ಕುತೂಹಲದ ಗೂಡಾದ ಪಿರಿಯಾಪಟ್ಟಣ ಕಣ

ಸದ್ಯಕ್ಕೆ ಪ್ರತಿಪಕ್ಷ ಸ್ಥಾನ ಫಾರ್ಟಿ-ಫಾರ್ಟಿ ಆಗಿದ್ದು ಎರಡೂ ಪಾರ್ಟಿಗಳು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಪೈಪೋಟಿಯಲ್ಲಿರುವಾಗ ಇಲ್ಲಿನ ಮತದಾರ ಮಾತ್ರ ಕ್ಷೇತ್ರದಿಂದ ಯಾರನ್ನು ಆರಿಸಿಕಳಿಸಬೇಕು ಎಂಬುದರ ಸುಳಿವು ಬಿಟ್ಟುಕೊಟ್ಟಿಲ್ಲ.
ಹಾಗಾಗಿ ಚುನಾವಣೆ ದಿನೇ ದಿನೇ ರಂಗೇರುತ್ತಿದೆ. ತನ್ನ ಅಭ್ಯರ್ಥಿ ಸಾವಿಗೀಡಾದ ಹಿನ್ನೆಲೆಯಲ್ಲಿ ಬಿಜೆಪಿ ಅದರ ಲಾಭ ಪಡೆದುಕೊಳ್ಳಲು ಹವಣಿಸುತ್ತಿದೆ. ಆದರೆ ಜೆಡಿಎಸ್ ಜತೆ ಕೈಜೋಡಿಸುವ ಲಕ್ಷಣಗಳಿದ್ದು ಚುನಾವಣೆಗೂ ಮುನ್ನವೇ ಶಸ್ತ್ರ ತ್ಯಾಗ ಮಾಡಿದಂತಿದೆ.
ಈಗಾಗಲೇ ಚುನಾವಣೆಯಲ್ಲಿ ಸೋತಿರುವ ಮೈಸೂರು ಜಿಲ್ಲಾ ಮಂತ್ರಿ ಪಿರಿಯಾಪಟ್ಟಣದಲ್ಲಿ ಪಕ್ಷದ ನೂತನ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಗೂ ಆಗಮಿಸಲಿಲ್ಲ. ಪಕ್ಕದ ವಿಜಯೀ ಶಾಸಕ ಸಿಟಿ ರವೀ ಅವರೇ ಬಂದು ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿದರು.
ಪರಿಸ್ಥಿತಿ ಹೀಗಿರುವಾಗ ಜೆಡಿಎಸ್ ಅಭ್ಯರ್ಥಿ ಕೆ ಮಹದೇವ್ ಅವರು ತುಸು ಹೆಚ್ಚು ಮುತುವರ್ಜಿಯಿಂದ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಮುಖ್ಯವಾಗಿ ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನದಲ್ಲಿ ಪ್ರತಿಷ್ಠಾಪಿಸುವ ಏಕೈಕ ಉದ್ದೇಶದಿಂದ ಚುನಾವಣೆಯಲ್ಲಿ ತಮ್ಮ ಗೆಲುವು ಅನಿವಾರ್ಯ ಎಂದು ಮತದಾರನ ಮುಂದೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಒಂದು ಸ್ಥಾನ ಗೆದ್ದುಕೊಂಡರೆ ಜೆಡಿಎಸ್ ಟ್ಯಾಲಿ 41ಕ್ಕೇರಿ ನಿರಾಯಾಸವಾಗಿ ಕುಮಾರಸ್ವಾಮಿ ಪ್ರತಿಪಕ್ಷ ನಾಯಕರಾಗಬಾಹುದು ಎಂದು ಮತದಾರನನ್ನು ಓಲೈಸುತ್ತಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷವಂತೂ ಈ ಕಡೆ ತಲೆಯನ್ನೇ ಇಟ್ಟಿಲ್ಲ. ಈಗಾಗಲೇ ಅಗತ್ಯಕ್ಕಿಂತ 8 ಸ್ಥಾನಗಳನ್ನು ಹೆಚ್ಚೇ ನೀಡಿರುವುದರಿಂದ ರಾಜ್ಯ ಕಾಂಗ್ರೆಸ್ಸಿಗೆ ಪಿರಿಯಾಪಟ್ಟಣ ಚುನಾವಣೆಯಲ್ಲಿ ಆಸಕ್ತಿಯೇ ಇಲ್ಲವಾಗಿದೆ. ಜತೆಗೆ ಆಡಳಿತ ಪಕ್ಷಕ್ಕೆ ಮತ ಹಾಕಿದರೆ ಕ್ಷೇತ್ರ ಉದ್ದಾರವಾದೀತು ಎಂಬ ಧೋರಣೆಯೂ ಮನೆ ಮಾಡಿದ್ದು, ಮತದಾರನಿಗೂ ಅದೇ ಸಂದೇಶವನ್ನು ತಲುಪಿಸಿದೆ.
ಕಾಂಗ್ರೆಸ್ಸಿನ ವೆಂಕಟೇಶ್ ಸಿಟ್ಟಿಂಗ್ ಎಂಎಲ್ಎ: ವೆಂಕಟೇಶ್ ಇಲ್ಲಿನ ಹಾಲಿ ಶಾಸಕರು. ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ 787 ಮತಗಳ ಅಂತರದಿಂದ ಗೆದ್ದಿದ್ದರು.
ಗೆಲುವಿನ ಲೆಕ್ಕಾಚಾರ : ಕ್ಷೇತ್ರದಲ್ಲಿ ಕುರುಬರು, ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗರ ಮತಗಳು ನಿರ್ಣಾಯಕ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ.












Click it and Unblock the Notifications