ಮತದಾನ ಅಂತ್ಯ : ಶಾಂತಿ ಮಂತ್ರ ಜಪಿಸಿದ ಜನತೆ

ರಾಜ್ಯದ 223 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಗೆ ಮತದಾ ಪ್ರಾರಂಭವಾಯಿತು. ಚುನಾವಣಾ ಆಯೋಗದಿಂದ 'ಮತದಾನದ ಮಹತ್ವ' ಕುರಿತಂತೆ ನಡೆದ ಜಾಗೃತಿ ಅಭಿಯಾನದ ಫಲವಾಗಿ ಜನರು ಬೆಳಗ್ಗೆಯೇ ಮತದಾನ ಮಾಡಲು ಸರದಿ ಸಾಲಿನಲ್ಲಿ ಕಾದು ನಿಂತಿದ್ದರು.
ಇಬ್ಬರು ಚುನಾವಣಾಧಿಕಾರಿಗಳು ಹೃದಯಾಘಾತದಿಂದ ಸಾವನ್ನಪ್ಪಿದ ಪ್ರಕರಣ ಹೊರತು ಪಡಿಸಿದರೆ, ಕೋಲಾರದಲ್ಲಿ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರ್ತರು ಮಚ್ಚು, ಲಾಂಗುಗಳಿಂದ ವರ್ತೂರು ಪ್ರಕಾಶ್ ಬೆಂಬಲಿಗರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ.
ಚುನಾವಣಾಧಿಕಾರಿ ಸಾವು : ಮಧುಗಿರಿ ತಾಲೂಕಿನಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ತಿಮ್ಮಪ್ಪ (45) ಎಂಬ ಅಧಿಕಾರಿ ಹೃದಯಾಘಾತದಿಂದ ಸಾವನ್ನಪ್ಪಿದರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಚುನಾವಣಾಧಿಕಾರಿ ಎಂ.ಸಿ.ಮಹೇಂದ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮತದಾರನಿಗೆ ಲಾಠಿ ರುಚಿ : ಬಳ್ಳಾರಿಯಲ್ಲಿ ಮತದಾನ ಮಾಡಲು ಆಗಮಿಸಿದ್ದ ವ್ಯಕ್ತಿಯೊಬ್ಬ ಪೊಲೀಸರೊಂದಿಗೆ ಜಗಳ ಪ್ರಾರಂಭಿಸಿದ್ದರಿಂದ ಆತನಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಮತದಾರನ ಬೆನ್ನಿನ ಮೇಲೆ ಎರಡು ಬಾಸುಂಡೆಗಳು ಮೂಡಿದವು. ಇದರಿಂದ ಮತದಾನಕ್ಕೆ ಯಾವುದೇ ಅಡಚಣೆ ಉಂಟಾಗಲಿಲ್ಲ.
ನಕಲಿ ಮತದಾನ : ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ದೇವರ ಚಿಕ್ಕನಹಳ್ಳಿ ಸರ್ಕಾರಿ ಹೈಸ್ಕೂಲ್ನ ಮತಗಟ್ಟೆಯಲ್ಲಿ ನಕಲಿ ಮತದಾನ ಮಾಡಲು ಯತ್ನಿಸಿದ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದರು. ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನಕಲಿ ಮತದಾನಕ್ಕೆ ಮುಂದಾದ 15 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ತಡವಾಗಿ ಮತದಾನ : ಬೆಂಗಳೂರಿನ ಮಹದೇವಪುರ ಸೇರಿದಂತೆ ಕೆಲ ಮತಗಟ್ಟೆಗಳಲ್ಲಿ ಮತಯಂತ್ರದ ತೊಂದರೆಯಿಂದಾಗಿ ಮತದಾನ ಕೆಲ ಸಮಯ ತಡವಾಗಿ ಆರಂಭವಾಯಿತು.
ಘರ್ಷಣೆ : ಕೋಲಾರ, ಬೀದರ್, ಮಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ವಿವಿಧ ಪಕ್ಷದ ಕಾರ್ಯಕರ್ತರೊಂದಿಗೆ ಘರ್ಷಣೆ ನಡೆದಿದ್ದು, ರಾಜ್ಯದ್ಯಾಂತ ಕಾರ್ಯಕರ್ತರ ನಡುವಿನ ಸುಮಾರು 10 ಪ್ರಕರಣಗಳು ದಾಖಲಾಗಿವೆ.
ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸಿನಿಮಾ ತಾರೆಯರು ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಿದರು. ಒಟ್ಟು 2,940 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಬುಧವಾರ ಮೇ 8 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications