ಯಡಿಯೂರಪ್ಪ ಹೆಸರು ಮರೆಮಾಚುತ್ತಿರುವ ಆಯೋಗ!

ಶಿವಮೊಗ್ಗ ಜಿಲ್ಲೆಯಲ್ಲಿ ಯಡಿಯೂರಪ್ಪನವರು ಮಾಡಿದ ಅನೇಕ ಅಭಿವೃದ್ಧಿ ಕಾರ್ಯಗಳಿಂದಾಗಿ ಅವರ ಹೆಸರು ಹಲವು ಕಡೆ ರಾರಾಜಿಸುತ್ತಿದೆ. ಅವರ ಸ್ವ ಕ್ಷೇತ್ರ ಶಿಕಾರಿಪುರದಲ್ಲಂತೂ ಯಡಿಯೂರಪ್ಪ ಅವರ ಹೆಸರು ಇಲ್ಲದ ಫಲಕಗಳನ್ನು ಹುಡುಕುವುದು ಕಷ್ಟ.
ಚುನಾವಣಾ ಸಮಯದಲ್ಲಿ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಜಾರಿಗೆ ತರಬೇಕಾದ ಆಯೋಗ ಶಿಕಾರಿಪುರ ಬಸ್ ನಿಲ್ದಾಣದ ಮೇಲಿನ ಯಡಿಯೂರಪ್ಪ ಹೆಸರು ಮರೆ ಮಾಚುವ ಕಾರ್ಯಕ್ಕೆ ಕೈ ಹಾಕಿದೆ. ಯಡಿಯೂರಪ್ಪ ಹೆಸರಿಗೆ ಚುನಾವಣೆ ಮುಗಿಯುವವರೆಗೆ ಮುಸುಕು ಹಾಕಲು ಸಿದ್ಧತೆ ನಡೆದಿದೆ.
ನೀತಿ ಸಂಹಿತೆಯಂತೆ ಪಕ್ಷದ ಮತ್ತು ವ್ಯಕ್ತಿಯ ಸಾಧನೆ ಬಿಂಬಿಸುವ ಜಾಹೀರಾತುಗಳು, ಫಲಕಗಳು ಕಾಣಿಸುವಂತಿಲ್ಲ. ಇದು ಮತದಾರರ ಮೇಲೆ ಪ್ರಭಾವ ಬೀರಿ, ಅವರ ಪರವಾಗಿ ಮತದಾನ ಮಾಡುವಂತೆ ಪ್ರೇರೆಪಣೆ ಮಾಡುತ್ತದೆ. ಇದರಿಂದ ನ್ಯಾಯ ಸಮ್ಮತ ಚುನಾವಣೆ ನಡೆಯಲು ಸಾಧ್ಯವಿಲ್ಲ ಎಂಬುದು ಆಯೋಗದ ನಿಲುವು.
ಶಿಕಾರಿಪುರದ ಖಾಸಗಿ ಬಸ್ ನಿಲ್ದಾಣ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನವೀಕರಣಗೊಂಡಿತು. ಅದಕ್ಕೆ ಬಿ.ಎಸ್.ಯಡಿಯೂರಪ್ಪ ಖಾಸಗಿ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ಯಡಿಯೂರಪ್ಪ ಈ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದರಿಂದ, ನೀತಿ ಸಂಹಿತಿ ಪರಿಪಾಲಿಸಲು ಅವರ ಹೆಸರನ್ನು ಮರೆ ಮಾಚಲಾಗುತ್ತಿದೆ.
ಬಿಜೆಪಿ ಅಭ್ಯರ್ಥಿ ನಿಗೂಢ : ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ತಕ್ಷಣ ಶಿಕಾರಿಪುರ ಕ್ಷೇತ್ರದಲ್ಲಿ ಯಡಿಯೂರಪ್ಪ ಎದುರಾಳಿ ಯಾರಿರಬಹದು ಎಂಬ ಕುತೂಹಲ ಜನರಲ್ಲಿತ್ತು. ಆದರೆ ಮೊದಲ ಪಟ್ಟಿಯಲ್ಲಿ ಯಡಿಯೂರಪ್ಪ ವಿರುದ್ಧ ಸೂಕ್ತ ಅಭ್ಯರ್ಥಿಯನ್ನು ಘೋಷಿಸಲು ಬಿಜೆಪಿ ವಿಫಲವಾಗಿದೆ.
ಶಿಕಾರಿಪುರ ಕ್ಷೇತ್ರದಲ್ಲಿ ಯಡಿಯೂರಪ್ಪ ಮಾಡಿದ ಅಭಿವೃದ್ಧಿ ಕಾರ್ಯಗಳೇ ಅವರ ಬೆನ್ನಿಗೆ ನಿಂತಿವೆ. ಹಾಗಾಗಿ ಅವರ ವಿರುದ್ಧ ಸ್ಪರ್ಧಿಸಲು ಅನೇಕಲು ಹಿಂದೇಟು ಹಾಕುತ್ತಾರೆ. ಸ್ಪರ್ಧಿಸಿದರೂ ಠೇವಣಿ ಕಳೆದುಕೊಳ್ಳುತ್ತೇವೆ ಎಂಬುದು ಅಭ್ಯರ್ಥಿಗಳಿಗೆ ತಿಳಿದಿದೆ.
ಜೆಡಿಎಸ್ ನಿಂದ ತಾಲೂಕಿನ ಮಟ್ಟಿಕೋಟೆ ಗ್ರಾಮದ ನಿವಾಸಿಯಾದ ಹೊಳೆಬಸಪ್ಪ ಬಳಿಗಾರ್ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಪದ್ಮನಾಭ ಭಟ್ ಹೆಸರು ಮುಂಚೂಣಿಯಲ್ಲಿದ್ದರೂ ಅವರು ಯಡಿಯೂರಪ್ಪ ವಿರುದ್ಧ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಅಭ್ಯರ್ಥಿಯಾರು ಎಂಬ ಎಲ್ಲರನ್ನು ಕಾಡುತ್ತಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications