ಇಬ್ಬರು ಮುಖ್ಯಮಂತ್ರಿಗಳ ಕೊಡುಗೆ: ಮೈಸೂರಿನ ಹೆಗ್ಗಳಿಕೆ
ರಾಜ್ಯದಲ್ಲಿ 14ನೇ ವಿಧಾನಸಭೆ ರಚನೆಗೆ ಕ್ಷಣಗಣನೆ ಆರಂಭವಾಗಿದ್ದು, ಹೊಸ ಸಿಎಂ ಯಾರಾಗಲಿದ್ದಾರೆ ಎಂಬ ಪ್ರಶ್ನೆಯ ಬಗ್ಗೆ ವರುಣಾ ಕ್ಷೇತ್ರದಿಂದ ಹಿಡಿದು ರಾಜ್ಯಾದ್ಯಂತ ಚರ್ಚೆಗಳಾಗುತ್ತಿವೆ. ಇದೇ ಅಕ್ಷಯ ತದಿಗೆಯಂದು (ಮೇ 13) ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಅಂದಾಜಿದೆ.
ವರುಣಾ ಕ್ಷೇತ್ರದಲ್ಲಿ ಆರಿಸಿ ಬಂದಿರರುವ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಗಾದಿ ಒಲಿದರೆ ಮೈಸೂರು ಜಿಲ್ಲೆ ಇಬ್ಬರು ಮುಖ್ಯಮಂತ್ರಿಯನ್ನು ನೀಡಿದ ಕೀರ್ತಿ ಪಡೆಯುತ್ತದೆ. ಈ ಹಿಂದೆ ಡಿ. ದೇವರಾಜ್ ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಡಿ. ದೇವರಾಜ್ ಅರಸು ಅವರು 2 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದರು. ಹಿಂದುಳಿದ ವರ್ಗದವರ ಹರಿಕಾರರೆಂದೇ ಪ್ರಸಿದ್ಧಿಯಾಗಿದ್ದ ಅರಸು ಅವರು ಹುಣಸೂರು ಕ್ಷೇತ್ರದಿಂದ ಗೆದ್ದು ಬಂದಿದ್ದರು.
ಸಿದ್ದರಾಮಯ್ಯನವರು ಹಿಂದುಳಿದ ವರ್ಗದ ನಾಯಕರಾಗಿದ್ದಾರೆ. ನಗರದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದು, ಎರಡು ಬಾರಿ ಸೋಲು ಅನುಭವಿಸಿದ್ದರು. ಕಳೆದ ಚುನಾವಣೆ ಹಾಗೂ ಈ ಸಲದ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಅಧಿಕ ಬಹುಮತದಿಂದ ಆರಿಸಿ ಬಂದಿದ್ದಾರೆ.
ಈ ಹಿಂದೆ ಜೆಡಿಎಸ್ ಅಧಿಕಾರದಲ್ಲಿದ್ದಾಗ ಅನೇಕ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಸಿದ್ದು, ಉಪಮುಖ್ಯಮಂತ್ರಿಯೂ ಆಗಿದ್ದರು. ಹಣಕಾಸು ಸಚಿವರಾಗಿ ಅತ್ಯುತ್ತಮ ಬಜೆಟ್ ನೀಡಿದ ಕೀರ್ತಿಯೂ ಅವರಿಗಿದೆ. ಆ ಸಂದರ್ಭದಲೇ ಸಿದ್ದರಾಮಯ್ಯನವರಿಗೆ ಸಿಎಂ ಪಟ್ಟ ಒಲಿಯಬೇಕಿತ್ತು. ಆದರೆ ಅವರ ಆಸೆ ಈಡೇರಿರಲಿಲ್ಲ.
ಈಗ ಮತ್ತೆ ಸಿಎಂ ಆಗುವ ಅವಕಾಶ ಬಂದಿದೆ. ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಬೇಕಷ್ಟೆ. ಇದರಿಂದ ಇಬ್ಬರು ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದ ಕೀರ್ತಿ ಮೈಸೂರು ಜಿಲ್ಲೆಗೆ ಒದಗುತ್ತದೆ.