ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಓಪಿಯಂ ವಶ
ರಾಜಸ್ತಾನದಿಂದ ಬೆಂಗಳೂರಿಗೆ ಮಾದಕ ವಸ್ತುವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಸುಳಿವು ಸಿಕ್ಕ ಮೇರೆಗೆ ಮಾದಕವಸ್ತು ನಿಯಂತ್ರಣಾ ಬ್ಯೂರೋ ಜಾಲ ಬೀಸಿತ್ತು. ಯಶವಂತಪುರದ ಬಳಿ ಲಾರಿಯನ್ನು ಅಡ್ಡಗಟ್ಟಿ ಓಪಿಯಂ ಸಾಗಿಸುತ್ತಿದ್ದ ರಾಜಸ್ತಾನದ ಕೋಟ ಜಿಲ್ಲೆಯ ಮೋರಕ್ ಗ್ರಾಮದ ರಾಜು ಮತ್ತು ಆತನ ಸಹಚರ ಜಲ್ವಾರ್ ಜಿಲ್ಲೆಯ ಮಾನಕ್ ಚಂದ್ರ ಎಂಬಿಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಬೃಹತ್ ಪ್ರಮಾಣದ ಓಪಿಯಂ ಅನ್ನು ಟ್ರಕ್ಕಿನ ಕ್ಯಾಬಿನ್ನಲ್ಲಿ ಗೋಣಿಚೀಲದಲ್ಲಿ ಟೇಪನ್ನು ಸುತ್ತಿ ಇಡಲಾಗಿತ್ತು. ಕುರಿಯರ್ನಂತೆ ಕಾಣುತ್ತಿದ್ದ ಈ ಚೀಲಗಳನ್ನು ಬಿಚ್ಚಿ ನೋಡಲಾಗಿ ಅಂತಾರಾಜ್ಯ ಕಳ್ಳಸಾಗಾಣೆಯ ಕೃತ್ಯ ಬಯಲಾಗಿದೆ.
ಅವರಿಗೆ ರಾಜಸ್ತಾನದಲ್ಲಿ ಈ ಚೀಲಗಳನ್ನು ನೀಡಲಾಗಿತ್ತು. ಬೆಂಗಳೂರಿನಲ್ಲಿ ಒಬ್ಬ ವ್ಯಕ್ತಿ ತಮ್ಮನ್ನು ಸಂಪರ್ಕಿಸಿ ಇಸಿದುಕೊಳ್ಳಲಾಗುತ್ತದೆ ಎಂದು ರಾಜು ಮತ್ತು ಮಾನಕ್ ಚಂದ್ರ ಹೇಳಿಕೆ ನೀಡಿದ್ದಾಗಿ ಬ್ಯೂರೋದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಓಪಿಯಂ ಅನ್ನು ಶುದ್ಧಗೊಳಿಸಿ ಹೆರಾಯಿನ್ ತಯಾರಿಸಲು ಇಲ್ಲಿಗೆ ತರಲಾಗಿತ್ತು ಎಂದು ತಿಳಿದುಬಂದಿದ್ದು, ಸ್ವಲ್ಪ ಭಾಗವನ್ನು ಮಧ್ಯಪ್ರದೇಶಕ್ಕೂ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಹೆರೆಯಿನ್ ತಯಾರಿಸುವ ಅನೇಕ ಘಟಕಗಳಿರಬಹುದು. ಅದಕ್ಕಾಗಿಯೇ ಓಪಿಯಂ ಅನ್ನು ಇಲ್ಲಿಗೆ ತರಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.