ಮೋದಿ ಪ್ರಚಾರ ಬೆಂಗಳೂರಿಗೆ ಮಾತ್ರ ಸೀಮಿತ

ಏ.28ರಂದು ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಲಿದ್ದು ಅಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಯಾವ ಜಿಲ್ಲೆಗಳಿಗೂ ಭೇಟಿ ನೀಡದೆ ಹಿಂದಿರುಗಲಿದ್ದಾರೆ.(ಒಂದು ದಿನ ಮಾತ್ರ ಮೋದಿ ಪ್ರಚಾರ)
ಬಿಜೆಪಿ ರಚಿಸಿರುವ ಪಕ್ಷದ ಪ್ರಚಾರದ ಯೋಜನೆಯಲ್ಲಿ ಮೋದಿ ಒಂದು ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಲಿದ್ದಾರೆ ಎಂದು ಪ್ರಕಟಿಸಲಾಗಿದೆ. ಇದರಿಂದ ನಮ್ಮ ಜಿಲ್ಲೆಗೆ ಮೋದಿ ಬರುತ್ತಾರೆ ಎಂಬ ನಾಯಕರ ಆಸೆಗೆ ತಣ್ಣೀರು ಸುರಿದಂತಾಗಿದೆ.
ಮೋದಿ ಬದಲು ಉಮಾ ಭಾರತಿ : ಮೋದಿಗಿಂತ ಮೊದಲೇ ಬೆಂಗಳೂರಿಗೆ ಆಗಮಿಸುವ ಹಿರಿಯ ನಾಯಕ ಉಮಾ ಭಾರತಿ ಹೆಬ್ಬಾಳ, ಮಹದೇವಪುರ ಮತ್ತು ಗಾಂಧಿ ನಗರದಲ್ಲಿ ಪ್ರಚಾರ ನಡೆಸಲಿದ್ದಾರೆ. ಒಟ್ಟು ಎರಡು ದಿನ ಉಮಾ ಭಾರತಿ ಬೆಂಗಳೂರಿನಲ್ಲಿ ಮತ ಯಾಚನೆ ಮಾಡಲಿದ್ದಾರೆ.ಮೋದಿ ಅವರ ಬದಲು ನಗರದಲ್ಲಿ ಉಮಾ ಭಾರತಿ ಪ್ರಚಾರ ನಡೆಸಲಿದ್ದಾರೆ.
ಕರಾವಳಿಯಲ್ಲಿ ವರುಣ್ ಗಾಂಧಿ : ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಎಂದೇ ಪ್ರಸಿದ್ಧ ಪಡೆದಿರುವ ಯುವ ನಾಯಕ ವರುಣ್ ಗಾಂಧಿ, ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ.
ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸ್ ಗಢ್ ಸಿಎಂ ರಮಣ್ ಸಿಂಗ್, ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಬಿಜೆಪೊಯ ಸ್ಟಾರ್ ಪ್ರಚಾಕರಾಗಿ ಎರಡನೇ ಹಂತದಲ್ಲಿ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಕಿರುಚಿತ್ರ ಸಿದ್ಧ : ಮತದಾರರನ್ನು ಸೆಳೆಯಲು ಬಿಜೆಪಿ ಎಂಟು ಗೀತೆಗಳಿರುವ ಧ್ವನಿ ಸುರುಳಿ, ಹತ್ತು ರೆಡಿಯೋ ಮತ್ತು ಟಿವಿ ಜಾಹೀರಾತು, ಹತ್ತು ನಿಮಿಷಗಳ ನಾಲ್ಕು ಕಿರುಚಿತ್ರ ಸಿದ್ಧಪಡಿಸಿದ್ದು, ಭಾನುವಾರ ಬಿಡುಗಡೆ ಮಾಡಲಾಗಿದೆ.
ಜಾಹೀರಾತಿನಲ್ಲೂ ಯಡ್ಡಿಗೆ ತಿರುಗೇಟು : ಪಕ್ಷ ತೊರೆದು ಕಜೆಪಿ ಸ್ಥಾಪಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಜೆಪಿ ಜಾಹೀರಾತಿನ ಮೂಲಕವೂ ತಿರುಗೇಟು ನೀಡಿದೆ. "ಜನಾದೇಶ ಪವಿತ್ರ ನಂಬಿಕೆಯನ್ನು ಉಳಿಸಿಕೊಳ್ಳಲು ಎಷ್ಟೇ ದೊಡ್ಡ ವ್ಯಕ್ತಿಯನ್ನಾಗಲಿ ನಾವು ತ್ಯಾಗ ಮಾಡುತ್ತೇವೆ" ಎಂದು ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಪ್ರಹಾರ ನಡೆಸಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications