ಖ್ಯಾತ ಜ್ಯೋತಿಷಿ ಮನೆ ಮೇಲೆ ಐಟಿ ದಾಳಿ

ಆರ್.ಟಿ.ನಗರದ ಎರಡನೇ ಬ್ಲಾಕಿನಲ್ಲಿರುವ ಚಂದ್ರಶೇಖರ್ ಮನೆ ಮೇಲೆ ನಡೆದ ದಾಳಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಗೆ ಚುನಾವಣಾ ಅಧಿಕಾರಿಗಳು ಬೆಂಬಲ ನೀಡಿದರು. ದಾಳಿ ಸಂದರ್ಭದಲ್ಲಿ ಕೋಟ್ಯಂತರ ರುಪಾಯಿ ನಗದು ಪತ್ತೆಯಾಗಿದೆ. ಆರಂಭದಲ್ಲಿ ಸುಮಾರು ಅರ್ಧ ಗಂಟೆ ಕಾಲ ಚಂದ್ರಶೇಖರ್ ಅವರ ಮನೆ ಬಾಗಿಲು ತೆಗೆಯಲೇ ಇಲ್ಲ. ನಂತರ ಅಧಿಕಾರಿಗಳು ಮನೆ ಮಹಡಿ ಮೇಲೆ ಹತ್ತಲು ಆರಂಭಿಸುತ್ತಿದ್ದಂತೆ ಬಾಗಿಲು ತೆರೆಯಲಾಯಿತು.
ಜ್ಯೋತಿಷಿ ಚಂದ್ರಶೇಖರ್ ಸ್ವಾಮಿ ಮನೆ ಹಾಗೂ ಕಚೇರಿ ಮೇಲೆ ನಡೆದ ಐಟಿ ದಾಳಿಯಿಂದಾಗಿ ಅಪಾರ ಪ್ರಮಾಣದ ಹಣ ಲಭ್ಯವಾಗಿದೆ. ಸುಮಾರು 20 ಕೋಟಿ ರು ನಗದು, ಕೋಟ್ಯಂತರ ಮೌಲ್ಯದ ಚಿನ್ನದ ನಾಣ್ಯಗಳು, 60 ಕೋಟಿ ರು ಬ್ಯಾಂಕ್ ವಹಿವಾಟು ನಡೆಸಿರುವುದಕ್ಕೆ ದಾಖಲೆ, ನೂರಾರು ಕೋಟಿ ರು ಮೌಲ್ಯದ ಆಸ್ತಿ ವಿವರಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶವಾಗಿದೆ.
ಇತ್ತೀಚೆಗೆ ಚಂದ್ರಶೇಖರ್ ಸ್ವಾಮಿ ಅವರ ಬ್ಯಾಂಕ್ ಖಾತೆಯಿಂದ ರಾಜಕಾರಣಿಗಳಿಗೆ ಹಾಗೂ ವಿವಿಧ ರಾಜಕೀಯ ಪಕ್ಷಗಳಿಗೆ ಸುಮಾರು 60 ಕೋಟಿ ರು ವಿತರಣೆಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿ ಜಂಟಿ ಆಯುಕ್ತ ಕ್ಯಾ. ಪ್ರದೀಪ್ ಆರ್ಯ ಅವರ ನೇತೃತ್ವದ 15 ಮಂದಿ ತಂಡ ಹಾಗೂ ಚುನಾವಣಾಧಿಕಾರಿಗಳ ತಂಡ ದಾಳಿ ನಡೆಸಿದರು. ಮಾಜಿ ಸಂಸದರೊಬ್ಬರಿಗೆ ಕಳೆದ ವಾರ 6.5 ಕೋಟಿ ರು ನೀಡಿರುವ ಬಗ್ಗೆ ಮಾಹಿತಿ ಸೇರಿದಂತೆ ಹಲವು ಮಹತ್ವದ ದಾಖಲೆಗಳು ದಾಳಿ ಸಂದರ್ಭದಲ್ಲಿ ಸಿಕ್ಕಿದೆ.
ಚಂದ್ರಶೇಖರ್ ಸ್ವಾಮಿ ಬ್ಯಾಂಕ್ ಖಾತೆಯಿಂದ 60 ಕೋಟಿ ರು ವಹಿವಾಟು ನಡೆದಿದೆ. ಕೋಟಿ ರು ನಗದು ಜಮೆಯಾದ ಕೆಲವೇ ದಿನಗಳಲ್ಲಿ ಡ್ರಾ ಮಾಡಲಾಗಿದೆ. ಚೆಕ್ ಮೂಲಕ ಹಣ ತೆಗೆಯಲಾಗಿದ್ದು, ರಾಜಕಾರಣಿಗಳ ಹೆಸರುಗಳೇ ಹೆಚ್ಚಾಗಿ ಕಂಡು ಬಂದಿದೆ. ಈ ಕುರಿತ ಸಮಗ್ರ ಮಾಹಿತಿ ಸಿಕ್ಕ ನಂತರ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಂದು ಚುನಾವಣಾಧಿಕಾರಿಗಳ ತಂಡದಲ್ಲಿದ್ದ ಬಿಬಿಎಂಪಿ ಹೆಚ್ಚುವರಿ ಆಯುಕ್ತ ಕಿರಣ್ ಮಾಧ್ಯಮಗಳಿಗೆ ವಿವರಿಸಿದರು.
ಸುಮಾರು 20 ಚೀಲಗಳಲ್ಲಿ ನಗದು ಹಣವನ್ನು ತುಂಬಿಸಿಕೊಂಡು ಅಧಿಕಾರಿಗಳ ವ್ಯಾನ್ ಗೆ ತುಂಬಿಸಿರುವುದು ಕಂಡು ಬಂದಿದೆ. ಒಂದು ಚೀಲದಲ್ಲಿ 1 ಕೋಟಿ ಲೆಕ್ಕದಂತೆ 20 ಕೋಟಿ ರು ಸಂಗ್ರಹವಾಗಿರುವ ನಿರೀಕ್ಷೆಯಿದೆ ಎನ್ನಬಹುದು. ಯಾವ ರಾಜಕೀಯ ಪಕ್ಷಕ್ಕೆ ಎಷ್ಟು ಹಣ ಸಲ್ಲಿಸಲಾಗಿದೆ ಎಂಬುದರ ವಿವರ ಇನ್ನೂ ಲಭ್ಯವಾಗಿಲ್ಲ. 60 ಕೋಟಿ ಗೂ ಅಧಿಕ ವಹಿವಾಟು ನಡೆಸಿದ ಸ್ವಾಮಿ ಅವರ ಬ್ಯಾಂಕ್ ಖಾತೆ ಇನ್ನಷ್ಟು ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.












Click it and Unblock the Notifications