ಬಿಜೆಪಿ ಭ್ರಷ್ಟತನ ಬಿಚ್ಚಿಟ್ಟ ಮೆಗಾಸ್ಟಾರ್
ಪಾವಗಡ ಪಟ್ಟಣದ ಖಾಸಗಿ ಮೈದಾನವೊಂದರಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾ ತನಾಡಿದ ಅವರು, ಬಿಜೆಪಿ ಸರ್ಕಾರ ಮೇಲಿಂದ ಮೇಲೆ ಭ್ರಷ್ಟಾಚಾರ ಮಾಡುತ್ತಾ ಜನರನ್ನು ಶೋಷಿಸಿದೆ, ಕೆಲವರು ಜೈಲಿಗೂ ಹೋಗಿದ್ದಾರೆ. ಬಿಜೆಪಿಯಲ್ಲಿ ಭ್ರಷ್ಟ ರಾಜಕಾರಣಿಗಳೇ ತುಂಬಿರುವ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ದೂರಿದರು.
ಗಡಿ ಭಾಗವಾದ ಪಾವಗಡ ಬರಪೀಡಿತ ತಾಲೂಕಿಗೆ ನೀರಿನ ಸೌಲಭ್ಯ ಒದಗಿಸುವುದು ಕಾಂಗ್ರೆಸ್ ಮಾತ್ರ ಸಾಧ್ಯ. ಅನ್ಯ ಪಕ್ಷಗಳಿಂದ ಸಾಧ್ಯವಿಲ್ಲ. ಹಿಂದುಳಿದ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ, ನಿರುದ್ಯೋಗ, ಮೂಲಭೂತ ಸೌಲಭ್ಯ ಸೇರಿದಂತೆ ಮತ್ತಿತರ ಸಮಸ್ಯೆಗಳು ಕಾಡುತ್ತಿದ್ದು ಇವೆಕ್ಕೆಲ್ಲಾ ಶಾಶ್ವತ ಪರಿಹಾರ ದೊರಕಬೇಕಾದರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಇ . ವೆಂಕಟೇಶ್ರವರನ್ನು ಚುನಾವಣೆಯಲ್ಲಿ ಕೈ ಹಿಡಿಯಬೇಕೆಂದು ಮನವಿ ಮಾಡಿದರು.'
ಚಿರು ಜೊತೆ ಕೃಷ್ಣ, ರಮ್ಯಾ: ಕೇಂದ್ರ ಪ್ರವಾಸೋದ್ಯಮ ಸಚಿವ, ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆಗೆ ಚಿತ್ರನಟಿ ರಮ್ಯಾ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರು ಏ.29 ಹಾಗೂ ಏ.30 ರಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ.
ಕಾರ್ಯಕ್ರಮ ಪಟ್ಟಿ ಇಂತಿದೆ: ಚಿಕ್ಕಬಳ್ಳಾಪುರದ ಮರಳು ಸಿದ್ದೇಶ್ವರನಾಥ ಸ್ವಾಮಿ ದೇಗುಲದಿಂದ ಚಿರಂಜೀವಿ ಹಾಗೂ ರಮ್ಯಾ ರೋಡ್ ಶೋ ನಡೆಸಿ ಎಂಜಿ ರಸ್ತೆ, ಗಂಗಮ್ಮನ ಗುಡಿ, ಬಜಾರ್ ರಸ್ತೆ ಹಾಗೂ ಬಿಬಿ ರಸ್ತೆ, ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಸಾಗಲಿದ್ದಾರೆ. ಎಸ್ಸೆಂ ಕೃಷ್ಣ ಅವರು ವಿವಿಧ ರಸ್ತೆಗಳ ಮೂಲಕ ಸಾಗಿ ಅಭ್ಯರ್ಥಿ ಕೆ .ಸುಧಾಕರ್ ಪರ ಮತಯಾಚಿಸಲಿದ್ದಾರೆ.
ಅಭ್ಯರ್ಥಿ ಸುಧಾಕರ್ ಅವರು ಕ್ಷೇತ್ರಕ್ಕಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕ್ಷೇತ್ರಕ್ಕೆ ಕುಡಿಯುವ ನೀರು ಒದಗಿಸಲು ಜಕ್ಕಲಮಡುಗು ಕುಡಿಯುವ ನೀರಿನ ಯೋಜನೆಯನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವ ಭರವಸೆ ನೀಡಿದ್ದಾರೆ. ಉಳಿದಂತೆ ಉದ್ಯೋಗ, ಶಿಕ್ಷಣ, ಕೈಗಾರಿಕಾ ಪ್ರದೇಶ ಸ್ಥಾಪನೆ, ಮೂಲ ಸೌಕರ್ಯ, ಪ್ರವಾಸೋದ್ಯಮ ಅಭಿವೃದ್ಧಿ ಮುಂತಾದ ಅಂಶಗಳು ಪ್ರಣಾಳಿಕೆಯಲ್ಲಿದೆ.