ಮತ್ತೊಂದು 'ವಿದಾಯ ಭಾಷಣ' ಮಾಡಿದ ಶೋಭಾ

ಈ ಮಧ್ಯೆ, 'ವಿದ್ಯುತ್ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಯಾರನ್ನೂ ಸಚಿವ ಸಂಪುಟದಿಂದ ಕೈ ಬಿಡುವುದಿಲ್ಲ. ಯಾವ ಸಭೆಯಲ್ಲೂ ಇದರ ಬಗ್ಗೆ ಚಿಂತನೆ ಮಾಡಿಲ್ಲ' ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಬಾರಿ ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘವು ಹಮ್ಮಿಕೊಂಡಿದ್ದ 2013ರ ಡೈರಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಚಿವೆ ಶೋಭಾ ನಿನ್ನೆ ಮೇಲಿನಂತೆ ಹೇಳಿದ್ದಾರೆ. 'ಬಹುಶಃ ಇದೇ ನನ್ನ ಕೊನೆಯ ಕಾರ್ಯಕ್ರಮವಾಗಬಹುದು ಎಂದು ನಾನು ಭಾವಿಸುತ್ತೇನೆ' ಎಂದೇ ಮಾತಿಗಿಳಿದ ಇಂಧನ ಸಚಿವೆ ಶೋಭಾ ಕರಂದ್ಲಾಜೆ ತನ್ಮೂಲಕ ಬಿಜೆಪಿ ಸರ್ಕಾರದ ಸಚಿವ ಸಂಪುಟದಿಂದ ಹೊರ ಹೋಗುವ ಕಾಲ ಸನ್ನಿಹಿತವಾಗಿರುವುದರ ಪರೋಕ್ಷ ಸೂಚನೆ ನೀಡಿದರು.
'ತಮ್ಮ ಇಲಾಖೆಯ ವತಿಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮ ಸಚಿವೆಯಾಗಿ ಪಾಲ್ಗೊಳ್ಳುವ ನನ್ನ ಕೊನೆಯ ಕಾರ್ಯಕ್ರಮ ಆಗಬಹುದು ಎಂದು ನಾನು ಭಾವಿಸಿದ್ದೇನೆ' ಎಂದು ಸೂಚ್ಯವಾಗಿ ಹೇಳಿದರು.
ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದಾಗ, 'ಡೈರಿ ಪದೇ ಪದೇ ಬಿಡುಗಡೆ ಮಾಡಲು ಆಗುವುದಿಲ್ಲ. ಹಾಗಾಗಿ, ಇದು ಕೊನೆಯ ಕಾರ್ಯಕ್ರಮ ಆಗಬಹುದು ಎಂದು ಹೇಳಿದೆ ಅಷ್ಟೇ. ಹಾಗಂತ ಈ ಹೇಳಿಕೆಗೆ ಬೇರೆ ಅರ್ಥಗಳನ್ನು ಕಲ್ಪಿಸಬಾರದು' ಎಂದು ಸಮಜಾಯಿಷಿ ನೀಡಿದರು.
ಇದೇ ವೇಳೆ ಸಚಿವೆ ಶೋಭಾ ಅವರು 'ಈ ಬಾರಿಯ ಬೇಸಿಗೆಗೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗದು. ಮೇ ವರೆಗೂ ಜಲ ವಿದ್ಯುತ್ ಉತ್ಪಾದನೆ ಯಾವುದೇ ಅಡತಡೆ ಇಲ್ಲದೆ ಆಗಲಿದೆ. ರಾಯಚೂರು ಶಾಖೋತ್ಪನ್ನ ಘಟಕ, ಬಳ್ಳಾರಿ ಮತ್ತು ಉಡುಪಿ ವಿದ್ಯುತ್ ಘಟಕಗಳಿಂದ ಸಮರ್ಪಕ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹಾಗಾಗಿ, ಸಮಸ್ಯೆಯಾಗದು' ಎಂದು ಸ್ಪಷ್ಟಪಡಿಸಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್. ಸೆಲ್ವಕುಮಾರ್, ನಿಗಮದ ನಿರ್ದೇಶಕರಾದ ಡಾ. ಅದಿತಿ ರಾಜಾ, ಪ್ರತಾಪ್ ಕುಮಾರ್, ಡಾ. ಮುದ್ದುಮೋಹನ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications