ಯಡಿಯೂರಪ್ಪ ಮತ್ತೆ ತೃತೀಯ ರಂಗದ ಕನಸು

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಬಿಎಸ್ವೈ, ಚುನಾವಣೆಯಲ್ಲಿ ಕೆಜೆಪಿ ಬಹುಮತ ಗಳಿಸಲಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೆಜೆಪಿ ಬಹುಮತ ಗಳಿಸಿದ ಕೂಡಲೇ ಸಂಸದ ಜಿ.ಎಸ್ ಬಸವರಾಜು ಅವರ ಜೊತೆ ನವದೆಹಲಿಗೆ ಹೋಗಿ ಅಲ್ಲಿ ರಾಷ್ಟ್ರದ ಎಲ್ಲಾ ಪ್ರಾದೇಶಿಕ ಪಕ್ಷಗಳ ಮುಖ್ಯಮಂತ್ರಿಗಳು ಮತ್ತು ಅಧ್ಯಕ್ಷರುಗಳ ಜೊತೆ ಮಾತುಕತೆ ನಡೆಸಲಾಗುವುದು. ಪ್ರಾದೇಶಿಕ ಪಕ್ಷಗಳ ಒಕ್ಕೂಟವನ್ನು ರಚಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಭವಿಷ್ಯವಿಲ್ಲ, ಈ ಪಕ್ಷಗಳು ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುವುದಿಲ್ಲ ಆದ್ದರಿಂದ ತೃತೀಯ ರಂಗ ಒಕ್ಕೂಟ ರಚನೆಯ ಮೂಲಕ ರಾಷ್ಟ್ರದ ಎಲ್ಲ ರಾಜ್ಯಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಲು ಶ್ರಮಿಸಲಾಗುವುದು ಎಂದರು.
ರಾಷ್ಟ್ರದಲ್ಲಿ ಪ್ರಾದೇಶಿಕ ಪಕ್ಷಗಳ ಒಕ್ಕೂಟ ಅಧಿಕಾರ ಹಿಡಿಯಬೇಕಿದೆ. ಹೈಕಮಾಂಡ್ ಸಂಸ್ಕೃತಿ ಸಂಪೂರ್ಣ ನಾಶ ಹೊಂದಬೇಕಿದೆ. ಹೈಕಮಾಂಡ್ ಸಂಸ್ಕೃತಿ ನಿರ್ಮೂಲನೆ ನಮ್ಮ ಗುರಿ ಎಂದು ಯಡಿಯೂರಪ್ಪ ಹೇಳಿದರು.
ರಾಷ್ಟ್ರೀಯ ಪಕ್ಷಗಳಿಗೆ ಇಲ್ಲಿನ ಸಮಸ್ಯೆ ಅರ್ಥವಾಗುವುದಿಲ್ಲ. ಛತ್ತೀಸ್ ಗಢದಲ್ಲಿ 1400 ಮೆಗಾ ವ್ಯಾಟ್ ವಿದ್ಯುತ್ ಘಟಕ ಸ್ಥಾಪಿಸಲು ಮುಂದಾದಾಗ ಕೇಂದ್ರ ಸರ್ಕಾರ ಸಮರ್ಪಕವಾಗಿ ಕಲ್ಲಿದ್ದಲು ನೀಡದೆ ವಿದ್ಯುತ್ ಉತ್ಪಾದನೆಗೆ ಅಡ್ಡಿ ಉಂಟು ಮಾಡಿತ್ತು. ಇದರಿಂದ ರಾಜ್ಯ ವಿದ್ಯುತ್ ಬರ ಎದುರಿಸಬೇಕಾಯಿತು.
ಕಾವೇರಿ ನದಿ ನೀರಿನ ವಿಷಯದಲ್ಲಿ ಕೇಂದ್ರ ಸರ್ಕಾರ ನಡೆದುಕೊಂಡಿರುವ ರೀತಿ ಎಲ್ಲರಿಗೂ ಗೊತ್ತಿದೆ. ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿದ್ದರೆ ಕೇಂದ್ರವೂ ತಲೆಬಾಗುತ್ತದೆ. ಹೀಗಾಗಿ ಕರ್ನಾಟಕ ಜನತಾ ಪಕ್ಷದಂಥ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಬೇಕು ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications