ಕೋಡಿ ಶ್ರೀಗಳ ಚುನಾವಣಾ ಭವಿಷ್ಯದ ಸುತ್ತಮುತ್ತ
ಇತ್ತೀಚಿನ ದಿನಗಳಲ್ಲಿ ಭವಿಷ್ಯ ನುಡಿಯುವವರಿಗೆ ಎಲ್ಲಿಲ್ಲದ ಡಿಮಾಂಡ್. ರಾಜಕೀಯ ಅಸ್ಥಿರತೆ, ನೈಸರ್ಗಿಕ ವಿಕೋಪಗಳ ಬಗ್ಗೆ ಅರಸೀಕೆರೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಹೇಳುವ ತಾಳೆಗೆರೆ ಭವಿಷ್ಯ ಸಾರ್ವಜನಿಕವಾಗಿ ಇತರರಿಗಿಂತ ಸ್ವಲ್ಪ ಹೆಚ್ಚು ತೂಕದ್ದಾಗಿರುತ್ತದೆ.
ನಾನು ಭವಿಷ್ಯ ಹೇಳುವುದಿಲ್ಲ, ಬದಲಿಗೆ ನಾನೇ ರೂಪಿಸುತ್ತೇನೆ ಎಂದು ಈ ಹಿಂದೆ ಹೇಳಿದ್ದ ಕೋಡಿಮಠದ ಶ್ರೀಗಳು ಎಪ್ರಿಲ್ 18ರಂದು ಮಂಗಳೂರಿನಲ್ಲಿ ಚುನಾವಣಾ ಪೂರ್ವ ಭವಿಷ್ಯ ನುಡಿದಿದ್ದರು.
ಅವರು ಅಂದು ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಏಕ ಪಕ್ಷೀಯ ಸರಕಾರ ಅಧಿಕಾರಕ್ಕೆ ಬರುವುದಿಲ್ಲ, ನೂತನ ಸರ್ಕಾರ ಅಲ್ಪಕಾಲದಲ್ಲಿ ಬಿದ್ದು ಹೋಗಿ ಮರು ಚುನಾವಣೆ ನಡೆಸುವ ಸಾಧ್ಯತೆ ಇದೆ. ರಾಜ್ಯದಲ್ಲಿ 2020ರ ವರೆಗೆ ರಾಜಕೀಯ ಅಸ್ಥಿರತೆ ಮುಂದುವರಿಯಲಿದೆ ಎಂದು ನುಡಿದಿದ್ದರು.
ಏಪ್ರಿಲ್ 24ರಂದು ಅರಸೀಕೆರೆಯಲ್ಲಿ ಮತ್ತೆ ಭವಿಷ್ಯ ನುಡಿದಿದ್ದ ಶ್ರೀಗಳು ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದಿದ್ದರು. ಅಲ್ಲದೇ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಕಳೆದುಕೊಳ್ಳುವುದಕ್ಕಿಂತ ಗಳಿಸುವುದೇ ಹೆಚ್ಚು. ಬಿಜೆಪಿ ಸ್ಥಿತಿ ಇದಕ್ಕೆ ತದ್ವಿರುದ್ಧ.
ಇನ್ನು ಜೆಡಿಎಸ್ ಮತ್ತು ನೂತನ ಕೆಜೆಪಿ ಸಾಧನೆ ಪರವಾಗಿಲ್ಲ. ಬಿಎಸ್ಆರ್ ಕಾಂಗ್ರೆಸ್ಸಿಗೆ ಕಷ್ಟ ಕಷ್ಟ. ಯಡಿಯೂರಪ್ಪನವರ ಪಕ್ಷದಿಂದ ಬಿಜೆಪಿಗೆ ಸಾಕಷ್ಟು ಹಾನಿಯಾಗಲಿದೆ ಎಂದು ಸ್ಪಷ್ಟವಾಗಿ ನುಡಿದಿದ್ದರು.
ಅವರ ನುಡಿದ ಭವಿಷ್ಯದಂತೆ ಸಿದ್ದರಾಮಯ್ಯ ಸಿಎಂ ಹುದ್ದೆಗೇರಲು ಸಜ್ಜಾಗಿದ್ದಾರೆ. ಆದರೆ ಏಕ ಪಕ್ಷೀಯ ಸರಕಾರ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಅವರ ಭವಿಷ್ಯ ಹುಸಿಯಾಯಿತು. ಜೆಡಿಎಸ್, ಕೆಜೆಪಿ ಸಾಧನೆ, ಯಡಿಯೂರಪ್ಪನವರ ಪಕ್ಷದಿಂದ ಬಿಜೆಪಿಗೆ ಆಗುವ ನಷ್ಟದ ಬಗ್ಗೆಯೂ ಅವರು ಹೇಳಿದ ಭವಿಷ್ಯ ನಿಜವಾಗಿದೆ.
ಕೋಡಿಶ್ರೀಗಳ ಅಂದು ನುಡಿದಿದ್ದ ಚುನಾವಣಾ ಪೂರ್ವ ಭವಿಷ್ಯದ ಇತರ ಹೈಲೈಟ್ಸ್ ಸ್ಲೈಡಿನಲ್ಲಿ...

ಕೋಡಿಶ್ರೀಗಳ ಚುನಾವಣಾ ಪೂರ್ವ ಭವಿಷ್ಯ
ಈ ಬಾರಿ ಅಚ್ಚರಿಯ ಚುನಾವಣಾ ಫಲಿತಾಂಶ ಬರಲಿದೆ. ಸಿದ್ದರಾಮಯ್ಯ, ಪರಮೇಶ್ವರ್, ಜಗದೀಶ್ ಶೆಟ್ಟರ್ ಅಥವಾ ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆ ಪಡೆಯಲಿದ್ದಾರೆ.ಸರ್ಕಾರ ರಚನೆಯಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಲಿವೆ. ಇಂತಹ ಗೊಂದಲದಿಂದ ರಚನೆಯಾದ ಸರ್ಕಾರ ಕೆಲವವೇ ದಿನಗಳಲ್ಲಿ ಬಿದ್ದು ಹೋಗಲಿದೆ. ರಾಜ್ಯದಲ್ಲಿ ಈ ಬಾರಿ ಸಮ್ಮಿಶ್ರ ಸರಕಾರ ರಚಿಸುವುದು ಸುಲಭವಾಗುವುದಿಲ್ಲ .

ಕೋಡಿಶ್ರೀಗಳ ಚುನಾವಣಾ ಪೂರ್ವ ಭವಿಷ್ಯ
ಅಧಿಕ ಸ್ಥಾನ ಕಾಂಗ್ರೆಸ್ ಗೆಲ್ಲುತ್ತದೆ. ಕೈ ಪಕ್ಷಕ್ಕೆ ನಾಯಕರೇ ಭಾರವಾಗಿ ಅಧಿಕಾರಕ್ಕಾಗಿ ಕಾದಾಟ ನಡೆಯುವುದು ನಿಶ್ಚಿತ. ಮುಖ್ಯಮಂತ್ರಿ ಸ್ಥಾನಕ್ಕಾಗಿ ನಾಯಕರು ಬಲಾಬಲ ಪ್ರದರ್ಶನಕ್ಕೂ ಮುಂದಾಗುತ್ತಾರೆ. ಸಿಎಂ ರೇಸಿನಲ್ಲಿ ಬಹಳ ನಾಯಕರಿದ್ದರೂ ಸಿದ್ದರಾಮಯ್ಯನವರಿಗೆ ಯೋಗ ಚೆನ್ನಾಗಿಯೇ ಇದೆ.

ಕೋಡಿಶ್ರೀಗಳ ಚುನಾವಣಾ ಪೂರ್ವ ಭವಿಷ್ಯ
ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ರಾಜ್ಯ ರಾಜಕೀಯವು ಧ್ರುವೀಕರಣದಿಂದ ದೂರವಾಗಿ ಮತ್ತೆ ಒಗ್ಗೂಡುವಿಕೆಗೆ ಸನಿಹವಾಗಲಿದೆ. ಮುರಿದ ಮನಸ್ಸುಗಳು ಮತ್ತೆ ಒಂದಾಗುವ ಸಾಧ್ಯತೆ ನಿಚ್ಚಳವಾಗಿದೆ. ಚುನಾವಣೆಯ ಮುಗಿಯುವುದರೊಳಗಾಗಿ ರಾಜಕೀಯ ಅಚ್ಚರಿಗಳನ್ನು ನಾಡಿನ ಜನ ಖುದ್ದು ನೋಡಲಿದ್ದಾರೆ. ಸ್ಫೋಟಕ ಸುದ್ದಿಗಳನ್ನು ಕೇಳಲಿದ್ದಾರೆ.

ಕೋಡಿಶ್ರೀಗಳ ಚುನಾವಣಾ ಪೂರ್ವ ಭವಿಷ್ಯ
ರಾಜಕೀಯವಾಗಿ ಈ ಬಾರಿ ರಾಜ್ಯದ ಅಧಿಕಾರ ಪೀಠ ಹಿಡಿಯುವವರ ಹಸ್ತ ಶುದ್ಧವಾಗಿರಲ್ಲ. ಹೆಚ್ಚು ಕಾಲ ಅಧಿಕಾರದಲ್ಲಿ ಉಳಿಯುವುದಿಲ್ಲ. ರಾಜ್ಯದಲ್ಲಿ ಅತಂತ್ರ ಸ್ಥಿತಿ ಮುಂದುವರೆಯಲಿದ್ದು ಮತ್ತೊಮ್ಮೆ ಚುನಾವಣೆ ಎದುರಾಗುವ ಭೀತಿ ಇದೆ. ನಿಷ್ಠಾವಂತ ರಾಜಕೀಯ ಮುಖಂಡರ ಮೇಲೆ ವೃಥಾರೋಪಗಳು ಕೇಳಿ ಬರಲಿದೆ.

ಕೋಡಿಶ್ರೀಗಳ ಚುನಾವಣಾ ಪೂರ್ವ ಭವಿಷ್ಯ
ಜನರಿಗೆ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಕಡಿಮೆಯಾಗಲಿದ್ದು, ಜನಾಂದೋಲನಗಳ ಮೇಲೆ ಹೆಚ್ಚಿನ ನಂಬಿಕೆ ಹುಟ್ಟಲಿದೆ. ಹಳೆ ಪಕ್ಷಗಳು ಹೊಸ ಹೊಸ ಹೊಂದಾಣಿಕೆಯೊಂದಿಗೆ ಅಧಿಕಾರ ಪೀಠದತ್ತ ಸಾಗಲಿದ್ದಾರೆ.

ಕೋಡಿಶ್ರೀಗಳ ಚುನಾವಣಾ ಪೂರ್ವ ಭವಿಷ್ಯ
ನೀಚನಿಗೆ ದೊರೆತನ, ಹೇಡಿಗೆ ಹಿರಿತನ, ಅವಿವೇಕಿಗೆ ಮಠಾಧಿಪತಿ ಸ್ಥಾನ ಸಿಕ್ಕರೆ ನಾಡು ಹೇಗಿರುತ್ತೋ ನಮ್ಮ ನಾಡು ಕೂಡಾ ಹಾಗೆ ಇರುತ್ತದೆ. ನಾನು ಭಯ ಬಿತ್ತುವ ಸ್ವಾಮಿಯಲ್ಲ. ಭವಿಷ್ಯ ರೂಪಿಸುವಂತಹ ವಿಚಾರಗಳನ್ನು ಹೇಳುವ ಸ್ವಾಮಿಯಷ್ಟೇ. ಅವಘಢಗಳನ್ನು ತಪ್ಪಿಸುವ ಉದ್ದೇಶದಿಂದ ಜನತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿ ಎನ್ನುವುದು ನನ್ನ ಉದ್ದೇಶ ಎಂದಿದ್ದಾರೆ ಕೋಡಿ ಮಠದ ಶ್ರೀಗಳು.












Click it and Unblock the Notifications