ಶಿರಾಡಿ ಘಾಟ್ ಕೊರೆಯಲು ಆಸ್ಕರ್ ಯತ್ನ
ಬೆಂಗಳೂರಿಗೆ ಕರಾವಳಿ ಭಾಗವನ್ನು ರಸ್ತೆ ಮೂಲಕ ತ್ವರಿತವಾಗಿ ಸಂಪರ್ಕಿಸಲು ಸಾಧ್ಯವಾಗುವಂತೆ ಶಿರಾಡಿ ಘಾಟಿನಲ್ಲಿ ಸುಮಾರು 7.7 ಕಿ.ಮೀ ಉದ್ದದ 5 ಸಣ್ಣ ಸುರಂಗಗಳನ್ನು ಕೊರೆಯಲು ಕೇಂದ್ರ ಸರ್ಕಾರ ಚಿಂತಿಸಿದೆ. ಇದರಿಂದ ಬೆಂಗಳೂರು-ಮಂಗಳೂರು ನಡುವಿನ ಸಂಚಾರ ಸರಾಗ, ಸುಗಮಗೊಳ್ಳಲಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಅಭಿವೃದ್ದಿ ಸಚಿವ ಆಸ್ಕರ್ ಫರ್ನಾಂಡೀಸ್ ಹೇಳಿದ್ದಾರೆ.
build-operate-transfer ಮಾದರಿ ಗುತ್ತಿಗೆ ನೀಡಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ಪರಿಸರ ಇಲಾಖೆ, ರಸ್ತೆ ಮತ್ತು ಭೂ ನಿಗಮ ಇಲಾಖೆ,ರಾಜ್ಯ ಸರ್ಕಾರದ ಅಧಿಕಾರಗಳ ಜೊತೆ ಈ ಬಗ್ಗೆ ಮಾತುಕತೆ ನಡೆದಿದೆ. ಜಪಾನ್ ಏಜೆನ್ಸಿ ನೆರವಿನಿಂದ ಈ ಯೋಜನೆ ಪೂರೈಸಲಾಗುವುದು ಸುಮಾರು 3-4 ಸಾವಿರ ಕೋಟಿ ರು ವೆಚ್ಚವಾಗಲಿದೆ ಎಂದು ಆಸ್ಕರ್ ವಿವರಿಸಿದರು.
ಏನಿದು ಸುರಂಗ: ಪಶ್ಚಿಮ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಕಲೇಶಪುರದಿಂದ ಗುಂಡ್ಯ ವರೆಗಿನ 18.5 ಕಿಮೀ ದೂರಕ್ಕೆ ಸುರಂಗ ಮಾರ್ಗ ನಿರ್ಮಿಸುವುದು ಈ ಯೋಜನೆ ಉದ್ದೇಶ. ಸುಮಾರು 4800 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆ ಬಗ್ಗೆ ಜಪಾನ್ ಇಂಟರ್ ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ (ಜೈಕಾ) ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಈ ಆರು ಪಥಗಳ ಹೆದ್ದಾರಿಯಲ್ಲಿ ಒಟ್ಟು ಐದು ಸುರಂಗ ಮಾರ್ಗ ಹಾಗೂ 5 ಮೇಲು ರಸ್ತೆ ಒಳಗೊಂಡಿದೆ. ಶಿರಾಡಿ ಘಾಟಿಯಲ್ಲಿ ಈಗಿರುವ ರಾಷ್ಟ್ರೀಯ ಹೆದ್ದಾರಿ 48 ಅನ್ನು ಅಭಿವೃದ್ಧಿಪಡಿಸಲು ಪರಿಸರ ವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೋರಾಟ ಹಾಗೂ ರಸ್ತೆ ಅಭಿವೃದ್ಧಿ ಜೊತೆಜೊತೆಯಲ್ಲೇ ಸಾಗಿದೆ.
ಡಿವಿ ಸದಾನಂದ ಗೌಡರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲೇ ಜಪಾನ್ ದೇಶದ ನೆರವು, ಸುರಂಗ ಕೊರೆಯುವ ಬಗ್ಗೆ ಸುದ್ದಿ ಬಂದಿತ್ತು. ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ದಟ್ಟಣೆ ಐದು ಪಟ್ಟು ಹೆಚ್ಚಾಗಿದ್ದು ರಸ್ತೆಯ ವಿನ್ಯಾಸವನ್ನೇ ಬದಲಿಸುವ ಅವಶ್ಯಕತೆ ಇದೆ. ರಸ್ತೆ ದುರಸ್ತಿಗೆ ಕೇಂದ್ರ ಸರ್ಕಾರ 130 ಕೋಟಿ ನೀಡದೆ ವಿಳಂಬ ಮಾಡಿದೆ ಎಂದು ಸದಾನಂದ ಗೌಡರು ಹೇಳಿದ್ದರು.
ಇನ್ನಷ್ಟು ಹೆದ್ದಾರಿ: ಮುಲ್ಕಿ, ಮೂಡುಬಿದಿರೆ, ಧರ್ಮಸ್ಥಳ, ಗುಂಡ್ಯ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಹೆದ್ದಾರಿ ಭೂ ಸಾರಿಗೆ ಸಚಿವ ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ಜೋಡಿ ರಸ್ತೆಗಳನ್ನು ಚತುಷ್ಪಥ ರಸ್ತೆ ಮಾಡಲಾಗುತ್ತೆ, ಚತುಷ್ಪಥ ರಸ್ತೆಗಳನ್ನು ಷಟ್ಪಥ ರಸ್ತೆಗಳನ್ನಾಗಿಸುವುದು ನಮ್ಮ ಉದ್ದೇಶ. ಅಗತ್ಯ ಬೀಳುವ ಕಡೆ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇ, ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಮಾದರಿಯಲ್ಲಿ ರಾಜ್ಯದಲ್ಲಿ ಇನ್ನಷ್ಟು ಎಕ್ಸ್ ಪ್ರೆಸ್ ವೇಗಳನ್ನು ನಿರೀಕ್ಷಿಸಬಹುದು ಎಂದರು.