ಪಿರಿಯಾಪಟ್ಟಣ : ಶಾಂತಿಯುತ, ದಾಖಲೆ ಮತದಾನ
ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಸಂಜೆ 6ರವರೆಗೆ ನಡೆಯಿತು. ಬೆಳಗ್ಗೆಯಿಂದಲೇ ಮತದಾರರು ಸರತಿಯಲ್ಲಿ ನಿಂತು ಉತ್ಸಾಹದಿಂದ ಮತ ಚಲಾಯಿಸಿದರು. ಮಧ್ಯಾಹ್ನದ ಸುರಿದ ಮಳೆಯ ಪರಿಣಾಮ ಮತದಾನಕ್ಕೆ ಕೊಂಚ ಅಡಚಣೆಯಾಯಿತು.
ಪಿರಿಯಾಪಟ್ಟಣ ಪೇಟೆ ಮತ್ತು ಬೈಲುಕುಪ್ಪೆ ಮತಕೇಂದ್ರಗಳಲ್ಲಿ ಮತಯಂತ್ರದ ದೋಷದಿಂದ ಒಂದು ಗಂಟೆ ತಡವಾಗಿ ಮತದಾನ ಪ್ರಾರಂಭಿಸಲಾಯಿತು. ಕಿತ್ತೂರು, ಕಂಪ್ಲಾಪುರ, ಬೆಟ್ಟದಪುರ ಮುಂತಾದ ಮತಕೇಂದ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಕೇಂದ್ರಗಳಿಗೆ ಬಿಎಸ್ಎಫ್ ಯೋಧರ ಸರ್ಪಗಾವಲು ಸಹ ಹಾಕಲಾಗಿತ್ತು. 11 ಕೇಂದ್ರಗಳ ಮತದಾನ ಕಾರ್ಯವನ್ನು ಸಂಪೂರ್ಣವಾಗಿ ಚುನಾವಣಾಧಿಕಾರಿಗಳು ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಿಸಿದರು.
ಕಾರ್ಯಕರ್ತರ ಚಕಮಕಿ : ಕಿತ್ತೂರು, ಕಲ್ಲೂರು ಮತ್ತು ಪಿರಿಯಾಪಟ್ಟಣ ಪೇಟೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು. ಪೊಲೀಸರು ಲಾಠಿ ರುಚಿ ತೋರಿಸಿ ಅವರನ್ನು ಚದುರಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿ ಕೊಟ್ಟರು.
ದಾಖಲೆ ಮತದಾನ : ಮೇ 5ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಶೇ 83.50ರಷ್ಟು ಮತದಾನ ನಡೆದಿತ್ತು. ಪಿರಿಯಾಪಟ್ಟಣ ಆ ದಾಖಲೆಯನ್ನು ಮುರಿದಿದೆ. ರಾಜ್ಯದಲ್ಲೇ ದಾಖಲೆಯ ಶೇ 83.84 ರಷ್ಟು ಮತದಾನ ನಡೆದಿದೆ.
ಮೇ 31 ರತ್ತ ಚಿತ್ತ : ಕ್ಷೇತ್ರದ ಚುನಾವಣಾ ಮತ ಎಣಿಕೆ ಕಾರ್ಯ ಮೇ 31ರ ಶುಕ್ರವಾರ ನಗರದ ಪುಷ್ಪ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿದೆ. ಜಿಲ್ಲಾಡಳಿತ ಮತ ಎಣಿಕೆಗಾಗಿ ಸಕಲ ರೀತಿಯಲ್ಲಿ ಸಿದ್ಧವಾಗುತ್ತಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ.
ಗೆದ್ದರೆ ಪ್ರತಿಪಕ್ಷ ಸ್ಥಾನ : ಪಿರಿಯಾಪಟ್ಟಣ ಚುನಾವಣೆಯಲ್ಲಿ ಬಿಜೆಪಿ ಅಥವ ಜೆಡಿಎಸ್ ಜಯಗಳಿಸದರೆ, ವಿಧಾನಸಭೆಯಲ್ಲಿ ಬಲ ಹೆಚ್ಚಿಸಿಕೊಳ್ಳಲಿದ್ದು, ಅಧಿಕೃತ ಪ್ರತಿಪಕ್ಷ ಸ್ಥಾನ ಅಲಂಕರಿಸಲಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದರೆ ಕಾಂಗ್ರೆಸ್ ಬಲ ಮತ್ತಷ್ಟು ಹೆಚ್ಚಾಗಲಿದೆ.