ಮಾಜಿ ಸ್ಪೀಕರ್ ಕೋಲಾರದ ವೆಂಕಟಪ್ಪ ವಿಧಿವಶ
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವೆಂಕಟಪ್ಪ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ಹೇಳಿವೆ. ಮಂಗಳವಾರ ಸಂಜೆ ಮುಳಬಾಗಿಲು ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಪತ್ನಿ ಸುಭದ್ರಾ ವೆಂಕಟಪ್ಪ, ಪುತ್ರರಾದ ರಾಜೀವ್ ಗೌಡ, ಡಾ. ಸಿದ್ದಾರ್ಥ, ಸೊಸೆ ಶರ್ಮಿಳಾ ಹಾಗೂ ಮಾಧವಿ ಜೊತೆ ನಾಲ್ವರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮೊಥಕಾಪಲ್ಲಿಯಲ್ಲಿ 12, ಏಪ್ರಿಲ್ 1932ರಲ್ಲಿ ಜನಿಸಿದ ಎಂವಿ ವೆಂಕಟಪ್ಪ ಅವರು ಬಿಎ, ಬಿ,ಎಲ್ ಡಿಗ್ರಿ ಪದವಿ ಪಡೆದಿದ್ದರು. 1947ರ ಸ್ವಾತಂತ್ರ್ಯ ಸಂಗ್ರಾಮಕ್ಕೆ 15 ವರ್ಷದಲ್ಲೇ ಧುಮುಕಿ ಜೈಲು ಸೇರಿದ್ದರು.
ಮೈಸೂರು ಹಾಗೂ ದೆಹಲಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿದ ವೆಂಕಟಪ್ಪ ಅವರು ಹಲವು ಕಾಲೇಜುಗಳ ಕಾರ್ಯದರ್ಶಿ ಹಾಗೂ ಕಾಲೇಜು ಯೂನಿಯನ್ ಅಧ್ಯಕ್ಷರಾಗಿದ್ದರು.ಕೋಲಾರ ಜಿಲ್ಲೆಯಲ್ಲಿ ಸೇವಾದಳ, ಸಮಾಜಿಕ ಕಾರ್ಯಕ್ರಮಗಳ ಹರಿಕಾರರಾಗಿದ್ದರು.
ಬೆಂಗಳೂರು ಡೈರಿ ಉತ್ಪಾದಕರ ಸಹಕಾರ ಸಂಘದ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಉಪಾಧ್ಯಕ್ಷ, ಶಿಕ್ಷಕರ ಕ್ಷೇತ್ರದಿಂದ 1966 ಹಾಗೂ 1972ರಲ್ಲಿ ಅಸೆಂಬ್ಲಿಗೆ ಆಯ್ಕೆಯಾಗಿದ್ದರು. ಬೆಂಗಳೂರು ಹಾಗೂ ಮೈಸೂರು ವಿವಿ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿದರು. 1976ರಲ್ಲಿ ನಡೆದ ಕಾಮನ್ ವೆಲ್ತ್ ಸಂಸದೀಯ ಸೆಮಿನಾರ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
1989-94ರ ಅವಧಿಯಲ್ಲಿ ಮುಳುಬಾಗಿಲಿನಿಂದ ಅಸೆಂಬ್ಲಿಗೆ ಆಯ್ಕೆಯಾದರು. ಶ್ರೇಷ್ಠ ವಿಧಾನಸಭೆ ಪಟು ಎಂಬ ಗೌರವಕ್ಕೂ ಪಾತ್ರರಾದರು. ಉಭಯ ಸದನಗಳಿಗೆ ಅವಿರೋಧವಾಗಿ ಆಯ್ಕೆಯಾದರು. 1999ರ ಅವಧಿಯಲ್ಲಿ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದರು.
ಅಮೆರಿಕ, ಜಪಾನ್, ಹಾಂಕಾಂಗ್, ಸಿಂಗಪುರ, ಈಜಿಪ್ಟ್ ಸೇರಿದಂತೆ ಹಲವಾರು ಯುರೋಪಿಯನ್ ರಾಷ್ಟ್ರಗಳಿಗೆ ಭೇಟಿ ನೀಡಿ ಆಡಳಿತ ವ್ಯವಸ್ಥೆ ಅಧ್ಯಯನ ನಡೆಸಿದ್ದರು.
ಎಂವಿ ವೆಂಕಟಪ್ಪ ಅವರ ಪುತ್ರ ರಾಜೀವ್ ಗೌಡ ಅವರು ಐಐಎಂನಲ್ಲಿ ಪ್ರೊಫೆಸರ್ ಆಗಿದ್ದರು ಈಗ ಕಾಂಗ್ರೆಸ್ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ.













Click it and Unblock the Notifications