ದುಡ್ಡು ಕೊಟ್ಟು ಕಾರು ಬಿಡಿಸಿಕೊಂಡ ಜನಾ ರೆಡ್ಡಿ

2.45 ಕೋಟಿ ಠೇವಣಿ ಕಟ್ಟಿದ ನಂತರವೇ ಕಾರು ವಾಪಸ್:
ಗಮನಾರ್ಹವೆಂದರೆ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಅಸಲಿಗೆ ಸಿಬಿಐನವರು ಇನ್ನೂ ಆರೋಪಪಟ್ಟಿಗಳನ್ನು ಒಂದಾದ ಮೇಲೊಂದರಂತೆ ದಾಖಲಿಸುತ್ತಲೇ ಇದ್ದಾರೆ. ಹಾಗಾಗಿ, ರೆಡ್ಡಿಗೆ ಸೇರಿದ ಸಿಬಿಐ ಜಫ್ತಿ ಮಾಡಿ ಯಾವುದೇ ವಸ್ತುವನ್ನು ವಾಪಸು ಮಾಡಲು ಕೋರ್ಟ್ ನಿಗದಿಪಡಿಸುವ ಮೊತ್ತವನ್ನು ಕಟ್ಟಿ ವಾಪಸು ಪಡೆಯಬೇಕು.
ಹಾಗಾಗಿ ರೆಡ್ಡಿ ಕುಟುಂಬ 2.45 ಕೋಟಿ ರೂ. ಠೇವಣಿ ಕಟ್ಟಿ ಕಾರನ್ನು ವಾಪಸ್ ಪಡೆದಿದೆ. ಪ್ರಕರಣ ಇತ್ಯರ್ಥವಾಗಿ ಕೇಸು ರೆಡ್ಡಿ ವಿರುದ್ಧವಾದರೆ, ಅಂದರೆ ರೆಡ್ಡಿ ಅಕ್ರಮ ಗಣಿಗಾರಿಕೆ ಸಾಬೀತಾದರೆ ಸದರಿ ಕಾರು ಸೇರಿದಂತೆ ಇನ್ನಿತರೆ ಯಾವುದೇ ವಸ್ತುವನ್ನೂ ಸರಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬಹುದು.
ಹೈದರಾಬಾದಿನ ಸಿಬಿಐ ಕೋರ್ಟ್ ಆದೇಶದ ಅನ್ವಯ ಗುರುವಾರ ಬೆಳಿಗ್ಗೆ ನಗರದ ರೆಡ್ಡಿ ನಿವಾಸಕ್ಕೆ ಹೈದರಾಬಾದ್ ನಿಂದ ಆಗಮಿಸಿದ ಸಿಬಿಐ ಅಧಿಕಾರಿಗಳು ಕಾರನ್ನು ಅವರ ಕುಟುಂಬಕ್ಕೆ ಒಪ್ಪಿಸಿದರು. ಈ ಸಂದರ್ಭ ಮನೆಯಲ್ಲಿದ್ದ ರೆಡ್ಡಿ ಸಂಬಂಧಿ ಸುನಿಲ್ ರೆಡ್ಡಿ, ಕಾರಿನ ಕೀಲಿ ಕೈ ಪಡೆದರು.
ಕಾರ್ ವಶ ಏಕೆ, ಯಾವಾಗ?:
ಅಕ್ರಮ ಗಣಿಗಾರಿಕೆ ಪ್ರಕರಣದಡಿ 2011ರ ಸೆ. 5ರಂದು ಆಂಧ್ರದ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ಜನಾ ರೆಡ್ಡಿಯನ್ನು ಬಂಧಿಸಿದ್ದರು. ಈ ವೇಳೆ ರೆಡ್ಡಿ ನಿವಾಸದಲ್ಲಿದ್ದ ಚಿನ್ನಾಭರಣ, ಮಹತ್ವದ ದಾಖಲೆಗಳು ಹಾಗೂ ಐಷಾರಾಮಿ ಕಾರುಗಳು, ಹೆಲಿಕಾಪ್ಟರ್ಗಳನ್ನು ವಶಪಡಿಸಿಕೊಂಡಿದ್ದರು.
ಇದರ ವಿರುದ್ಧ ರೆಡ್ಡಿ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈದರಾಬಾದ್ ಸಿಬಿಐ ಕೋರ್ಟ್, ರೋಲ್ಸ್ ರಾಯ್ ಕಾರನ್ನು ರೆಡ್ಡಿ ಕುಟುಂಬಕ್ಕೆ ವಾಪಸ್ ನೀಡುವಂತೆ ಏ. 2ರಂದು ಆದೇಶಿಸಿತ್ತು. ಅಲ್ಲದೆ, ಏ. 18ರಂದು ಕಾರನ್ನು ರೆಡ್ಡಿ ಕುಟುಂಬಕ್ಕೆ ಒಪ್ಪಿಸಬಹುದು ಎಂದೂ ಆದೇಶದಲ್ಲಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಆರ್ಟಿಓ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ರೆಡ್ಡಿ ಮನೆಯಲ್ಲೇ ಜಪ್ತಿ ಮಾಡಿದ್ದ ಕಾರಿನ ಕೀ ಯನ್ನು ಸುನಿಲ್ ರೆಡ್ಡಿಗೆ ಅಧಿಕಾರಿಗಳು ನೀಡಿದರು.
ಮತ್ತೊಂದು ಸಮಾಧಾನಕರ ಸಂಗತಿಯೆಂದರೆ ರೆಡ್ಡಿಗೆ ಸೇರಿದ ರುಕ್ಮಿಣಿ ಹೆಲಿಕಾಪ್ಟರ್ ಅನ್ನು ಬಿಡುಗಡೆ ಮಾಡುವಂತೆ ಆದೇಶಿಸಲಾಗಿದೆ. ಈ ಮಧ್ಯೆ, 3.80 ಕೋಟಿ ರೂ. ಮೌಲ್ಯದ SUV ಕಾರು ಇನ್ನೂ ಸಿಬಿಐ ವಶದಲ್ಲಿದ್ದು, ಅದರ ಬಿಡುಗಡೆಗೂ ರೆಡ್ಡಿ ಕುಟುಂಬ ಅರ್ಜಿ ಸಲ್ಲಿಸಿದೆ.












Click it and Unblock the Notifications