ಯಾವುದೇ ಕ್ಷಣದಲ್ಲಿ ಚುನಾವಣೆ: ಶೋಭಾ ಮೇಡಂ

ಇತ್ತ ಯಡಿಯೂರಪ್ಪ ಅವರ ಪರಮಾಪ್ತೆ, ಕೆಜೆಪಿ ಜತೆ ಇನ್ನೂ ಗುರುತಿಸಿಕೊಳ್ಳದ ಬಿಜೆಪಿ ಸಚಿವೆ ಶೋಭಾ ಕರಂದ್ಲಾಜೆ ಅವರು 'ಯಾವುದೇ ಕ್ಷಣದಲ್ಲಿ ವಿಧಾನಸಭೆಗೆ ಚುನಾವಣೆ ಎದುರಾಗಬಹುದು' ಎಂಬ ಮುನ್ಸೂಚನೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಗುರುವಾರ ನಗರದಲ್ಲಿ ತಮ್ಮದೇ ಇಲಾಖೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶೋಭಾ ಮೇಡಂ, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಒಂದು ರೀತಿಯ 'ವಿದಾಯ ಭಾಷಣ' ಮಾಡಿದ್ದಾರೆ. ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರುಗಳ ಸಂಘವು ಹೊರತಂದಿರುವ 2013ನೇ ಸಾಲಿನ ಡೈರಿಯನ್ನು ಸಚಿವೆ ಶೋಭಾ ಕರಂದ್ಲಾಜೆ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
'ರಾಜಕೀಯ ಬದಲಾವಣೆ ನಮ್ಮ ಊಹೆಗೆ ನಿಲುಕದ್ದು. ಯಾವಾಗ ಬೇಕಾದರೂ ಸ್ಥಿತ್ಯಂತರ ಆಗಬಹುದು. ಸರಕಾರದ ಅವಧಿ ಮೇ ತನಕ ಇದ್ದರೂ ಅದಕ್ಕೂ ಮುನ್ನ ಚುನಾವಣೆ ಬರಬಹುದು' ಎಂದು ಭವಿಷ್ಯ ನುಡಿದ ಶೋಭಾ ಕರಂದ್ಲಾಜೆ ಅವರು ಇದ್ದಕ್ಕಿದ್ದಂತೆ '25 ತಿಂಗಳು ನನ್ನೊಂದಿಗೆ ಕೆಲಸ ಮಾಡಿದ ನಿಮ್ಮೆಲ್ಲರಿಗೂ ಈ ವೇದಿಕೆಯಿಂದಲೇ ಕೃತಜ್ಞತೆ ಸಲ್ಲಿಸುತ್ತೇನೆ' ಎನ್ನುತ್ತಾ ತೀವ್ರ ಭಾವುಕರಾದರು.
'ನಿಮಗೆ ಯಾವುದೇ ಪಕ್ಷದ ಬಗ್ಗೆ ಒಲವಿರಲಿ. ಯಾರನ್ನೋ ಓಲೈಸಲು (ಒಮ್ಮೆ ಮೇಲಿನ ಚಿತ್ರ ನೋಡಿ) ವಿದ್ಯುತ್ ಪೂರೈಕೆಯಲ್ಲಿ ತಾರತಮ್ಯ ಮಾಡಬೇಡಿ. ಎಲ್ಲರೂ ಒಂದೇ ಎಂಬ ಭಾವದಿಂದಲೂ ಕೆಲಸ ಮಾಡಿ' ಎಂದೂ ಉನ್ನತಾಧಿಕಾರಿಗಳಿಗೆ ಹಿತವಚನ ನೀಡಿದರು.












Click it and Unblock the Notifications