ಮೊನ್ನೆ ಅನಿತಾ, ನಿನ್ನೆ ಕುಮಾರಸ್ವಾಮಿ ಕಣ್ಣೀರಧಾರೆ

ಮೊನ್ನೆ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯೊಬ್ಬರು 'ತಮ್ಮ ಮಾವ ಮತ್ತು ಪತಿ ಅವರು ಹಗಲಿರುಳೆನ್ನದೆ ರಾಜಕೀಯಕ್ಕಾಗಿ ದುಡಿಯುತ್ತಿದ್ದು, ಒಂದು ವರ್ಷದಿಂದ ಸರಿಯಾಗಿ ಮನೆಗೆ ಬಂದಿಲ್ಲ' ಎಂದು ಕಣ್ಣೀರುಕೋಡಿ ಹರಿಸಿದ್ದರು.
ಆದರೆ ನಿನ್ನೆ ಪಕ್ಕದ, ರಾಮನಗರ ಕ್ಷೇತ್ರದ ಅಭ್ಯರ್ಥಿಯೂ ಗೊಳೋ ಎಂದು ಅತ್ತುಬಿಟ್ಟಿದ್ದಾರೆ. ದೊಡ್ಡಗೌಡ್ರ ಪುತ್ರ, ಕ್ಷೇತ್ರದ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಭಾವಪರವಶರಾಗಿ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.
ಮಾಗಡಿ ವಿಧಾನಸಬಾ ಕ್ಷೇತ್ರದ ಬಿಡದಿಯಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದಾಗ ಕುಮಾರಸ್ವಾಮಿ ಗಳಗಳನೆ ಅತ್ತಿದ್ದಾರೆ. ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಪರಮಾಪ್ತ ಗೆಳೆಯ ಎಚ್ ಸಿ ಬಾಲಕೃಷ್ಣ ಪರವಾಗಿ ಮತ ಯಾಚಿಸುವಾಗ ಸುಮಾರು 2 ನಿಮಿಷ ಕಾಲ ಕುಮಾರಸ್ವಾಮಿ ಕಣ್ಣೀರು ಸುರಿಸಿದರು.
ನಾನು ಪ್ರಾಮಾಣಿಕ ಅಲ್ಲ: ಗಮನಾರ್ಹವೆಂದರೆ ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಗುರುವಾರ ಮಾತನಾಡಿದ ಕುಮಾರಸ್ವಾಮಿ ಅವರು 'ನಾನು ಪ್ರಾಮಾಣಿಕ ಅಂತ ಎಲ್ಲೂ ಹೇಳಿಲ್ಲ' ಎಂದು ಮನಬಿಚ್ಚಿ ಹೇಳಿದ್ದಾರೆ.
ಕುಮಾರಸ್ವಾಮಿ ಕಣ್ಣೀರಿಡುತ್ತಿರುವುದು ಹಾಸ್ಯಾಸ್ಪದ:
'ಅಧಿಕಾರದಲ್ಲಿದ್ದಾಗ ನಮ್ಮ ತಾಲೂಕಿಗೆ ಎಳ್ಳಷ್ಟೂ ಹಣಕಾಸು ನೀಡದ ಕುಮಾರಸ್ವಾಮಿ ಇದೀಗ ಈ ಕ್ಷೇತ್ರ ನನ್ನ ಕಣ್ಣಿದ್ದಂತೆ ಎಂಬುದಾಗಿ ಕಣ್ಣೀರಿಡುತ್ತಿರುವುದು ಹಾಸ್ಯಾಸ್ಪದ' ಎಂದು ಮಾಜಿ ಸಚಿವ ಸಿಪಿ ಯೋಗೀಶ್ವರ್ ಅವರು ಚನ್ನಪಟ್ಟಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿ, ಕ್ಷೇತ್ರದಲ್ಲಿ ತಮ್ಮ ಪಕ್ಷದವರು ಗೆದ್ದಿಲ್ಲ ಎಂದು ದ್ವೇಷದ ರಾಜಕಾರಣ ನಡೆಸಿದವರು, ಕ್ಷೇತ್ರಕ್ಕೆ ಮುಖ್ಯಮಂತ್ರಿಯಾಗಿದ್ದಾಗ ನೀಡಿರುವ ಕೊಡುಗೆ ಏನೆಂಬುದಾಗಿ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.












Click it and Unblock the Notifications