ಕೃಷ್ಣ ತಥಾಸ್ತು ಅಂದ್ರೇನೆ ಕಾಂಗ್ರೆಸ್ ಪಟ್ಟಿ ಬಿಡುಗಡೆ?

ಅತ್ಯಂತ ಆಶ್ಚರ್ಯಕರ ಸಂಗತಿಯಾದರೂ ಇದು ಸತ್ಯ. ಪಕ್ಷದ ಮೂಲಗಳ ಮಾಹಿತಿ ಪ್ರಕಾರ ರಾಜ್ಯದ 224 ಕ್ಷೇತ್ರಗಳ ಪಟ್ಟಿಗೆ ಕೃಷ್ಣರ ಒಪ್ಪಿಗೆ ಇದ್ದರೆ ಮಾತ್ರ ಸೋನಿಯಾ ಅಂತಿಮ ಮುದ್ರೆ ಒತ್ತುತ್ತಾರೆ. ಅಷ್ಟು ಜಬಾಬ್ದಾರಿಯನ್ನು ಎಸ್.ಎಂ.ಕೃಷ್ಣ ಹೆಗಲಿಗೆ ವಹಿಸಿ ಹೈ ಕಮಾಂಡ್ ನಾಯಕರು ನಿರಾಳರಾಗಿದ್ದಾರೆ.
ರಾಜ್ಯದ ಕಾಂಗ್ರೆಸ್ ನಾಯಕರು ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದರೂ, ಎಸ್.ಎಂ.ಕೃಷ್ಣ ದೆಹಲಿಗೆ ತೆರಳಿ ಪಟ್ಟಿ ನೋಡಿ ಒಪ್ಪಿಗೆ ನೀಡಿದರೆ ಮಾತ್ರ ಸೋನಿಯಾ ಅದನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದ್ದಾರೆ. ಅಪಾರ ರಾಜಕೀಯ ಅನುಭವ ಹೊಂದಿರುವ ಕೃಷ್ಣ ಅವರಿಗೆ ಸೋನಿಯಾ ಬಹಳ ದಿನಗಳ ಹಿಂದೆ ಇಂತಹ ಮಹತ್ವದ ಜವಾಬ್ದಾರಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೃಷ್ಣ ಜಪವೇಕೆ : ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಕೃಷ್ಣ, ರಾಜ್ಯದ ಪರಿಸ್ಥಿತಿಯನ್ನು ಸೋನಿಯಾ, ರಾಹುಲ್, ಮಧುಸೂದನ್ ಮಿಸ್ತ್ರೀ ಅವರಿಗಿಂತ ಚೆನ್ನಾಗಿ ಬಲ್ಲವರಾಗಿದ್ದಾರೆ. ಆದ್ದರಿಂದ ಚುನಾವಣೆಯ ಕಾರ್ಯತಂತ್ರದ ಕುರಿತ ಅಂತಿಮ ನಿರ್ಧಾರವನ್ನು ಕೃಷ್ಣ ಹೆಗಲಿಗೆ ವಹಿಸಲಾಗಿದೆ.
ರಾಜ್ಯದ ನಾಯಕರ ಕಿತ್ತಾಟ ನೋಡಿ ಬೇಸರಗೊಂಡಿರುವ ಹೈ ಕಮಾಂಡ್ ನಾಯಕರು ಕೃಷ್ಣರನ್ನು ಕರೆತಂದು ಪರಿಸ್ಥಿತಿ ಸರಿದೂಗಿಸಲು ಪ್ರಯತ್ನಿಸಿದ್ದಾರೆ ಎಂಬುದು ಸುಳ್ಳಲ್ಲ. ಕೃಷ್ಣ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಮತ್ತೊಮ್ಮೆ ರಾಜ್ಯದಲ್ಲಿ ಕೈ ಶಕ್ತಿ ಬಲಪಡಿಸುವ ಮುಂದಾಲೋಚನೆಯೂ ಇದೆ ಆದ್ದರಿಂದ ಕೃಷ್ಣ ಅವರಿಗೆ ಇಂತಕ ಕಠಿಣ ಕೆಲಸ ವಹಿಸಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರಮಟ್ಟದಲ್ಲಿ ಅತ್ಯಂತ ಪ್ರಭಾವ ಹೊಂದಿರುವ ರಾಜ್ಯದ ನಾಯಕರಲ್ಲಿ ಕೃಷ್ಣ ಮೊದಲಿಗರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಕೃಷ್ಣ ಅವರಿಗೆ ಅಭ್ಯರ್ಥಿಗಳ ಆಯ್ಕೆಯ ಜವಾಬ್ದಾರಿಯನ್ನು ಸೋನಿಯಾ ವಹಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಏರಲು ಬೇಕಾದ ಮ್ಯಾಜಿಕ್ ನಂ ಪಡೆಯಲು ಕೃಷ್ಣರ ಅನುಭವಿಲ್ಲದೆ ಸಾಧ್ಯವಿಲ್ಲ ಎಂಬುದು ರಾಷ್ಟ್ರೀಯ ನಾಯಕರಿಗೆ ಚೆನ್ನಾಗಿ ತಿಳಿದಿದೆ.
ವಿದೇಶಾಂಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕೃಷ್ಣ ಅವರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರೂ, ಇತ್ತೀಚೆಗೆ ಕೃಷ್ಣ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಅರ್ಧತಾಸಿಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದರು. ಆ ಸಂದರ್ಭದದಲ್ಲಿಯೇ ಕೃಷ್ಣರಿಗೆ ರಾಜ್ಯದ ಅಭ್ಯರ್ಥಿಗಳ ಜವಾಬ್ದಾರಿ ನೀಡಿ ಕಳುಹಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ನಿರ್ಧಾರದಿಂದ ರಾಜ್ಯ ರಾಜಕಾರಣದಲ್ಲಿ ಕೃಷ್ಣ ಅವರ ಪಾತ್ರವೇನು ಎಂಬ ಪ್ರಶ್ನೆಗೆ ಉತ್ತರ ದೊರಕಿದೆ. ಚುನಾವಣೆ ಪ್ರಚಾರದ ಸಮಯದಲ್ಲೂ ಕೃಷ್ಣ ಅವರನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಎಐಸಿಸಿ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications