Fact Check: ಗುಜರಾತಿನ ದೇಗುಲದಿಂದ ನಕಲಿ ನೋಟು ಜಪ್ತಿ?
ಅಹಮದಾಬಾದ್, ಮೇ 7: ಲಾಕ್ಡೌನ್ ಸಂದರ್ಭದಲ್ಲಿ ಗುಜರಾತಿನ ದೇಗುಲವೊಂದರ ಮೇಲೆ ದಾಳಿ ನಡೆಸಲಾಗಿದ್ದು, ಅಪಾರ ಪ್ರಮಾಣದ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿದೆ. ಹಿಂದಿ ಭಾಷೆಯಲ್ಲಿರುವ ಈ ಪೋಸ್ಟ್ ಹಾಗೂ ಹಿಂದಿ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಪ್ರಕಾರ ದೇಗುಲಗಳಲ್ಲಿ ನಕಲಿ ನೋಟು ಉತ್ಪಾದನೆ, ಪೂರೈಕೆಯಾಗುತ್ತಿದೆ ಎಂಬರ್ಥದಲ್ಲಿ ಹೇಳಲಾಗಿದೆ.
ಇಡೀ ದೇಶದಲ್ಲಿ ಲಾಕ್ಡೌನ್ ಇರುವಾಗ, ದೇಗುಲ ಸೇರಿದಂತೆ ಎಲ್ಲಾ ಧಾರ್ಮಿಕ ಮಂದಿರಗಳನ್ನು ಬಂದ್ ಮಾಡಿರುವಾಗ, ಗುಜರಾತಿನ ಈ ದೇಗುಲದಲ್ಲಿ ನಕಲಿ ನೋಟು ಯಥೇಚ್ಛವಾಗಿ ಸಿಗುತ್ತಿದೆ ಎಂಬ ಸುದ್ದಿ ಪ್ರಸಾರವಾಗಿದೆ.
ಜೀ ಬಿಹಾರ್ ಜಾರ್ಖಂಡ್ ಹೆಸರಿನ ವಾಹಿನಿಯಿಂದ ಬಂದ ಸುದ್ದಿ ತಿಳಿದು ಅನೇಕ ಮಂದಿ ಗಾಬರಿಗೊಂಡಿದ್ದರು. ಗುಜರಾತಿನ ಸೂರತ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಸ್ವಾಮಿನಾರಾಯಣ್ ದೇಗುಲದಲ್ಲಿ ಈ ವ್ಯವಹಾರ ನಡೆದಿದೆ ಎಂದು ಸುದ್ದಿ ಮಾಡಲಾಗಿತ್ತು. ದೇಗುಲದ ಅರ್ಚಕ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಸುದ್ದಿಯಲ್ಲಿದೆ.

ಸತ್ಯಾಸತ್ಯತೆ: ಇದು ಕೊರೊನಾವೈರಸ್ ಸಂದರ್ಭದಲ್ಲಿ ನಡೆದ ಘಟನೆ ಅಲ್ಲ. ಲಾಕ್ಡೌನ್ ಅವಧಿಯಲ್ಲಿ ಯಾವುದೇ ದೇಗುಲದ ಬಾಗಿಲು ತೆರೆದಿಲ್ಲ, ಯಾವುದೇ ದೇಗುಲ ಜಪ್ತಿ ಮಾಡಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಸುದ್ದಿಯ ಜಾಡು ಹಿಡಿದು ಹೊರಟಾಗ ಸತ್ಯಾಸತ್ಯತೆ ಅರಿವಾಗುತ್ತದೆ.
ನವೆಂಬರ್ 2019ರಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು ನಿಜ. ಟಿವಿ 9 ಗುಜರಾತಿ 24 ನವೆಂಬರ್ 2019ರಂದು ಸುದ್ದಿ ಪ್ರಸಾರ ಮಾಡಿದೆ. ಸಮಾರು 1 ಕೋಟಿ ರು ಮೌಲ್ಯದ ನಕಲಿ ನೋಟು ಪತ್ತೆಯಾಗಿದ್ದು, ಐವರನ್ನು ಗುಜರಾತಿನ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಘಟನೆಗೂ ಲಾಕ್ಡೌನ್ ಸಂದರ್ಭದಲ್ಲಿ ಹಬ್ಬಿರುವ ವೈರಲ್ ಪೋಸ್ಟ್ ಗೂ ಸಂಬಂಧವಿಲ್ಲ ಎಂದು ತಿಳಿದು ಬರುತ್ತದೆ.












Click it and Unblock the Notifications