ಶಿರಾಡಿ ಶಾಪಕ್ಕೆ ಜಪಾನಿ ತಂತ್ರಜ್ಞಾನದ ಮದ್ದು: ಡಿವಿಎಸ್
ಬೆಂಗಳೂರಿನಿಂದ ಮಂಗಳೂರಿಗೆ ಜೂ.10ರ ಬೆಳಗ್ಗೆ ವಿಮಾನದಿಂದ ಆಗಮಿಸಿದ ಸದಾನಂದ ಗೌಡರು ನೈಋತ್ಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಿದರು. ನಂತರ ಕಲ್ಲಡ್ಕದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಅವರ ನಿವಾಸದಲ್ಲಿ ಉಪಹಾರ ಸೇವಿಸಿ, ಚಹಾ ಕುಡಿದು ಸುದ್ದಿಗಾರರೊಂದಿಗೆ ಮಾತಿಗಿಳಿದರು.
ಶಿರಾಡಿ ಘಾಟಿಗೆ ಮುಕ್ತಿ: ಬೆಂಗಳೂರು -ಮಂಗಳೂರು ರಾಷ್ಟಿಯ ಹೆದ್ದಾರಿ ಶಿರಾಡಿಘಾಟ್ನಲ್ಲಿ ಹಾಳಾಗಿರುವ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ 6 ಕೋಟಿ ರೂ. ಬಿಡುಗಡೆ ಮಾಡಿದೆ. ಶಿರಾಡಿ ಘಾಟ್ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡುವ ಯೋಜನೆಗೆ ಅಗತ್ಯವಾಗಿರುವ 130 ಕೋಟಿ ರೂಗಳನ್ನು ಒದಗಿಸುವುದರಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಮತ್ತೊಮ್ಮೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದರು.
ಬೆಂಗಳೂರಿಗೆ ನಾನು ರಸ್ತೆ ಮಾರ್ಗದಲ್ಲೇ ಹೋಗುತ್ತಿದ್ದೇನೆ. ಶಿರಾಡಿ ಘಾಟಿಯ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದಂತೆ ಆಗುತ್ತದೆ. ಉನ್ನತ ತಂತ್ರಜ್ಞಾನ ಬಳಸಿಕೊಂಡು ರಸ್ತೆ ಅಭಿವೃದ್ಧಿ ಮಾಡಲು ಜಪಾನ್ ದೇಶ ಮುಂದೆ ಬಂದಿದೆ. ಕೇಂದ್ರ ಸರ್ಕಾರ ಅಗತ್ಯ ನೆರವು ನೀಡುತ್ತಿಲ್ಲ. ಇನ್ನು ರಾಜ್ಯದಲ್ಲಿ ಮುಂಗಾರು ಆರಂಭವಾದರೆ, ಕಾಮಗಾರಿ ಬಹುತೇಕ ಸ್ಥಗಿತಗೊಳ್ಳುತ್ತದೆ ಎಂದು ತಮ್ಮ ಕಷ್ಟ ಹೇಳಿಕೊಂಡರು.
ಮಂಗಳೂರಿನ ನೀರಿನ ಬವಣೆ: ಮಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಸ್ವೀಕರಿಸಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪಶ್ಚಿಮ ವಾಹಿನಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ನೇತ್ರಾವರಿ ನದಿ ತಿರುವು ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಪಶ್ಚಿಮ ಘಟ್ಟಗಳ ಅರಣ್ಯ ಸಂಪತ್ತಿಗೆ, ಜೀವ ವೈವಿಧ್ಯಕ್ಕೆ ಹಾನಿ ಉಂಟಾಗುವ ಯಾವ ಯೋಜನೆಯನ್ನು ಸರ್ಕಾರ ಪ್ರೋತ್ಸಾಹಿಸುವುದಿಲ್ಲ ಎಂದು ಸದಾನಂದ ಗೌಡರು ಸ್ಪಷ್ಟಪಡಿಸಿದರು.
ಸಂಪುಟ ವಿಸ್ತರಣೆ: ಬಿಜೆಪಿಯಲ್ಲಿದ್ದ ಸಣ್ಣ ಪುಟ್ಟ ಗೊಂದಲಗಳು ಬಹುತೇಕ ನಿವಾರಣೆಯಾಗಿದೆ. ವಿಧಾನಪರಿಷತ್ ಚುನಾವಣೆ ಬಳಿಕ, ಹೈಕಮಾಂಡ್ ನೊಂದಿಗೆ ಚರ್ಚಿಸಿ ರಾಜ್ಯ ಸಂಪುಟ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸದಾನಂದ ಗೌಡ ಹೇಳಿದರು.