ವಲಸಿಗರ ಸೇರ್ಪಡೆ ತೀರ್ಮಾನ : ರಾಹುಲ್ ಗಾಂಧಿ ಹೆಗಲಿಗೆ

ನವದೆಹಲಿಯಲ್ಲಿ ಗುರುವಾರ ರಾಹುಲ್ ಗಾಂಧಿ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯ ಸಭೆ ನಡೆಸಿದರು. ಸಭೆಯಲ್ಲಿ ಚುನಾವಣೆ ಘೋಷಣೆ ಆಗಿರುವುದರಿಂದ ಪಕ್ಷದಲ್ಲಿ ಯಾವುದೇ ಭಿನ್ನಮತ ಉಂಟಾಗಬಾರದು ಎಂದು ರಾಹುಲ್ ಗಾಂಧಿ ನಾಯಕರಿಗೆ ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಎಲ್ಲಾ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸಿ, ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಮಾತ್ರ ನಿಮ್ಮ ಗುರಿಯಾಗಿರಲಿ ಎಂದು ಪಕ್ಷ ಸಂಘಟನೆ ಬಗ್ಗೆ ಸಲಹೆ ನೀಡಿ ಕಳುಹಿಸಿದ್ದಾರೆ. ವಲಸಿಗರ ಸೇಪರ್ಡೆ ಬಗ್ಗೆ ರಾಹುಲ್ ಮೌನ ವಹಿಸಿದ್ದು, ವಲಸಿಗರ ಸೇರ್ಪಡೆಗೆ ಅನುಮತಿ ದೊರೆಯುವ ಸಂಭವ ಕಡಿಮೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಏಪ್ರಿಲ್ ಮೊದಲ ವಾರಕೈಪಟ್ಟಿ : ಏಪ್ರಿಲ್ ಮೊದಲವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹೇಳಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗಿನ ಸಭೆಯ ಬಳಿಕ ಮಾತನಾಡಿದ ಅವರು, ವಲಸಿಗರ ಸೇರ್ಪಡೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ರಾಹುಲ್ ಗಾಂಧಿ ಅವರ ತೀರ್ಮಾನವೇ ಅಂತಿಮವೆಂದು ಹೇಳಿದರು.
ನಾಲ್ವರು ಪಕ್ಷೇತರರ ಸೇರ್ಪಡೆಗೆ ಕಾಂಗ್ರೆಸ್ ಈಗಾಗಲೇ ಅಸ್ತು ಎಂದಿದೆ. ಶಾಸಕರಾದ ನರೇಂದ್ರಸ್ವಾಮಿ, ಶಿವರಾಜ ತಂಗಡಗಿ, ಸುಧಾಕರ್ ಮತ್ತು ವೆಂಕಟರಮಣಪ್ಪ ಈಗಾಗಲೇ ನವದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದು, ಟಿಕೆಟ್ ಹಿಡಿದೇ ಮರಳಿ ಬರುವ ಆಲೋಚನೆಯಲ್ಲಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಕಾಂಗ್ರೆಸ್ ಟಿಕೆಟ್ ಆಂಕಾಕ್ಷಿಗಳು ವಾಸ್ತವ್ಯ ಹೂಡಿದ್ದು, ರಾಜ್ಯ ನಾಯಕರ ಪ್ರಭಾವ ಬಳಸಿ ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ನ ಕೇಂದ್ರ ಚುನಾವಣೆ ಸಮಿತಿ ನಂತರ ಟಿಕೆಟ್ ಆಕಾಂಕ್ಷಿಗಳ ಅಂತಿಮ ಪಟ್ಟಿ ಹೊರಬೀಳುವುದು ಖಚಿತವಾಗಿದೆ.
ದೆಹಲಿಯಲ್ಲಿ ತೇಜಸ್ವಿನಿ : ಮಾಜಿ ಸಂಸದೆ ತೇಜಸ್ವಿನಿ ಶ್ರೀರಮೇಶ್ ನವದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ತೇಜಸ್ವಿನಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಟಿಕೆಟ್ ಸಿಗುವುದು ಖಾತ್ರಿ ಮಾಡಿಕೊಳ್ಳಲು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಪ್ರಯತ್ನ ಗುರುವಾರ ವಿಫಲವಾಗಿದೆ. ಶುಕ್ರವಾರ ರಾಹುಲ್ ಗಾಂಧಿ ಜೊತೆ ಚರ್ಚಿಸಿಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಟಿಕೆಟ್ ಆಕಾಂಕ್ಷಿಗಳಿಂದಾಗಿ ಕರ್ನಾಟಕ ಕಾಂಗ್ರೆಸ್ ರಾಜಕೀಯ ದೆಹಲಿಗೆ ಶಿಫ್ಟ್ ಆಗಿದೆ. ಸಚಿವ ಆನಂದ್ ಆಸ್ನೋಟಿಕರ್ ಸಹ ಗುರುವಾರ ರಾತ್ರಿ ದೆಹಲಿಗೆ ತೆರಳಿದ್ದಾರೆ. ಆಸ್ನೋಟಿಕರ್ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿತ್ತು. ಶುಕ್ರವಾರ ಹೈ ಕಮಾಮಡ್ ನಾಯಕರೊಂದಿಗೆ ಚರ್ಚಿಸಿ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.(ರಾಜ್ಯ ಚುನಾವಣಾ ವೇಳಾಪಟ್ಟಿ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications