ಸ್ಟಾರ್ ಪ್ರಚಾರಕಿ ಶೃತಿ ಪ್ರಾಣಾಪಯದಿಂದ ಪಾರು

ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಮತ ಗಳಿಕೆ ನಿರೀಕ್ಷೆ ಹೊಂದಿರುವ ಬಿಎಸ್ ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷ, ಸ್ಟಾರ್ ಪ್ರಚಾರಕಿಯಾಗಿ ಪಕ್ಷದ ಮಹಿಳಾ ಘಟಕದ ಉಪಾಧ್ಯಕ್ಷೆ ಹಾಗೂ ಜನಪ್ರಿಯ ನಟಿ ಶೃತಿ ಅವರನ್ನು ಕಳಿಸಿದೆ.
ನಟಿ ಶೃತಿ ಸೇರಿದಂತೆ ಕೆಲ ಮುಖಂಡರು ಧಾರವಾಡಕ್ಕೆ ಚುನಾವಣಾ ಪ್ರಚಾರಕ್ಕೆಂದು ಹೆಲಿಕಾಪ್ಟರ್ನಲ್ಲಿ ತೆರಳುತ್ತಿದ್ದರು. ತಾಂತ್ರಿಕ ದೋಷ ಉಂಟಾಗಿರುವುದು ಗೊತ್ತಾದ ಕೂಡಲೇ ಅನಿವಾರ್ಯವಾಗಿ ಪೈಲೆಟ್ನ ಜಾಗರೂಕತೆಯಿಂದ ಜಮೀನೊಂದರಲ್ಲಿ ಕಾಪ್ಟರನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ಇದರಿಂದ ಯಾವುದೇ ಅಪಾಯಗಳಾಗದೆ ನಿಟ್ಟುಸಿರು ಬಿಟ್ಟಿದ್ದಾರೆ.
ಗರಗ ಗ್ರಾಮದ ಶಾಲಾ ಮೈದಾನದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಸ್ಥಳ ಗುರುತಿಸಲಾಗಿತ್ತು. ಆದರೆ, ನಿಗದಿತ ಸ್ಥಳದಲ್ಲಿ ಇಳಿಸಲು ಆಗದೆ ಪಕ್ಕದ ಹೊಲದಲ್ಲಿ ಲ್ಯಾಂಡ ಮಾಡಲಾಯಿತು. ಪೈಲಟ್ ಗೆ ಯಾವ ತೊಂದರೆ ಎದುರಾಗಿತ್ತು, ಹೆಲಿಕಾಪ್ಟರ್ ನಲ್ಲಿ ಕಂಡ ಬಂದ ದೋಷ ಏನು ಎಂಬುದರ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ.
ಸ್ಟಾರ್ ಪ್ರಚಾರಕಿ ಹಾಗೂ ಹೆಲಿಕಾಪ್ಟರ್ ಪ್ರಾಬ್ಲಂ : 2004ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಜನಪ್ರಿಯ ನಟಿ ಸೌಂದರ್ಯ ಅವರು ಅಕಾಲಿಕವಾಗಿ ಸಾವನ್ನಪ್ಪಿದ್ದ ಕರಾಳ ನೆನಪು ಎಲ್ಲರಿಗೂ ಇದೆ. ಆಂಧ್ರಪ್ರದೇಶದಲ್ಲಿ ಬಿಜೆಪಿ ಪರ ಪ್ರಚಾರಕ್ಕಾಗಿ ತೆರಳುತ್ತಿದ್ದ ಸೌಂದರ್ಯ ಅವರು ಜಕ್ಕೂರು ವಿಮಾನ ನಿಲ್ದಾಣದಲ್ಲಿ ದುರಂತ ಸಾವನ್ನಪ್ಪಿದ್ದರು.
ನಟಿ ಶೃತಿ ಈ ಘಟನೆಯಿಂದ ಕೊಂಚ ಗಾಬರಿಗೊಂಡರೂ, ಯಾವುದೇ ತೊಂದರೆಯಾಗದಂತೆ ಪಾರಾಗಿದ್ದಕ್ಕೆ ದೇವರಿಗೆ ಧನ್ಯವಾದ ಅರ್ಪಿಸಿದರು. ನಂತರ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಧಾರವಾಡದಲ್ಲಿನ ಚುನಾವಣಾ ಪ್ರಚಾರಕ್ಕೆ ತೆರಳಿದರು.












Click it and Unblock the Notifications