ಕುತೂಹಲ ಕೆರಳಿಸಿದ ಬಿಎಸ್ ವೈ- ಕೆಜೆಪಿ ಪ್ರಣಾಳಿಕೆ
ಗುಲ್ಬರ್ಗ, ಏ.7: ಕೆಜೆಪಿ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ. 4ನೇ ಪಟ್ಟಿಯನ್ನು ಮುಂದಿನ ನಾಲ್ಕು ದಿನಗಳಲ್ಲಿ ಹಾಗೂ ಪಕ್ಷದ ಚುನಾವಣೆ ಪ್ರಣಾಳಿಕೆಯನ್ನು ಏ.10ರಂದು ಬಿಡುಗಡೆಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಘೋಷಿಸಿದ್ದಾರೆ.
ಕರ್ನಾಟಕ ಜನತಾ ಪಕ್ಷದ ಪ್ರಣಾಳಿಕೆ ಕೂತೂಹಲ ಕೆರಳಿಸಿದ್ದು, ಲಭ್ಯ ಮಾಹಿತಿ ಪ್ರಕಾರ 65 ವರ್ಷ ದಾಟಿದ ರೈತರಿಗೆ ಪಿಂಚಣಿ, ಎಲ್ಲ ಜಾತಿ ಜನಾಂಗದ ಮಧ್ಯಮ ವರ್ಗದವರಿಗೂ ತಾವು ಈ ಹಿಂದೆ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಮತ್ತಿತರೆ ಯೋಜನೆಗಳ ವಿಸ್ತರಣೆ, ಮಹಿಳಾ ಸಹಕಾರಿ ಬ್ಯಾಂಕುಗಳ ಸ್ಥಾಪನೆ, ಮುಂದಿನ ಐದು ವರ್ಷಗಳಲ್ಲಿ 224 ವಿಧಾನಸಭೆ ಕ್ಷೇತ್ರಗಳನ್ನು ಸರಿಸಮಾನವಾಗಿ ಅಭಿವೃದ್ಧಿಪಡಿಸುವುದು ಸೇರಿದಂತೆ ಅನೇಕ ಅಂಶಗಳು ಸೇರಿದೆ ಎನ್ನಲಾಗಿದೆ.

ಇದರ ಜೊತೆಗೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 20 ಅಂಶಗಳ ಕಾರ್ಯಕ್ರಮ, ಜನ ಪರ, ಬಡವರ ಪರ ಕಾರ್ಯಕ್ರಮಗಳು, ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಆರಸು ಅವರ ಸಿದ್ಧಾಂತಗಳನ್ನು ಕೆಜೆಪಿ ಅಳವಡಿಸಿಕೊಳ್ಳಲಿದೆ ಎಂದು ಪಕ್ಷದ ಉಪಾಧ್ಯಕ್ಷ ಹಾಗೂ ಪ್ರಣಾಳಿಕೆ ತಯಾರಿ ತಂಡದ ಸದಸ್ಯ ಕೆ.ಎಚ್ ಶ್ರೀನಿವಾಸ್ ಹೇಳಿದ್ದಾರೆ.
ಎಫ್ ಡಿಐಗೆ ವಿರೋಧ : ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರೈತರು, ಮಹಿಳೆಯರು, ಮಕ್ಕಳು, ಹಿಂದುಳಿದ ವರ್ಗ ಹಾಗೂ ಹಿರಿಯ ನಾಗರಿಕರಿಗೆ ಜಾರಿಗೆ ತಂದ ಯೋಜನೆಗಳು ಕೆಜೆಪಿ ಪ್ರಣಾಳಿಕೆಯಲ್ಲಿ ಸ್ಥಾನ ಪಡೆಯಲಿದೆ. ನಾಡಿನ ಕಲೆ, ಸಂಸ್ಕೃತಿ, ಭಾಷೆ ಉಳಿವಿಗಾಗಿ ಕೆಜೆಪಿ ಶ್ರಮಿಸಲಿದೆ. ಇದಕ್ಕಿಂತ ಮುಖ್ಯವಾಗಿ ರೀಟೈಲ್ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಐ)ಗೆ ಕೆಜೆಪಿ ವಿರೋಧ ಪ್ರಮುಖ ಅಂಶವಾಗಿದೆ. ಜಾಗತೀಕರಣದ ಹೆಸರಿನಲ್ಲಿ ಕಿರಾಣಿ ಅಂಗಡಿಗಳನ್ನು ಕೊಲ್ಲಲು ಬರುವುದಿಲ್ಲ ಎಂದು ಕೆಜೆಪಿ ಬಲವಾಗಿ ಹೇಳಿದೆ.
ಗುಲ್ಬರ್ಗಾದಲ್ಲಿ ಬಿಎಸ್ ವೈ ಭಾಷಣ ಮುಖ್ಯಾಂಶಗಳು:
* ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ರಾಜ್ಯ ಚುನಾವಣೆಯಲ್ಲಿ ಪ್ರಚಾರ ಕೈಗೊಂಡರೆ ಅದರಿಂದ ಆಯಾ ಪಕ್ಷಗಳಿಗೆ ಯಾವುದೇ ಲಾಭವಾಗದು.
* ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದ ಬಳಿಕ ಸಚಿವರಾದ ವಿ.ಸೋಮಣ್ಣ, ಮುರುಗೇಶ್ ನಿರಾಣಿ ಸೇರಿದಂತೆ ಹಲವು ಶಾಸಕರು ಕಣ್ಣೀರಿಡುವ ಪರಿಸ್ಥಿತಿ ಎದುರಾಗಲಿದೆ
* ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಹೊಸದಿಲ್ಲಿಗೆ ತೆರಳಿ ಪ್ರಾದೇಶಿಕ ಪಕ್ಷಗಳೊಂದಿಗೆ ಮಾತುಕತೆ ನಡೆಸಲಿದ್ದೇನೆ. ಕೇಂದ್ರದಲ್ಲಿ ಯಾವುದೇ ಸರಕಾರ ಪ್ರಾದೇಶಿಕ ಪಕ್ಷಗಳ ಬೆಂಬಲವಿಲ್ಲದೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ
* ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಊರು ಕೊಳ್ಳೆ ಹೊಡೆದ ಬಳಿಕ ಕಾವೇರಿ ನದಿ ನೀರಿನ ರಕ್ಷಣೆಗಾಗಿ ಈಗ ಹೊರಟಿದ್ದಾರೆ. ಪ್ರಧಾನಿಯಾಗಿದ್ದಾಗ ಕಾವೇರಿ ಸಮಸ್ಯೆ ನೆನಪಾಗಲಿಲ್ಲ ಏಕೆ?












Click it and Unblock the Notifications