ಮತದಾರರ ಚಿತ್ತ ಎತ್ತ: ಹಾಸನದಲ್ಲಿ ಭವಿಷ್ಯ ನುಡಿದ ಎಚ್ಡಿಕೆ
ಚನ್ನರಾಯಪಟ್ಟಣ, ಏ 25: ಹಾಸನದ ನೆಲದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮುಂಬರುವ ಚುನಾವಣೆಯ ಫಲಿತಾಂಶದ ಬಗ್ಗೆ ಭರವಸೆಯ 'ಭವಿಷ್ಯ' ನುಡಿದಿದ್ದಾರೆ.
ರಾಜ್ಯ ಎಲ್ಲಾ ಸುತ್ತಿದ ನಂತರ, ಜನತೆಯ ಆಶೀರ್ವಾದ ಪಡೆದ ನಂತರ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ನಮ್ಮ ಲೆಕ್ಕಾಚಾರದ ಪ್ರಕಾರ ಪಕ್ಷ 125 ರಿಂದ 135 ಸ್ಥಾನಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ಜನತೆ ಈ ಬಾರಿ ನಮ್ಮ ಕೈಹಿಡಿಯಲಿದ್ದಾರೆ. ಯಾವುದೇ ಪಕ್ಷಗಳ ಜೊತೆ ಹೊಂದಾಣಿಕೆಯಿಲ್ಲದೆ ನಾವು ಗದ್ದುಗೇರಲಿದ್ದೇವೆ ಎಂದು ಕುಮಾರಸ್ವಾಮಿ ಆಶಾವಾದ ವ್ಯಕ್ತ ಪಡಿಸಿದ್ದಾರೆ.
ನಗರದ ಸರಕಾರೀ ಶಾಲಾ ಆವರಣದಲ್ಲಿ ಕ್ಷೇತ್ರದ ಅಭ್ಯರ್ಥಿ ಸಿ ಎನ್ ಬಾಲಕೃಷ್ಣ ಪರ ಭಾರೀ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ನಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ತಾಸಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಿಂದ ಹಿಡಿದು ಇತರ ಬ್ಯಾಂಕಿನಲ್ಲಿ ರೈತರು ಪಡೆದ ಸಾಲವನ್ನು ಮನ್ನಾ ಮಾಡುತ್ತೇವೆ.
ಇದು ನಮ್ಮ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಕನಸು ಕೂಡಾ. ಅವರ ಕನಸನ್ನು ನನಸು ಮಾಡುವುದು ನನ್ನ ಮೊದಲ ಗುರಿ. ರಾಜ್ಯದೆಲ್ಲಡೆ ಜೆಡಿಎಸ್ಸಿಗೆ ಮತದಾರರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಹಾಗಾಗಿ ನಮ್ಮ ಪಕ್ಷ ಸಿಂಗಲ್ ಮೆಜಾರಿಟಿ ಪಡೆದುಕೊಂಡು ಜನತೆಯ ಆಶೀರ್ವಾದದೊಂದಿಗೆ ಅಧಿಕಾರಕ್ಕೆ ಬಂದು ಜನ ಮೆಚ್ಚುವ ಆಡಳಿತ ನೀಡಲಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬಿಎಸ್ವೈ ಮತ್ತು ಇತರ ವಿರೋಧ ಪಕ್ಷವನ್ನು ಎಚ್ಡಿಕೆ ತರಾಟೆಗೆ ತೆಗೆದುಕೊಂಡಿದ್ದು ಹೀಗೆ..
ಯಡಿಯೂರಪ್ಪ ತಿರುಕನ ಕನಸು
ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗುವುದಿಲ್ಲ. ಕುಮಾರಸ್ವಾಮಿ ಅಧಿಕಾರದ ಆಸೆ ಬಿಟ್ಟು ಬಿಡಲಿ ಎಂದು ಯಡಿಯೂರಪ್ಪ ಹೇಳಿಕೆ ನೀಡುತ್ತಾರೆ. ಅಧಿಕಾರದ ಆಸೆ ಯಾರಿಗೆ ಇರುವುದು ಎನ್ನುವುದನ್ನು ಕಳೆದ ಐದು ವರ್ಷಗಳಲ್ಲಿ ನಿಮ್ಮ ನಡವಳಿಕೆಯಿಂದ ರಾಜ್ಯದ ಜನತೆ ಅರಿತಿದಿದ್ದಾರೆ.
ಯಡಿಯೂರಪ್ಪ ತಿರುಕನ ಕನಸು
ಈ ಕುಮಾರಸ್ವಾಮಿ ಯಾವತ್ತೂ ಅಧಿಕಾರದ ಆಸೆಗೆ ಬಿದ್ದವನಲ್ಲ. ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಚರಿಸಿದ್ದೇನೆ. ಯಡಿಯೂರಪ್ಪ ನಾನೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಿದ್ದೀರಿ. ನೀವು 'ತಿರುಕನ ಕನಸು' ಕಾಣುತ್ತಿದ್ದೀರಿ ಎಂದು ಎಚ್ಡಿಕೆ, ಬಿಎಸ್ವೈಗೆ ಲೇವಡಿ ಮಾಡಿದ್ದಾರೆ.
ಭ್ರಷ್ಟ ಬಿಜೆಪಿ ತೊಲಗಲಿ
ಐದು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ನೀಡಿದ ಬಿಜೆಪಿ ಸರಕಾರ ಅಕ್ಷರಸ: ರಾಜ್ಯವನ್ನು ಲೂಟಿ ಹೊಡೆದಿದೆ. ಪ್ರಜ್ಞಾವಂತ ಮತದಾರರು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮತಹಾಕುವ ಮುನ್ನ ಒಂದು ಬಾರಿ ಯೋಚಿಸಿ.
ಭ್ರಷ್ಟ ಬಿಜೆಪಿ ತೊಲಗಲಿ
ರಾಜ್ಯ ಈ ಹಿಂದೆ ಎಂದೂ ಕಾಣದಷ್ಟು ಖಜಾನೆಯನ್ನು, ರಾಜ್ಯದ ಸಂಪತ್ತು ಬಿಜೆಪಿ ಅಧಿಕಾರದ ಅವಧಿಯಲ್ಲಿ ಲೂಟಿಯಾಗಿದೆ. ಶಿಸ್ತಿನ ಪಕ್ಷವೆಂದು ಅಧಿಕಾರದಲ್ಲಿ ಅವರು ತೋರಿದ ಅಶಿಸ್ತು ಕಂಡು ರಾಜ್ಯದ ಜನತೆ ಹೈರಾಣವಾಗಿದ್ದಾರೆ ಎಂದು ಬಿಜೆಪಿಯನ್ನು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನಮ್ಮನ್ನು ಟೀಕಿಸುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ
ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಎಂದು ಟೀಕಿಸುವುದು ಬಿಟ್ಟು ಕಾಂಗ್ರೆಸ್ಸಿಗರಿಗೆ ಬೇರೇನೂ ತಿಳಿದಿಲ್ಲ. ಅಪ್ಪನ ನಂತರ ಮಕ್ಕಳಿಗೆ ಈ ಬಾರಿಯ ಚುನಾವಣೆಯಲ್ಲಿ ಎಷ್ಟು ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೀರಿ ಎನ್ನುವುದನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ.
ನಮ್ಮನ್ನು ಟೀಕಿಸುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ
ದೇಶವನ್ನು ಭ್ರಷ್ಟಾಚಾರದ ಕೂಪದಲ್ಲಿ ನೂಕಿದ ನಿಮ್ಮ ಹಣೆಬರಹ ಎಲ್ಲರಿಗೂ ಗೊತ್ತಿದೆ. ಟಿಕೆಟಿಗಾಗಿ ಕೋಟಿ ಕೋಟಿ ಹಣ ಪಡೆದಿದ್ದೀರಿ ಎನ್ನುವ ಸುದ್ದಿಯಿದೆ. ರಾಜ್ಯದ ಜನತೆಗೆ ಮೊದಲು ಅದನ್ನು ಸ್ಪಷ್ಟ ಪಡಿಸಿ ನಿಮ್ಮ ನೈತಿಕತೆ ಪ್ರದರ್ಶಿಸಿ ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.