ಮೋದಿ, ರಾಹುಲ್ ಪ್ರಚಾರ ಗೆಲ್ಲುವ ಕ್ಷೇತ್ರಗಳಿಗೆ ಸೀಮಿತ

ರಾಷ್ಟ್ರೀಯ ಮಟ್ಟದ ಉಭಯ ನಾಯಕರು ಪ್ರಚಾರ ನಡೆಸಿಯೋ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸದಿದ್ದರೆ, ರಾಷ್ಟ್ರಮಟ್ಟದಲ್ಲಿ ನಾಯಕರಿಗೆ ಹಿನ್ನಡೆ ಉಂಟಾಗುವುದರಿಂದ ಇಂತಹ ನಿರ್ಧಾರಗಳನ್ನು ಎರಡು ಪಕ್ಷಗಳು ತೆಗೆದುಕೊಂಡಿವೆ.
ನಮ್ಮ ಕ್ಷೇತ್ರಕ್ಕೆ ಮೋದಿ ಬರ್ತಾರೆ, ರಾಹುಲ್ ಬರ್ತಾರೆ ಎಂದು ಕಾದು ಕುಳಿತಿದ್ದ ಶಾಸಕರು ಮತ್ತು ಜನರಿಗೆ ಇದರಿಂದ ತೀವ್ರ ನಿರಾಸೆ ಉಂಟಾಗಿದೆ. ಮೋದಿ ಕೇವಲ ಒಂದು ದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ. ರಾಹುಲ್ ಗಾಂಧಿ ಮೂರು ದಿನಗಳ ಕಾಲ ರಾಜ್ಯದಲ್ಲಿ ಮತಯಾಚಿಸಲಿದ್ದಾರೆ.
ರಾಹುಲ್ ಬಂದ್ರೆ ಈಶ್ವರಪ್ಪ ಗೆಲ್ತಾರಂತೆ : ರಾಹುಲ್ ಗಾಂಧಿ ಯಾವ ಕ್ಷೇತ್ರಕ್ಕೆ ಬರದಿದ್ದರೂ ಸರಿ. ಆದರೆ, ಶಿವಮೊಗ್ಗಕ್ಕೆ ಬರಲಿ ಅವರು ಬಂದರೆ ನನಗೆ ಖಂಡಿತ ಗೆಲುವು ದೊರಕುತ್ತದೆ ಎಂದು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ. ರಾಹುಲ್ ಪ್ರಚಾರ ಮಾಡಿದ ಸ್ಥಳದಲ್ಲಿ ಕಾಂಗ್ರಸ್ ನೆಲ ಕಚ್ಚಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಸಿದ್ದು ಸಿಎಂ ಕನವರಿಕೆ : ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ 130 ಸ್ಥಾನಗಳಿಸಲಿದೆ. ನಾನು ಸಿಎಂ ಆಗುತ್ತೇನೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಪುನರುಚ್ಚರಿಸಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು ನಾನೇ ಮುಂದಿನ ಸಿಎಂ ಎಂದು ಎರಡು ಬಾರಿ ಹೇಳಿ ಜನರಲ್ಲಿ ಅಚ್ಚರಿ ಮೂಡಿಸಿದರು.
ವಿಕಾಸವೇ ಗುರಿ ಬಿಜೆಪಿಯೇ ದಾರಿ : ವಿಧಾನಸಭೆ ಚುನಾವಣೆಗೆ ಬಿಜೆಪಿ ವಿಕಾಸ ಎಂಬ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಗುಡಿಸಲು ಮುಕ್ತ ಕರ್ನಾಟಕ, ಪ್ಲಾಸ್ಟಿಕ್ ಮುಕ್ತ ಕರ್ನಾಟಕ, ರಾಜ್ಯ ಮಹಿಳಾ ಹಕ್ಕುಗಳ ಆಯೋಗ ಸ್ಥಾಪನೆ ಮುಂತಾದ ಭರವಸೆಗಳನ್ನು ಪ್ರಣಾಳಿಕೆ ಒಳಗೊಂಡಿದೆ. (ಬಿಜೆಪಿ ಪ್ರಣಾಳಿಕೆಯ ಅಂಶಗಳು)
ನಾನು ಸಿಎಂ ಆಗೋಲ್ಲ : ಕಾಂಗ್ರೆಸ್ ಪಕ್ಷದಲ್ಲಿ ನಾನು ಸಿಎಂ ಸ್ಥಾನದ ಅಕಾಂಕ್ಷಿ ಎಂದು ಹೇಳುವ ನಾಯಕರು ಜಾಸ್ತಿ ಆಗಿರುವಾಗ ನನಗೆ ಸಿಎಂ ಆಗುವ ಆಸೆಯಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡೀಸ್ ಹೇಳಿದ್ದಾರೆ. (ಆಸ್ಕರ್ ಏಕೆ ಸಿಎಂ ಆಗೋಲ್ಲ)
ಬಗೆಹರಿದ ಖೇಣಿ ಕಿರಿಕ್ : ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಭಾರತೀಯ ಪ್ರಜೆಯಲ್ಲ. ಅವರ ನಾಮಪತ್ರ ತಿರಸ್ಕರಿಸಿ ಎಂಬ ದೂರಿನಿಂದ ಖೇಣಿ ಬಜಾವಾಗಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಟಿ.ಜೆ.ಅಬ್ರಾಹಂ ತಮ್ಮ ಪ್ರತಿಸ್ಪರ್ಧಿ ಖೇಣಿ ವಿರುದ್ದ ನೀಡಿದ್ದ ದೂರು. ವಜಾಗೊಂಡಿದೆ. ಖೇಣಿ ಭಾರತೀಯ ಎಂದು ಚುನಾವಣಾಧಿಕಾರಿಗಳಿಗೆ ದಾಖಲೆ ನೀಡಿದ್ದಾರೆ.
ವರ್ತೂರು ಬಳಿ 25 ಲಕ್ಷ ಹಣ : ಕೋಲಾರ ಜಿಲ್ಲೆಯ ವರ್ತೂರು ಬಳಿ ಚುನಾವಣಾಧಿಕಾರಿಗಳು ವಾಹನವೊಂದನ್ನು ತಪಾಸಣೆ ನಡೆಸಿದಾಗ 25 ಲಕ್ಷ ರೂಪಾಯಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಪತ್ತೆಯಾಗಿದೆ. ಕಾರಿನ ಚಾಲಕನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಾಳೆ ಕಾಂಗ್ರೆಸ್ ಪ್ರಣಾಳಿಕೆ : ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ನಾಳೆ ಬಿಡುಗಡೆಗೊಳ್ಳಲಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪ್ರಣಾಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಬಿಡುಗಡೆ ಮಾಡಲಿದ್ದಾರೆ.
ಬಿಜೆಪಿ ಕಾರ್ಯಕರ್ತನಿಗೆ ಥಳಿತ : ಹಳೇ ದ್ವೇಷದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಗೊಂಡ ವಿಶ್ವನಾಥ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೂವರಿಂದ ನಾಲ್ವರು ಈ ಕೃತ್ಯ ಎಸಗಿದ್ದಾರೆ ಎಂದು ವಿಶ್ವನಾಥ್ ದೂರು ನೀಡಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications