ಚುನಾವಣೆ ಮತ ಎಣಿಕೆ : ವಾಹನ ನಿಲುಗಡೆಗೆ ಬದಲಾವಣೆ

ಮತ ಎಣಿಕೆಯು ಮೌಂಟ್ ಕಾರ್ಮೆಲ್ ಕಾಲೇಜು, ಆರ್ ಸಿ ಕಾಲೇಜು, ಗೃಹ ವಿಜ್ಞಾನ ಕಾಲೇಜು ಮತ್ತು ಮಹಾರಾಣಿ ಕಾಲೇಜುಗಳಲ್ಲಿ ನಾಳೆ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ.
ಮತ ಎಣಿಕೆ ಸಂಬಂಧ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಬೆಂಬಲಿಗರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಲ್ಲಿ ಅಗಮಿಸುವ ನಿರೀಕ್ಷೆಯಿದೆ. ಪಟಾಕಿ ಸಿಡಿತ, ಮೆರವಣಿಗೆಗೆ ಆಯೋಗ ನಿರ್ಬಂಧ ಹೇರಿದ್ದರೂ ಸುಗಮ ಸಂಚಾರ ಮತ್ತು ವಾಹನ ನಿಲುಗಡೆಗೆ ಅಡಚಣೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸೂಕ್ತ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ತಿಳಿಸಿದ್ದಾರೆ.
ನಿಲುಗಡೆಗೆ ನಿಷೇಧ ರಸ್ತೆಗಳು: ಪ್ಯಾಲೇಸ್ ರಸ್ತೆ-ಮೈಸೂರು ಬ್ಯಾಂಕ್ ವೃತ್ತದಿಂದ ವಸಂತನಗರ ರೈಲ್ವೆ ಕೆಳಸೇತುವೆ, ಉದಯ ಟಿವಿ ಜಂಕ್ಷನ್ ನಿಂದ ವಸಂತನಗರ ರೈಲ್ವೆ ಕೆಳಸೇತುವೆ, ರೇಸ್ ಕೋರ್ಸ್ ರಸ್ತೆ, ಬಸವೇಶ್ವರ ವೃತ್ತದಿಂದ ಖನಿಜ ಭವನದವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಚೌಡಯ್ಯ ರಸ್ತೆ-ಹಳೇಹೈಗ್ರೌಂಡ್ ಪಿಎಸ್ ಜಂಕ್ಷನ್ ನಿಂದ- ವಿಂಡಸರ್ ಮ್ಯಾನರ್ವರೆಗೆ ರಸ್ತೆಯ ಎರಡು ಬದಿ, ಶೇಷಾದ್ರಿ ರಸ್ತೆ-ಆನಂದರಾವ್ ವೃತ್ತದಿಂದ, ಕೆ.ಆರ್.ವೃತ್ತದವರೆಗೆ, ಕೆ.ಜಿ.ರಸ್ತೆ, ಕಾಳಿದಾಸ ರಸ್ತೆ ಹಾಗೂ ಎಸ್ ಎಸ್ ಎಂಆರ್ ವಿ ಕಾಲೇಜಿನ ಸುತ್ತಮುತ್ತಲ ರಸ್ತೆಗಳಲ್ಲಿ ಎಲ್ಲ ರೀತಿಯ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ನಿಲುಗಡೆ ರಸ್ತೆಗಳು: ಚುನಾವಣಾಧಿಕಾರಿಗಳ ವಾಹನಗಳ ನಿಲುಗಡೆಗೆ ಕಲಾ ಕಾಲೇಜು ಹಾಗೂ ಗೃಹ ವಿಜ್ಞಾನ ಕಾಲೇಜಿನ ಆವರಣದೊಳಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಎಣಿಕೆ ಕಾರ್ಯಕ್ಕೆ ದ್ವಿಚಕ್ರ ವಾಹನದಲ್ಲಿ ಬರುವ ಅಧಿಕಾರಿ ಅಥವಾ ಸಿಬ್ಬಂದಿಗಳಿಗೆ ಫ್ರೀಡಂ ಪಾರ್ಕ್ ಮುಂಭಾಗ ನಿಲುಗಡೆಯ ವ್ಯವಸ್ಥೆ ಮಾಡಲಾಗಿದೆ.
ಬಂದೋಬಸ್ತ್ ಕರ್ತವ್ಯದಲ್ಲಿ ಭಾಗವಹಿಸುವ ಪೊಲೀಸ್ ವಾಹನ ನಿಲುಗಡೆಗೆ ಫ್ರೀಡಂಪಾರ್ಕ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರು ಮತ್ತು ಬಸ್ಸುಗಳನ್ನು ಫ್ರೀಡಂ ಪಾರ್ಕ್ ಮೈದಾನದಲ್ಲಿ , ದ್ವಿಚಕ್ರ ವಾಹನಗಳನ್ನು ಹಳೇ ಕ್ರಿಕೆಟ್ ಮೈದಾನದ ಆವರಣದಲ್ಲಿ, ಸೆಂಟ್ರಲ್ ಕಾಲೇಜು ಆವರಣ, ವಿಕಾಸಸೌಧದ ವಾಹನ ನಿಲುಗಡೆ ಸ್ಥಳದಲ್ಲಿ ಹಾಗೂ ಮಿಲ್ಲರ್ ರಸ್ತೆ, ಚಂದ್ರಿಕಾ ಜಂಕ್ಷನ್ ನಿಂದ ಎಲ್ ಆರ್ ಡಿಇವರೆಗೆ, 8ನೇ ಮುಖ್ಯರಸ್ತೆ ವಸಂತನಗರ ರಸ್ತೆಯ ಒಂದು ಬದಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications