ನೇಗಿಲು ಹೊತ್ತ ರೈತನ ಚಿಹ್ನೆಗಾಗಿ ಕೆಜೆಪಿ ಮನವಿ!
ಬೆಂಗಳೂರು, ಸೆ.2 : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಕೆಜೆಪಿ ಪಕ್ಷದ ಚಿಹ್ನೆಯನ್ನು ಬದಲಾವಣೆ ಮಾಡಲು ಚಿಂತನೆ ನಡೆಸಿದೆ. ಹೊಸ ಚಿಹ್ನೆಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಮನವಿ ಮಾಡಲಾಗಿದೆ.
ರೈತರಿಗೆ ಹತ್ತಿರವಾದ ಚಿಹ್ನೆಯನ್ನು ಪಡೆಯಬೇಕೆಂದು ಕರ್ನಾಟಕ ಜನತಾ ಪಕ್ಷ ಸ್ಥಾಪನೆ ಆದಾಗಲೇ ಪ್ರಯತ್ನ ನಡೆಸಿತ್ತು. ನೇಗಿಲು ಹೊತ್ತ ರೈತನ ಚಿಹ್ನೆ ಪಡೆಯಲು ಭಾರೀ ಪ್ರಯತ್ನವನ್ನೂ ನಡೆಸಿತ್ತು. ಆದರೆ, ಸುಬ್ರಮಣ್ಯಂ ಸ್ವಾಮಿ ನೇತೃತ್ವದ ರಾಷ್ಟ್ರೀಯ ಜನತಾ ಪಕ್ಷ ಈ ಚಿಹ್ನೆಯನ್ನು ಹೊಂದಿದ್ದರಿಂದ ಕೆಜೆಪಿ ಪ್ರಯತ್ನ ಫಲ ನೀಡಿರಲಿಲ್ಲ..
ಸದ್ಯ ರಾಷ್ಟ್ರೀಯ ಜನತಾ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗಿದೆ. ಆದ್ದರಿಂದ ಖಾಲಿ ಉಳಿದಿರುವ ನೇಗಿಲು ಹೊತ್ತ ರೈತನ ಚಿಹ್ನೆಯನ್ನು ಕೆಜೆಪಿಗೆ ನೀಡುವಂತೆ ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೆ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪತ್ರಬರೆದಿದ್ದಾರೆ.
ಜನರು ಚುನಾವಣೆಗಳಲ್ಲಿ ನಮ್ಮ ಪಕ್ಷ ಚಿಹ್ನೆಯನ್ನು ಗುರುತಿಸಿಲ್ಲ. ಆದ್ದರಿಂದ ನಿರೀಕ್ಷಿಸಿದ ಫಲಿತಾಂಶ ಪಕ್ಷಕ್ಕೆ ದೊರಕಿಲ್ಲ. ಪಕ್ಷದ ಚಿಹ್ನೆಯನ್ನು ಬದಲಾವಣೆ ಮಾಡಬೇಕೆಂಬ ಮಾತು ಕೆಜೆಪಿ ಪಕ್ಷದೊಳಗೆ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಕೇಳಿ ಬಂದಿತ್ತು. (ಕೆಜೆಪಿ ಪಕ್ಷದ ಚಿಹ್ನೆ ಬದಲಾವಣೆ ಮಾಡಲು ಚಿಂತನೆ)
ಪಕ್ಷ ಸ್ಥಾಪಿಸಿದ ನಂತರ ಸಾಲು-ಸಾಲಾಗಿ ಚುನಾವಣೆಗಳು ಎದುರಾಗಿದ್ದರಿಂದ ಕೆಜೆಪಿಗೆ ಪಕ್ಷದ ಚಿಹ್ನೆ ಬದಲಾವಣೆ ಮಾಡಲು ಅವಕಾಶ ದೊರೆತಿರಲಿಲ್ಲ. ಸದ್ಯ ಲೋಕಸಭೆ ಚುನಾವಣೆ ವೇಳೆಗೆ ಹೊಸ ಚಿಹ್ನೆ ಪಡೆದು, ಪಕ್ಷವನ್ನು ಸಂಘಟಿಸುವುದು ಕೆಜೆಪಿ ನಾಯಕರ ಮುಂದಿರುವ ಗುರಿ.
ಈಗಾಗಲೇ ಕೆಜೆಪಿಯು ಆಯೋಗಕ್ಕೆ ಮನವಿ ಸಲ್ಲಿಸಿದ್ದು, ನೇಗಿಲು ಹೊತ್ತ ರೈತನ ಚಿಹ್ನೆ ನೀಡುವಂತೆ ಮನವಿ ಮಾಡಿದೆ. ನಾವು ಬಯಸಿದ ಚಿಹ್ನೆ ದೊರೆತರೆ ಪಕ್ಷ ಸಂಘಟನೆಗೆ ಹೆಚ್ಚು ಅನುಕೂಲವಾಗುತ್ತದೆ ಎನ್ನುವುದು ಪಕ್ಷದ ಮುಖಂಡರ ಅಭಿಪ್ರಾಯ.