ಬೆಂಗಳೂರಿಗೆ ಮತ್ತೆ ಕಸದ ಸಮಸ್ಯೆ ಭೀತಿ?
ಬೆಂಗಳೂರು, ಆ.17 : ಮಂಡೂರಿನಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ವಿರೋಧಿಸಿ ಮಂಡೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಕಸದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ಬಿಬಿಎಂಪಿ ಮತ್ತು ಸರ್ಕಾರ ಕಳೆದ ಒಂದು ವರ್ಷದಿಂದ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಮತ್ತು ತ್ಯಾಜ್ಯ ಘಟಕಕ್ಕೆ ರಾಸಾಯನಿಕ ಸಿಂಪಡಣೆ ಸ್ಥಗಿತಗೊಂಡಿರುವುದರಿಂದ, ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಅಸಮಾಧಾನಗೊಂಡಿರುವ ಗ್ರಾಮಸ್ಥರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಆ.18ರ ಸೋಮವಾರದಿಂದ ಅಸಹಕಾರ ಚಳವಳಿ ಪ್ರಾರಂಭಿಸುತ್ತೇವೆ. ಸರ್ಕಾರ ಭರವಸೆ ಈಡೇರೀಸುವ ತನಕ ತ್ಯಾಜ್ಯ ವಿಲೇವಾರಿಗೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇದರಿಂದ ಬೆಂಗಳೂರು ಮತ್ತೆ ಕಸದಿಂದ ತುಂಬಿ ಹೋಗುವ ಸಾಧ್ಯತೆ ಇದೆ. (ಬೆಂಗಳೂರಿನ ಕಸದ ಸಮಸ್ಯೆ ನಿವಾರಣೆಗೆ ವಿದೇಶಿ ತಜ್ಞರು)
ಮಂಡೂರು ಘಟಕದಲ್ಲಿ ತ್ಯಾಜ್ಯದ ರಾಶಿಗೆ ವಾಸನೆ ಬರದಂತೆ ರಾಸಾಯನಿಕ ಸಿಂಪಡಿಸುತ್ತಿದ್ದರು. ಆದರೆ, ಕೆಲವು ದಿನಗಳಿಂದ ಇದನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಕೆಟ್ಟವಾಸನೆ ಪ್ರಾರಂಭವಾಗಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮಳೆ ಸುರಿಯುತ್ತಿರುವುದರಿಂದ ತ್ಯಾಜ್ಯ ಘಟಕದಿಂದ ವಿಷಯಕ್ತ ರಸ ಹರಿದು ಬಂದು ಸುತ್ತಮುತ್ತಲಿನ ಜಮೀನಿನಲ್ಲಿ ಸಂಗ್ರಹವಾಗುತ್ತಿದೆ. ಫೆಬ್ರವರಿಯಲ್ಲಿ ಕಸದ ಸಮಸ್ಯೆ ಹೆಚ್ಚಾದಾಗ, ತಾಜ್ಯ ಘಟಕದ ಸುತ್ತ ಕಾಪೌಂಡ್ ನಿರ್ಮಿಸಿ, ತಾಜ್ಯದ ರಸ ಹರಿದು ಬರದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಸರ್ಕಾರ ಭರವಸೆ ನೀಡಿತ್ತು.
ಆದರೆ, ಬಿಬಿಎಂಪಿ ಮತ್ತು ಸರ್ಕಾರ ಮಂಡೂರು ಗ್ರಾಮಸ್ಥರಿಗೆ ನೀಡಿರುವ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಗ್ರಾಮಸ್ಥರು ಪ್ರತಿಭಟನೆಯ ಮಾರ್ಗ ಹಿಡಿದಿದ್ದು, ಸೋಮವಾರದಿಂದ ತಮ್ಮ ಅಸಹಕಾರ ಚಳವಳಿ ಆರಂಭಿಸಲಿದ್ದಾರೆ.
ಹೆಚ್ಚು ತಾಜ್ಯ : ಶ್ರಾಮಣ ಮಾಸ ಆರಂಭವಾಗಿದ್ದು ಸಾಲು-ಸಾಲು ಹಬ್ಬಗಳು ಪ್ರಾರಂಭವಾಗಿವೆ. ನಗರದಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದ್ದು, ಹೆಚ್ಚಿನ ಕಸ ಸಂಗ್ರಹವಾಗುತ್ತಿದೆ. ಇಂತಹ ಸಮಯದಲ್ಲಿ ಕಸ ವಿಲೇವಾರಿ ಮಾಡುವುದು ಬಿಬಿಎಂಪಿಗೆ ಸವಾಲಾಗಿದೆ.
ಈಗ ಮಂಡೂರು ತಾಜ್ಯ ಘಟಕದಲ್ಲಿ ತಾಜ್ಯ ವಿಲೇವಾರಿ ಮಾಡಲು ಗ್ರಾಮಸ್ಥರು ವಿರೋಧಿಸಿದರೆ, ಬೆಂಗಳೂರು ಮತ್ತೊಮ್ಮೆ ಕಸದಿಂದ ತುಂಬಿ ಹೋಗುವುದು ಖಚಿತವಾಗಿದೆ. ಶನಿವಾರದಿಂದ ತಾಜ್ಯ ಘಟಕಕ್ಕೆ ರಾಸಾಯನಿಕ ಸಿಂಪಡಣೆ ಪ್ರಾರಂಭಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಆದರೆ, ನಮ್ಮ ಪ್ರತಿಭಟನೆ ನಾವು ಹಿಂಪಡೆಯುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.












Click it and Unblock the Notifications