಗತ್ಯಕ್ಕೆ ಬೇಕಾದಷ್ಟು ದುಡಿಮೆ ಮಾಡುತ್ತಿದ್ದೆ. ಒಂದು ಎಕರೆಗೆ ಒಂದು ಬೆಳೆಗೆ 30 ಸಾವಿರ ರೂಪಾಯಿ ಲಾಭ ಮಾಡುತ್ತಿದ್ದೆ. ವರ್ಷಕ್ಕೆ ಎರಡು ಮೂರು ಬೆಳೆ ಬೆಳೆಯುತ್ತಿದ್ದೆವು. ಆದರೆ ಕೃಷಿ ಪರಿಹಾರವಾಗಿ ವರ್ಷಕ್ಕೆ 48 ಸಾವಿರ ಕೊಡ್ತಿದ್ದಾರೆ. ಯಾವುದಕ್ಕೂ ಸಾಕಾಗುತ್ತಿಲ್ಲ ಎಂದು ತನ್ನ ಅನುಭವ ಹಂಚಿಕೊಂಡರು.

ಈಗ ನಿವೇಶನ ಮಾರಿಕೊಂಡರೆ ಭವಿಷ್ಯದ ಕತೆ ಏನು?
ಕಿಶೋರ್ಗೆ ಸರ್ಕಾರ ಕೊಟ್ಟಿರುವ ರೆಸಿಡೆನ್ಸಿಯಲ್ ಪ್ಲಾಟ್ ಮತ್ತು ಕಮರ್ಷಿಯಲ್ ಪ್ಲಾಟ್ ಇನ್ನೂ ಸ್ವಾಧೀನಕ್ಕೆ ಸಿಕ್ಕಿಲ್ಲ. ಇನ್ನು ಮೂಲಭೂತ ಸೌಕರ್ಯವಿಲ್ಲದೇ ಮಾರಾಟ ಮಾಡಲು ತೀರಾ ಕಡಿಮೆ ಬೆಲೆಗೆ ಕೇಳ್ತಾರೆ. ಈಗ ನಿವೇಶನ ಮಾರಿಕೊಂಡರೆ ಭವಿಷ್ಯದಲ್ಲಿ ಮಕ್ಕಳ ಮದುವೆ ಮಾಡಲಿಕ್ಕೆ ಕಷ್ಟ. ಅವರ ಭವಿಷ್ಯಕ್ಕಾಗಿ ಎರಡನ್ನೂ ಹಾಗೇ ಉಳಿಸಿಕೊಂಡಿರುವುದಾಗಿ ಹೇಳುತ್ತಾರೆ.
ಭೂಮಿ ಕೊಟ್ಟ ರೈತರಿಗೆ ಹತ್ತು ವರ್ಷಗಳ ಕಾಲ ಬೆಳೆ ಪರಿಹಾರ ನೀಡುತ್ತಿದೆ. ಈ ಪರಿಹಾರ ಹಣದಿಂದ ಪರ್ಯಾಯ ಉದ್ಯೋಗ ಕಂಡುಕೊಂಡು ಆದಾಯ ಹೆಚ್ಚಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ನೀಡಲಾಗುತ್ತಿದೆ. ಇದರ ಬಗ್ಗೆ ಅಮರಾವತಿ ವಲಯದ ರೈತ ಸ್ಯಾಮುಯಲ್ ಹೇಳುವ ಮಾತೇ ಬೇರೆ. ಅಮರಾವತಿ ಯೋಜನೆಗೆ ಭೂಮಿ ಕೊಟ್ಟ ಬಳಿಕ ಎರಡು ಎಮ್ಮೆ ಸಾಕಾಣಿಕೆ ಮಾಡಿಕೊಂಡು ಸರ್ಕಾರ ಕೊಡುತ್ತಿರುವ ಪರಿಹಾರಕ್ಕಿಂತಲೂ ಹೆಚ್ಚು ಸಂಪಾದನೆ ಮಾಡುತ್ತಿರುವುದಾಗಿ ತಿಳಿಸುತ್ತಾರೆ. ನನಗೆ ಪಿತ್ರಾರ್ಜಿತವಾಗಿ ಬಂದಿದ್ದ ಆಸ್ತಿಯಲ್ಲಿ ಪಾಲು ಕೇಳಿ ಸಹೋದರ ಕೋರ್ಟ್ ನಲ್ಲಿ ಕೇಸು ಹಾಕಿದ. ಪ್ಲಾಟ್ ನಿರ್ಮಾಣವಾದರೆ ಕೈತುಂಬಾ ಹಣ ಸಿಗುತ್ತದೆ ಎಂದು ಕೇಸು ದಾಖಲಿಸಿದ್ದು, ಅದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿಯೇ ಇದೆ ಎಂದು ತನ್ನ ವಾಸ್ತವ ಜೀವನವನ್ನು ಬಿಚ್ಚಿಟ್ಟರು.

ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಲಿಲ್ಲ
2019 ರಲ್ಲಿ ಸಿಎಂ ಆಗಿ ಜಗನ್ ಆಯ್ಕೆಯಾದ ಬಳಿಕ ಅಮರಾವತಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಲಿಲ್ಲ. ಆಂಧ್ರ ಪ್ರದೇಶ ರಾಜಧಾನಿ ನಿರ್ಮಾಣ ಪ್ರಾಧಿಕಾರ ಮಾತ್ರ ಸರ್ಕಾರ ಬದಲಾದರೂ ಒಂದಷ್ಟು ಪ್ರಗತಿ ಕಾರ್ಯಗಳನ್ನು ಮುಂದುವರೆಸುತ್ತಿದೆ. ರಾಜಧಾನಿ ವಲಯ ನಿರ್ಮಾಣ ಅಭಿವೃದ್ಧಿ ಪ್ರಾಧಿಕಾರ ಒಂದಷ್ಟು ಕೆಲಸಗಳನ್ನು ನಿರಂತವಾಗಿ ಮಾಡುತ್ತಿದೆ. ಹೈಕೋರ್ಟ್ಗೆ ಹೆಚ್ಚುವರಿ ಕೋರ್ಟ್ ಹಾಲ್ ಸಮೇತ ಜ್ಯುಡಿಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುತ್ತಿದೆ. ಕರಕಟ್ಟ ಎರಡು ಲೇನ್ ರಸ್ತೆ ನಿರ್ಮಾಣಕ್ಕಾಗಿ ಸರ್ಕಾರ 150 ಕೋಟಿ ಮಂಜೂರು ಮಡಿದೆ. ರೈತರಿಗೆ ಕೊಡಬೇಕಿರುವ ವಾಣಿಜ್ಯ ಕಟ್ಟಡಗಳ ಸಂಕೀರ್ಣ ನಿರ್ಮಾಣ ಕಾರ್ಯ ಮಾಡುತ್ತಿದ್ದೇವೆ. ಸ್ಮಾರ್ಟ್ ಸಿಟಿ ಕೆಲಸಗಳು ಐದು ನೂರು ಕೋಟಿ ಮೊತ್ತದಲ್ಲಿ ಸಾಗುತ್ತಿವೆ. 69 ಕೇಂದ್ರ ಹಾಗೂ ರಾಜ್ಯ ಸಂಸ್ಥೆಗಳಿಗೆ ಹಾಗೂ 61 ಖಾಸಗಿ ಸಂಸ್ಥೆಗಳಿಗೆ ಭೂಮಿ ಕೊಡುವ ಪ್ರಕ್ರಿಯೆ ಕೂಡ ಮುಂದುವರೆದಿದೆ ಎನ್ನುತ್ತಾರೆ ಸಿಅರ್ಡಿಎ ಅಧಿಕಾರಿಗಳು.
ಮೂರು ಸಾವಿರ ಕೋಟಿ ಸಾಲ ಮಾಡಲು ಸಿಅರ್ಡಿಎಗೆ ಸರ್ಕಾರ ಸಾಲದ ಭದ್ರತೆ ನೀಡಿದೆ. ಈಗಾಗಲೇ ಸಚಿವ ಸಂಪುಟ ಅನುಮೋದನೆ ಕೊಟ್ಟಿದೆ. ಕ್ರೆಡಾ ಇತ್ತೀಚೆಗೆ 194 ಕೋಟಿ ರೂ. ಸಾಲ ಪಡೆದಿದ್ದು, 94 ಕೋಟಿ ರೂ. ಈಗಾಗಲೇ ಬ್ಯಾಂಕ್ಗಳಿಂದ ಪಡೆಯಲಾಗಿದೆ. ಈ ಹಣದಲ್ಲಿ ಅಖಿಲ ಭಾರತ ಸೇವೆ ಅಧಿಕಾರಿಗಳ ಕ್ವಾಟ್ರಸ್ ಮತ್ತು ಎಂಎಲ್ಎ ಮತ್ತು ಎಂಎಲ್ಸಿಗಳ ಕ್ವಾಟ್ರಸ್ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಚಂದ್ರಬಾಬು ನಾಯ್ಡು ಸರ್ಕಾರದ ಮಾಸ್ಟರ್ ಪ್ಲಾನ್ನಂತೆ ಅಮರಾವತಿ ನಿರ್ಮಾಣ ಅಸಾಧ್ಯ. ರಾಜ್ಯ ಸರ್ಕಾರಕ್ಕೆ ಅಗತ್ಯವಾದಷ್ಟು ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಮೂಲ ಮಾಸ್ಟರ್ ಪ್ಲಾನ್ ಬದಲಿಸಲಾಗಿದೆ. ಸರ್ಕಾರದಲ್ಲಿ ಅಗತ್ಯ ಇರುವ ಸಂಪನ್ಮೂಲ ಬಳಿಸಿಕೊಂಡು ಯೋಜನೆ ಕಾರ್ಯಗತಗೊಳಿಸಬೇಕಿದೆ ಎಂದು ಆಂಧ್ರ ಪ್ರದೇಶದ ಅಧಿಕಾರಿ ಮೂಲಗಳು ತಿಳಿಸಿದ್ದಾರೆ.
ಮಾಹಿತಿ ಕೃಪೆ: "news minute"












Click it and Unblock the Notifications