ರೆಬೆಲ್ ಸ್ಟಾರ್ ಅಂಬರೀಷ್ ವಿರುದ್ಧ ಕೈ ರೆಬೆಲ್

'ಮಂಡ್ಯ ಕ್ಷೇತ್ರದಿಂದ ತಮಗೆ ಶೇ. 99 ರಷ್ಟು ಟಿಕೆಟ್ ಸಿಗುವ ವಿಶ್ವಾಸವಿದೆ. ಆದರೆ ಕೈ ಗೆ ಬಿ ಫಾರ್ಮ್ ಸಿಗುವವರೆಗೂ ಏನು ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ಹೈಕಮಾಂಡ್ ಬಿ ಫಾರ್ಮ್ ನೀಡಿದರೆ ಏಪ್ರಿಲ್ 15 ರಂದು ನಾಮಪತ್ರ ಸಲ್ಲಿಸುತ್ತೇನೆ. ಚುನಾವಣೆಯಲ್ಲಿ ಗೆದ್ದರೆ ಜಿಲ್ಲೆಯಲ್ಲಿ ಪಕ್ಷ ಕಟ್ಟಲು ಪ್ರಯತ್ನಿಸುತ್ತೇನೆ ಎಂದು ನಟ ಅಂಬರೀಶ್ ಹೇಳಿದರು.
ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಮಂಡ್ಯ ಕ್ಷೇತ್ರಕ್ಕೆ ಆಗಮಿಸಿದ ನಟ ಅಂಬರೀಶ್, ಕಾಂಗ್ರೆಸ್ ಕಾರ್ಯಕರ್ತರು ಮತ್ತು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ಚರ್ಚಿಸಿದರು. ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಂಬಿ, ತಮಗಿನ್ನೂ ಟಿಕೆಟ್ ನೀಡುವ ಕುರಿತು ಹೈಕಮಾಂಡ್ ಧೃಡೀಕರಿಸಿಲ್ಲ ಎಂದು ಪರೋಕ್ಷವಾಗಿ ಹೇಳಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಂಬರೀಶ್ ಸೋಲನ್ನು ಅನುಭವಿಸಿದ್ದರು. ಇದಾದ ನಂತರ ಶಾಸಕ ಸ್ಥಾನಕ್ಕೆ ನಿಲ್ಲುವುದಾಗಿ ಘೋಷಣೆ ಮಾಡಿದ್ದ ಅಂಬಿ, ತಮ್ಮ ಕ್ಷೇತ್ರದ ಆಯ್ಕೆಯನ್ನು ಮಾತ್ರ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದರು. ಅಲ್ಲದೆ ತಾವು ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂಬುದನ್ನು ಗುಟ್ಟಾಗಿ ಇಟ್ಟಿಲ್ಲ
ರೆಬೆಲ್ ಗೆ ರೆಬೆಲ್: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಂಸದ ಡಾ.ಅಂಬರೀಷ್ ಸ್ಪರ್ಧಿಸುವುದು ಬೇಡ ಎಂದು ಮಾಜಿ ಸಚಿವ ಆತ್ಮಾನಂದ ಬೆಂಬಲಿಗರು ಪ್ರೀತಿಯ ಅಂಬಿಯಣ್ಣನಿಗೆ ಆಗ್ರಹಪೂರ್ವಕ ಮನವಿ ಮಾಡಿಕೊಂಡಿದ್ದರು. ಅಲ್ಲಿಗೆ ಅಂಬರೀಷ್ ಅವರ 'ಮಂಡ್ಯ ಮಿಷನ್' ಮತ್ತೊಂದು ತಿರುವು ಪಡೆದುಕೊಂಡಿತ್ತು.
ಇತ್ತೀಚೆಗೆ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್, ಶುಕ್ರವಾರ(ಏ.12) ರಾತ್ರಿ ವೇಳೆಗೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಈ ಪಟ್ಟಿಯಲ್ಲಿ ಮೊದಲ ಪಟ್ಟಿಯಲ್ಲಿ ಘೋಷಣೆಯಾಗಿರುವ ಕ್ಷೇತ್ರಗಳನ್ನು ಹೊರತು ಪಡಿಸಿ, ಉಳಿದ ಎಲ್ಲ ಕ್ಷೇತ್ರಗಳಿಗೂ ಕಾಂಗ್ರೆಸ್, ತನ್ನ ಅಭ್ಯರ್ಥಿಗಳ ಹೆಸರನ್ನು ಬಹಿರಂಗಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಕನಿಷ್ಠ 37 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಬಹುದು ಅಥವಾ 47 ಕ್ಷೇತ್ರಗಳ ಪಟ್ಟಿಯೂ ಹೊರ ಬಿದ್ದರೂ ಅಚ್ಚರಿಯೇನಿಲ್ಲ.
ಕಾಂಗ್ರೆಸ್ ತಯಾರಿಸಿರುವ ಮೊದಲ ಪಟ್ಟಿಯಂತೆ ಪ್ರತಿ ಕ್ಷೇತ್ರಕ್ಕೂ ಮೂವರು ಅಭ್ಯರ್ಥಿಗಳನ್ನು ಅಖೈರು ಮಾಡಲಾಗಿದೆ. ಎರಡನೇ ಪಟ್ಟಿಯಲ್ಲಿ ಡಾ.ಅಂಬರೀಷ್ ಜೊತೆಗೆ, ಮಾಜಿ ಸಚಿವ ಆತ್ಮಾನಂದ ಅವರು ಹೆಸರು ಇದೆ.
ಕಳೆದ ಬಾರಿ (2008ರ ವಿಧಾನಸಭೆ ಚುನಾವಣೆ) ಶ್ರೀರಂಗಪಟ್ಟಣ ಅಲ್ಪ ಮತಗಳಿಂದ ಸೋತಿದ್ರಿ, ನಿಮ್ಮ ಬಗ್ಗೆ ಅಲ್ಲಿನ ಜನರಿಗೆ ಸಹಜವಾಗಿ ಅನುಕಂಪವಿದೆ. ನೀವು ಶ್ರೀರಂಗಪಟ್ಟಣದಿಂದಲೇ ಸ್ಪರ್ಧಿಸಬೇಕು.
ವೀರಪ್ಪ ಮೊಯ್ಲಿ ಕ್ಯಾಬಿನೆಟ್ ನಲ್ಲಿ ತೋಟಗಾರಿಕೆ ಸಚಿವರಾಗಿದ್ದ ಎಂ.ಎಸ್ ಆತ್ಮಾನಂದ ಅವರು ಮಂಡ್ಯ ನಗರದವರು. ಅವರು ಅಲ್ಲಿಂದಲೇ ಕಣಕ್ಕಿಳಿಯಬೇಕು. ಆಗ ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗುತ್ತವೆ. ಇದರಿಂದ ಪಕ್ಷಕ್ಕೆ ಲಾಭವಾಗಲಿದೆ ಎಂದು ಆತ್ಮಾನಂದ ಅವರ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ. ಆದರೆ, ಮಂಡ್ಯದ ಗಂಡು ಅಂಬರೀಷ್ ಮಂಡ್ಯವೇ ಬೇಕು ಎಂದು ಪಟ್ಟು ಹಾಕಿದ್ದಾರೆ. ಏನಾಗುತ್ತೋ ಕಾದು ನೋಡೋಣ...












Click it and Unblock the Notifications