ಬಿಜೆಪಿಗೆ ಮತ್ತೊಂದು ಟಾಂಗ್ ನೀಡಿದ ಸಿದ್ದು ಸರಕಾರ
ಬೆಂಗಳೂರು, ಸೆ 10: ಬಿಜೆಪಿ ಸರಕಾರ ತನ್ನ ಅಧಿಕಾರದ ಅವಧಿಯಲ್ಲಿ ತೆಗೆದು ಕೊಂಡಿದ್ದ ಮಹತ್ತರ ಬದಲಾವಣೆಗೆ ಸಿದ್ದು ನೇತೃತ್ವದ ಕಾಂಗ್ರೆಸ್ ಸರಕಾರ ಬ್ರೇಕ್ ನೀಡಿದೆ.
ವಿವಿಧ ತರಗತಿಗಳ ಪಠ್ಯ ಪುಸ್ತಕಗಳಲ್ಲಿ ಬಿಜೆಪಿ ಸರಕಾರ ಕೇಸರೀಕರಣ ಮಾಡಿದೆ. ಮಕ್ಕಳಿಗೂ ತೊಂದರೆಯಾಗದಂತೆ ಮತ್ತು ಗೊಂದಲವಾಗದಂತೆ ಬರುವ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಪಠ್ಯ ಪುಸ್ತಕಗಳಲ್ಲಿ ಬದಲಾವಣೆ ಮಾಡಲಾಗಿದೆ.
ಪರಿಷ್ಕೃತ ಪಠ್ಯ ಪುಸ್ತಕಗಳು ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ವಿವಿಧ ಸಂಘ, ಸಂಸ್ಥೆಗಳಿಂದ ಬಂದ ದೂರಿನನ್ವಯ ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಪ್ರಾಥಮಿಕ ಮತ್ರು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ.

ಬಿಜೆಪಿ ಸರಕಾರ ತನ್ನ ಅಧಿಕಾರದ ಅವಧಿಯಲ್ಲಿ ಪಠ್ಯ ಪುಸ್ತಕಗಳಲ್ಲಿ ಹಲವಾರು ಆಕ್ಷೇಪಾರ್ಹ ಪದಗಳನ್ನು ಬಳಸಿಕೊಂಡಿತ್ತು. ಪಠ್ಯ ಪುಸ್ತಕದಲ್ಲಿ ಪುಣ್ಯಕೋಟಿ ಮತ್ತು ರಾಣಿ ಅಬ್ಬಕ್ಕನ ವಿಷಯದ ಬಗ್ಗೆ ಇರುವುದಕ್ಕೆ ಬಹಳಷ್ಟು ಮಂದಿ ಲಿಖಿತ ದೂರು ನೀಡಿದ್ದರು.
ಯಾವುದೇ ಜಾತಿ ಮತ್ತು ಕೋಮಿನವರನ್ನು ನೋಯಿಸುವ ಉದ್ದೇಶ ನಮ್ಮ ಸರಕಾರಕ್ಕಿಲ್ಲ. ಸಂವಿಧಾನದಲ್ಲಿ ನಮೂದಿಸಿದಂತೆ ಮುಂದಿನ ವರ್ಷಕ್ಕೆ ಅನ್ವಯವಾಗುವಂತೆ ಸೂಕ್ತ ಮಾರ್ಪಾಡು ಮಾಡಲು ಶಿಕ್ಷಣ ಇಲಾಖೆಗೆ ಈಗಾಗಲೇ ಆದೇಶ ನೀಡಲಾಗಿದೆ.
ಮಕ್ಕಳ ನಡುವೆ ಅಂತರ ಸೃಷ್ಟಿಸುವ ಕೆಲಸವನ್ನು ಕಳೆದ ಸರಕಾರ ಮಾಡಿತ್ತು. ನಮಗೆಲ್ಲರೂ ಒಂದೇ, ಶಿಕ್ಷಣದಲ್ಲಿ ಈ ತಾರತಮ್ಯ ಬೇಡ ಎಂದು ಈ ನಿರ್ಧಾರ ತೆಗೆದು ಕೊಂಡಿದ್ದೇವೆ ಎಂದು ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ.
ಪುಣ್ಯಕೋಟಿ ಮತ್ತು ರಾಣಿ ಅಬ್ಬಕ್ಕನ ವಿಷಯ ಶಾಲಾ ಪಠ್ಯ ಪುಸ್ತಕದಲ್ಲಿರುವುದು ವಿವಾದಕಾರಿಯೇ ಎಂದು ಹಲವಾರು ಮಂದಿ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications