ಒಂದು ಪಕ್ಷದ ಆಡಳಿತ ಉತ್ತಮ : ಶಿವಮೂರ್ತಿ ಶರಣರು

ಗುರುವಾರ ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್ ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ರಾಜಕಾರಣ ಮತ್ತು ಮಠಾಧೀಶರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶರಣರು, ಮತದಾರರು ಸ್ವಾರ್ಥ ಆಮಿಷಗಳಿಗೆ ಬಲಿಯಾಗಿ ಮತವನ್ನು ಮಾರಿಕೊಳ್ಳಬಾರದು ಎಂದು ಕರೆ ನೀಡಿದರು.
ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಜನಾದೇಶ ಲಭಿಸಿದರೆ, ರಾಜಕಾರಣ ನಡೆಸಲು ಅನುಕೂಲವಾಗುತ್ತದೆ. ಇದರಿಂದ ರಾಜ್ಯದ ಅಭಿವೃದ್ಧಿಯಾಗುತ್ತದೆ. ಜನರು ವಿಧಾನಸಭೆ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವಂತೆ ವಿವೇಚನೆಯಿಂದ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.
ಧರ್ಮ ಮತ್ತು ರಾಜಕಾರಣ ಎರಡು ದೇಶ ಕಟ್ಟುವ ಕಾಯಕದಲ್ಲಿ ತೊಡಗಿರುತ್ತವೆ. ಎರಡರ ನಡುವೆ ಸಮಾನ ಅಂತರ ಇರಬೇಕಾದ ಅಗತ್ಯವಿದೆ. ಸಮಾಜದ ಸಮಸ್ಯೆಗಳನ್ನು ಬಗೆಹರಿಸಿ ಮಠಗಳು ಮತ್ತು ರಾಜಕಾರಣಿಗಳು ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಮಠಗಳು ಪಕ್ಷಾತೀತವಾಗಬೇಕು : ಮಠಗಳು ಸಾಮಾಜಿಕವಾಗಿ ಕೆಲಸಗಳನ್ನು ಮಾಡಬೇಕು ಆದ್ದರಿಂದ ಅವುಗಳು ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಕೆಲಸ ಮಾಡಬೇಕು. ಈ ಕುರಿತು ಸಮಾನ ಮನಸ್ಕ ಮಠಾಧೀಶರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.
ಅನುದಾನ ಅನಿವಾರ್ಯವಲ್ಲ : ಸರ್ಕಾರಗಳು ಬಜೆಟ್ ನಲ್ಲಿ ನೀಡುವ ಕೋಟಿ-ಕೋಟಿ ರೂ.ಗಳ ಅನುದಾನ ಮಠಗಳಿಗೆ ಅನಿವಾರ್ಯವಲ್ಲ ಎಂದ ಶರಣರು, ಮಠಗಳು ಸರ್ಕಾರದ ನೆರವನ್ನು ಎಂದಿಗೂ ಅಪೇಕ್ಷಿಸಬಾರದು ಎಂದು ಹೇಳಿದರು
ರಾಜಕೀಯ ಉದ್ದೇಶಗಳಿಗಾಗಿ ಮಠಗಳನ್ನು ಬಳಕೆ ಮಾಡಿಕೊಳ್ಳುವ ಸರ್ಕಾರಗಳ ತಂತ್ರದಿಂದ ಮಠಗಳು ದೂರವಿರಬೇಕು. ಸರ್ಕಾರದ ಅನುದಾನ ಜನರಿಗೆ ಸೇರಿದ್ದು, ಅವುಗಳು ಸಮಾಜದ ಅಭಿವೃದ್ಧಿಗೆ ಉಪಯೋಗವಾಗಬೇಕು. ಮಠಗಳ ಖಜಾನೆಗೆ ಸೇರಬಾರದು ಎಂದು ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications